ಡಬ್ಲಿನ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11ನೇ ಆವೃತ್ತಿಯಲ್ಲಿ ಅಬ್ಬರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ತಮಿಳುನಾಡಿನ ದಿನೇಶ್ ಕಾರ್ತಿಕ್ ಅವರಿಗೆ ಐರ್ಲೆಂಡ್ನ ಡಬ್ಲಿನ್ನಲ್ಲಿ ದೊಡ್ಡ ಶಾಕ್ ಎದುರಾಗಿದೆ. ಆತಿಥೇಯ ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆ ಮಾಡಲಾದ ಭಾರತದ ಆಡುವ 11ರ ಬಳಗದಿಂದ ಈ ಇಬ್ಬರೂ ಆಟಗಾರರನ್ನು ಹೊರಗಿಡಲಾಗಿದೆ.
ಐಪಿಎಲ್-11ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಅದ್ಭುತ ಆಟ ಪ್ರದರ್ಶಿಸಿದ್ದ ರಾಹುಲ್ 14 ಪಂದ್ಯಗಳಲ್ಲಿ 6 ಅರ್ಧಶತಕಗಳ ಸಹಿತ 54.91ರ ಸರಾಸರಿಯಲ್ಲಿ 659 ರನ್ ಗಳಿಸಿದ್ದರು. ಇದೇ ವೇಳೆ ಕೋಲ್ಕೊತಾ ನೈಟ್ ರೈಡರ್ಸ್ ತಂಡದ ನಾಯಕತ್ವ ವಹಿಸಿದ್ದ ದಿನೇಶ್ ಕಾರ್ತಿಕ್, 16 ಪಂದ್ಯಗಳಿಂದ 49.80 ಸರಾಸರಿಯಲ್ಲಿ 498 ರನ್ ಕಲೆ ಹಾಕಿದ್ದರು.
ಐಪಿಎಲ್ಗೂ ಮೊದಲು ಶ್ರೀಲಂಕಾದಲ್ಲಿ ನಡೆದ ನಿದಾಹಸ್ ಟ್ರೋಫಿ ಟಿ20 ಟೂರ್ನಿಯ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ಗಳು ಬೇಕಿದ್ದಾಗ ಸಿಕ್ಸರ್ ಸಿಡಿಸಿದ್ದ ದಿನೇಶ್ ಕಾರ್ತಿಕ್ ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದ್ದರು. ಭಾರತ ಪರ ತಮ್ಮ ಕೊನೆಯ ಟಿ20 ಪಂದ್ಯದಲ್ಲಿ ವೀರೋಚಿತ ಆಟವಾಡಿದ್ದ ಕಾರ್ತಿಕ್ಗೆ ಈಗ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.
ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿರುವುದಕ್ಕೆ ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಟ್ವಿಟರ್ನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.