ಆ್ಯಪ್ನಗರ

NZ vs IND: ಟೀಮ್ ಇಂಡಿಯಾ ಬ್ಯಾಟರ್‌ 'ಎಬಿ ಡಿ'ವಿಲಿಯರ್ಸ್‌'ಗೆ ಸರಿಸಾಟಿ ಎಂದ ರವಿ ಶಾಸ್ತ್ರಿ!

New Zealand vs India ODI Series 2022: ಟೀಮ್ ಇಂಡಿಯಾ ಸ್ಟಾರ್‌ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌, 2022ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. 2022ರಲ್ಲಿ ಎರಡು ಟಿ20-ಐ ಶತಕಗಳನ್ನು ಬಾರಿಸಿದ ಸೂರ್ಯಕುಮಾರ್‌, ತಮ್ಮ 360 ಡಿಗ್ರಿ ಬ್ಯಾಟಿಂಗ್‌ ಶೈಲಿಯ ಮೂಲಕ ಎದುರಾಳಿ ಬೌಲರ್‌ಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಭಾರತೀಯ ಬ್ಯಾಟರ್‌ನ ಎಬಿ ಡಿ'ವಿಲಿಯರ್ಸ್‌ಗೆ ಹೋಲಿಕೆ ಮಾಡಿದ್ದಾರೆ.

Authored byವಿಜೇತ್ ಕುಮಾರ್ | Vijaya Karnataka Web 28 Nov 2022, 8:28 pm

ಹೈಲೈಟ್ಸ್‌:

  • ನ್ಯೂಜಿಲೆಂಡ್‌ ಪ್ರವಾಸದಲ್ಲಿ ಆತಿಥೇಯರ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾ.
  • ಹ್ಯಾಮಿಲ್ಟನ್‌ನಲ್ಲಿ ನಡೆ ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್‌ ಬಿರುಸಿನ 34 ರನ್‌ಗಳನ್ನು ಸಿಡಿಸಿದ್ದರು.
  • 2022ರ ಸಾಲಿನಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಹೆಚ್ಚು ರನ್‌ ಬಾರಿಸಿ ಅಬ್ಬರಿಸಿರುವ ಬಲಗೈ ಬ್ಯಾಟ್ಸ್‌ಮನ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web India vs New Zealand
ಟೀಮ್ ಇಂಡಿಯಾ ಬ್ಯಾಟರ್‌ನ ಸಾಮರ್ಥ್ಯ ಗುಣಗಾನ ಮಾಡಿದ ರವಿ ಶಾಸ್ತ್ರಿ (ಚಿತ್ರ: ಟಿಒಐ).
ಬೆಂಗಳೂರು: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ 'ಮಿಸ್ಟರ್‌ 360' ಖ್ಯಾತಿಯ ಸ್ಪೋಟಕ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ದಿನಗಳಲ್ಲಿ ಆಡುತ್ತಿದ್ದ ಆಟವನ್ನು ಈಗ ಟೀಮ್ ಇಂಡಿಯಾ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಆಡುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಾರೆ.
2021ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ 32 ವರ್ಷದ ಬಲಗೈ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌, ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೃತ್ತಿಬದುಕಿನ ಶ್ರೇಷ್ಠ ಲಯದಲ್ಲಿದ್ದು 2022ರ ಸಾಲಿನಲ್ಲಿ ಆಡಿದ 31 ಟಿ20-ಐ ಪಂದ್ಯಗಳಿಂದ ಒಟ್ಟಾರೆ 1161 ರನ್‌ ಬಾರಿಸಿದ್ದಾರೆ. ಎರಡು ಶತಕ ಕೂಡ ಬಾರಿಸಿರುವ ಸೂರ್ಯ, 2022ರಲ್ಲಿ ವಿಶ್ವ ದಾಖಲೆ 68 ಟಿ20-ಐ ಸಿಕ್ಸರ್‌ಗಳನ್ನೂ ಬಾರಿಸಿದ್ದಾರೆ.

ಬಲಗೈ ಬ್ಯಾಟರ್‌ ಸದ್ಯ ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 11 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದ್ದ ಸೂರ್ಯ, ಎರಡನೇ ಪಂದ್ಯದಲ್ಲಿ ಎದುರಿಸಿದ 25 ಎಸೆತಗಳಲ್ಲಿ ಅಜೇಯ 34 ರನ್‌ ಬಾರಿಸಿದ್ದರು. ಈ ಪಂದ್ಯದ ಬಳಿಕ ಮಾತನಾಡಿರುವ ರವಿ ಶಾಸ್ತ್ರಿ, ಭಾರತೀಯ ಆಟಗಾರನ ಬ್ಯಾಟಿಂಗ್‌ ಶೈಲಿಯನ್ನು ಡಿ'ವಿಲಿಯರ್ಸ್‌ಗೆ ಹೋಲಿಕೆ ಮಾಡಿದ್ದಾರೆ.

IND vs NZ: 'ಚೆನ್ನಾಗಿ ಆಡಿದ್ರೂ ಸಂಜುಗೆ ಬೆಂಚ್‌ ಕಾಯಿಸಿದ್ದೀರಿ'-ಟೀಮ್‌ ಇಂಡಿಯಾ ವಿರುದ್ಧ ವಸೀಮ್‌ ಜಾಫರ್‌ ಆಕ್ರೋಶ!
"ಸೂರ್ಯಕುಮಾರ್‌ ಯಾದವರ್‌ ಸದ್ಯ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಟಿ20 ಕ್ರಿಕೆಟ್‌ನಲ್ಲಿ ಅಂತೂ ಆತ ಅತ್ಯುತ್ತಮ ಬ್ಯಾಟ್ಸ್‌ಮನ್‌. ಕ್ರೀಡಾಂಗಣದ ಎಲ್ಲ ಮೂಲೆಗಳಿಗೂ ಚೆಂಡನ್ನು ಬಡಿದಟ್ಟುವ ಸಾಮರ್ಥ್ಯ ಹೊಂದಿದ್ದಾರೆ. ಆತ ತನ್ನ ಶ್ರೇಷ್ಠ ಆಟವಾಡುವ ಸಮಯದಲ್ಲಿ 30-40 ಎಸೆತಗಳನ್ನು ಎದುರಿಸಿದರೆ ಖಂಡಿತಾ ಪಂದ್ಯ ಗೆದ್ದುಕೊಡುತ್ತಾರೆ. ಏಕೆಂದರೆ ಆತ ಆಡುವ ಹೊಡೆತಗಳು ಎದುರಾಳಿ ತಂಡದ ಆತ್ಮವಿಶ್ವಾಸವನ್ನು ಹುದುಗಿಸಿಬಿಡುತ್ತದೆ," ಎಂದು ಹೇಳಿದ್ದಾರೆ.

"ಎಬಿ ಡಿ'ವಿಲಿಯರ್ಸ್‌ ತಮ್ಮ ಶ್ರೇಷ್ಠ ಲಯದಲ್ಲಿ ಇದ್ದಾಗ ಆಡುತ್ತಿದ್ದ ಆಟವನ್ನು ಸೂರ್ಯಕುಮಾರ್‌ ಈಗ ಆಡುತ್ತಿದ್ದಾರೆ. ಎಬಿ ಡಿ'ವಿಲಿಯರ್ಸ್‌ ತಮ್ಮ ಸ್ಪೋಟಕ ಆಟವಾಡಿದ ಸಂದರ್ಭದಲ್ಲಿ ಎದುರಾಳಿ ತಂಡ ಮಂಕು ಬಡಿದಂತೆ ಕಾಣಿಸುತ್ತದೆ. ಈಗ ಸೂರ್ಯಕುಮಾರ್‌ ಕೂಡ ಅಂಥದ್ದೇ ಆಟವಾಡುತ್ತಿದ್ದಾರೆ," ಎಂದಿದ್ದಾರೆ.

"ಸೂರ್ಯಕುಮಾರ್‌ ಆಟದ ಅಂಕಿ ಅಂಶಗಳನ್ನು ಒಮ್ಮೆ ಗಮನಿಸಿ. ಅವರಿಂದ ನಾವು ಈ ರೀತಿಯ ಇನಿಂಗ್ಸ್‌ಗಳನ್ನು ಎದುರು ನೋಡಬಹುದು. ಒಮ್ಮೆ ಆತ 15-20 ರನ್‌ಗಳ ಗಡಿ ದಾಟಿದ ಎಂದಾದರೆ, ಬಳಿಕ ಅದರ ಸದ್ಬಳಕೆ ಮಾಡಿ ಪಂದ್ಯ ಗೆದ್ದುಕೊಡುವಂತಹ ಆಟವಾಡುತ್ತಾರೆ. ಆರಂಭದಿಂದಲೇ ಹೊಡಿ ಬಡಿ ಆಟವಾಡುವ ಸಾಮರ್ಥ್ಯ ಆತನಲ್ಲಿದೆ. ಬ್ಯಾಟ್ಸ್‌ಮನ್‌ ಎಂದಮೇಲೆ ವೈಫಲ್ಯ ಸಹಜ. ಆದರೆ, ಆತನ ಕಮ್‌ಬ್ಯಾಕ್‌ ಸದಾ ಭರ್ಜರಿಯಾಗಿರುತ್ತದೆ," ಎಂದು ಶಾಸ್ತ್ರಿ ಗುಣಗಾನ ಮಾಡಿದ್ದಾರೆ.

IND vs NZ: ಸಂಜು ಸ್ಯಾಮ್ಸನ್‌ರನ್ನು ಕೈಬಿಡಲು ಇದೇ ಕಾರಣ ಎಂದ ಶಿಖರ್‌ ಧವನ್!
3ನೇ ಒಡಿಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌
01. ಶಿಖರ್‌ ಧವನ್‌ (ನಾಯಕ/ ಓಪನರ್‌)
02. ಶುಭಮನ್‌ ಗಿಲ್‌ (ಓಪನರ್‌)
03. ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್‌)
04. ಸೂರ್ಯಕುಮಾರ್‌ ಯಾದವ್‌ (ಬ್ಯಾಟ್ಸ್‌ಮನ್‌)
05. ರಿಷಭ್ ಪಂತ್‌ (ವಿಕೆಟ್‌ಕೀಪರ್‌/ ಬ್ಯಾಟ್ಸ್‌ಮನ್‌)
06. ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)
07. ದೀಪಕ್‌ ಹೂಡ (ಆಲ್‌ರೌಂಡರ್‌)
08. ದೀಪಕ್‌ ಚಹರ್‌ (ಆಲ್‌ರೌಂಡರ್‌)
09. ಉಮ್ರಾನ್ ಮಲಿಕ್‌ (ಬಲಗೈ ವೇಗಿ)
10. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌)
11. ಅರ್ಷದೀಪ್‌ ಸಿಂಗ್ (ಎಡಗೈ ವೇಗಿ)
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌