ಆ್ಯಪ್ನಗರ

ಮನೀಶ್ 28 ಬಾಲ್ ಫಿಫ್ಟಿ; ಬೆಂಗಳೂರು ಬ್ಲಾಸ್ಟರ್ಸ್ ಮಣಿಸಿದ ಬೆಳಗಾವಿ ಪ್ಯಾಂಥರ್ಸ್‌ಗೆ ಮೊದಲ ಗೆಲುವಿನ ಸಿಹಿ!

ಕರ್ನಾಟಕ ಪ್ರೀಮಿಯರ್ ಲೀಗ್‌ 2019ನೇ ಸಾಲಿನ ಟ್ವೆಂಟಿ-20 ಟೂರ್ನಿಯಲ್ಲಿ ನಾಯಕ ಮನೀಶ್ ಪಾಂಡೆ ಬಾರಿಸಿದ ಬಿರುಸಿನ ಅರ್ಧಶತಕದ ಬೆಂಬಲದಿಂದ ಬೆಳಗಾವಿ ಪ್ಯಾಂಥರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

Vijaya Karnataka Web 24 Aug 2019, 6:28 am
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ, ಮನೀಶ್ ಪಾಂಡೆ ಬಾರಿಸಿದ 28 ಬಾಲ್ ಫಿಫ್ಟಿ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Vijaya Karnataka Web manish-pandey


ಇದರೊಂದಿಗೆ ಕೆಪಿಎಲ್ 8ನೇ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಅಲ್ಲದೆ ಆಡಿರುವ ನಾಲ್ಕನೇ ಪಂದ್ಯದಲ್ಲಿ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನೊಂದೆಡೆ ಐದು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಗಳಿಸಿರುವ ಬೆಂಗಳೂರು ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ನಿಗಿದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಶರತ್ ಭರತ್ (32), ನಾಯಕ ರೊಂಗ್ಸೆನ್ ಜೋನಾಥನ್ (29) ಹಾಗೂ ನಿಕಿನ್ ಜೋಸ್ (21) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಬೆಂಬಲ ಸಿಗಲಿಲ್ಲ.

ಬೆಳಗಾವಿ ಪರ ದರ್ಶನ್ ಎಂಬಿ ಮೂರು ಹಾಗೂ ಜಹೂರ್ ಫಾರೂಕಿ ಮತ್ತು ರಿತೇಶ್ ಭಟ್ಕಳ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಬಳಿಕ ಗುರಿ ಬೆನ್ನಟ್ಟಿದ ಬೆಳಗಾವಿ ತಂಡಕ್ಕೆ ಆರಂಭದಲ್ಲೇ ಓಪನರ್‌ಗಳ ವಿಕೆಟ್ ನಷ್ಟವಾಗಿತ್ತು. 39 ರನ್ ಪೇರಿಸುವುದರೊಳಗೆ ರವಿಕುಮಾರ್ ಸಮರ್ಥ್ (5) ಹಾಗೂ ಡಿ ನೇಗಿ (18) ಪೆವಿಲಿಯನ್ ಸೇರಿಕೊಂಡಿದ್ದರು.

ಈ ಹಂತದಲ್ಲಿ ಅಭಿನವ್ ಮನೋಹರ್ ಜತೆ ಸೇರಿದ ನಾಯಕ ಮನೀಶ್ ಪಾಂಡೆ ಬಿರುಸಿನ ಆಟವಾಡುವ ಮೂಲಕ ತಂಡವನ್ನು ಗೆಲುವಿನ ಗುರಿ ದಾಟಿಸಿದರು. ನಾಯಕನ ಇನ್ನಿಂಗ್ಸ್ ಕಟ್ಟಿದ ಮನೀಶ್ ಕೇವಲ 28 ಎಸೆತಗಳಲ್ಲೇ ಫಿಫ್ಟಿ ಸಾಧನೆ ಮಾಡಿದರು.

ಅಲ್ಲದೆ ಅಭಿನವ್ ಜತೆಗೆ ಮುರಿಯದ ಮೂರನೇ ವಿಕೆಟ್‌ಗೆ 76 ರನ್‌ಗಳ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದರು. ಕಳೆದ ಪಂದ್ಯದಲ್ಲಷ್ಟೇ ಮನೀಶ್ ಭರ್ಜರಿ ಶತಕ ಬಾರಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ಮೂಲಕ 11.5 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗೆಲುವು ಬಾರಿಸಿತು. 30 ಎಸೆತಗಳನ್ನು ಎದುರಿಸಿದ ಪಾಂಡೆ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 58 ರನ್ ಗಳಿಸಿದರು. ಹಾಗೆಯೇ ಅಭಿನವ್ 17 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳಿಂದ 22 ರನ್ ಗಳಿಸಿ ಅಜೇಯರಾಗುಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌