ಆ್ಯಪ್ನಗರ

ಪಾಕಿಸ್ತಾನ ಆಟಗಾರರಿಗೆ ಬೆಂಡೆತ್ತಿದ ಅಭಿಮಾನಿಗಳು

ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ ತಂಡವನ್ನು ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಮನಸೋಇಚ್ಚೆ ಟೀಕಿಸಿದ್ದು, ಆಟಗಾರರ ಕಳಪೆ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ಆಟಗಾರರು ತಂಡದ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕ್‌ ಮಾಧ್ಯಮಗಳು ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂದು ವರದಿ ಮಾಡಿದೆ.

Vijaya Karnataka 18 Jun 2019, 5:00 am
ಹೊಸದಿಲ್ಲಿ: ಭಾನುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕಿಸ್ತಾನ ತಂಡವನ್ನು ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಮನಸೋಇಚ್ಚೆ ಟೀಕಿಸಿದ್ದು, ಆಟಗಾರರ ಕಳಪೆ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮಾಜಿ ಆಟಗಾರರು ತಂಡದ ವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕ್‌ ಮಾಧ್ಯಮಗಳು ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂದು ವರದಿ ಮಾಡಿದೆ.
Vijaya Karnataka Web pak sarf


ಏತನ್ಮಧ್ಯೆ, ಭಾರತದ ವಿಕ್ರಮವನ್ನು ಕೇಂದ್ರ ಸಚಿವರು ಸೇರಿದಂತೆ ಭಾರತೀಯರೆಲ್ಲರೂ ಶ್ಲಾಘಿಸಿದ್ದಾರೆ. ಈ ಗೆಲುವನ್ನು ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ಎಂದಿದ್ದಾರೆ. ವಿರಾಟ್‌ ನೇತೃತ್ವದ ಟೀಮ್‌ ಇಂಡಿಯಾದ ಆಟವನ್ನು ಇಂಗ್ಲೆಂಡ್‌ನ ಮಾಧ್ಯಮಗಳೂ ಹೊಗಳಿವೆ. ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಏಳು ಬಾರಿ ಗೆದ್ದ ಭಾರತ ತಂಡಕ್ಕೆ ಐಸಿಸಿ ಕೂಡ ಶುಭಾಶಯ ಕೋರಿದೆ.

ಬಿರಿಯಾನಿ, ಫಿಜ್ಜಾ: ಪಾಕ್‌ನ ಆಟದ ಪರಿಗೆ ಬೇಸತ್ತ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟ್ರೋಲ್‌ ಮಾಡಿದ್ದಾರೆ. ಪಂದ್ಯ ನೋಡಿ ವಾಪಸಾಗುತ್ತಿದ್ದ ಪಾಕ್‌ ಕ್ರಿಕೆಟ್‌ ಅಭಿಮಾನಿಯೊಬ್ಬ ''ನಿನ್ನೆ ರಾತ್ರಿ ಫಿಜ್ಜಾ ತಿಂದು ಮಲಗಿದರೆ ಇವತ್ತು ಹೇಗೆ ಚೆನ್ನಾಗಿ ಆಡಲು ಸಾಧ್ಯ,'' ಎಂದು ಪ್ರಶ್ನಿಸಿರುವ ವಿಡಿಯೋವೊಂದು ಪಾಕಿಸ್ತಾನದಲ್ಲಿ ವೈರಲ್‌ ಆಗಿದೆ.

ಇನ್ನೂ ಕೆಲವು ಅಭಿಮಾನಿಗಳು ''ಹೊಟ್ಟೆ ತುಂಬಾ ಬಿರಿಯಾನಿ ತಿಂದು ಮೈದಾನಕ್ಕೆ ಇಳಿದಿದ್ದ ಪಾಕ್‌ ಆಟಗಾರರಲ್ಲಿ ಚೈತನ್ಯವೇ ಇರಲಿಲ್ಲ,'' ಎಂದು ಟೀಕಿಸಿದ್ದಾರೆ.

ಕಪ್ರ್ಯೂ ಮೀರಿದರು: ಭಾರತದ ವಿರುದ್ಧದ ಪಂದ್ಯಕ್ಕೆ ಮೊದಲು ಹೋಟೆಲ್‌ ಬಿಟ್ಟು ಹೊರಗೆ ಹೋಗುವಂತಿಲ್ಲ ಎನ್ನುವ ನಿಯಮವನ್ನು ಪಿಸಿಬಿ ಹೇರಿತ್ತು. ಇದಕ್ಕೆ 'ಕಫ್ರ್ಯೂ ಟೈಮ್‌' ಎಂದು ಕರೆದಿದ್ದರು. ಆದರೆ ಈ ಶಿಸ್ತನ್ನು ತಂಡದ ಆಟಗಾರರು ಪಾಲಿಸುತ್ತಿರಲಿಲ್ಲ. ಕಂಡಕಂಡಲ್ಲಿ ತಿರುತ್ತಿದ್ದರು ಎಂದು ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಪಾಕ್‌ ಅಭಿಮಾನಿಗಳು ಕುಟುಕಿದ್ದಾರೆ.

ಮಾಜಿಗಳ ಆಕ್ಷೇಪ: ಪಾಕ್‌ ತಂಡದ ಆಟಕ್ಕೆ ಬೇಸೆತ್ತ ಮಾಜಿ ನಾಯಕ ವಾಸಿಂ ಅಕ್ರಂ ''ವಿಶ್ವಕಪ್‌ ಆಡಲು ಆಯ್ಕೆ ಮಾಡಿರುವ ತಂಡವೇ ಸರಿಯಿಲ್ಲ,'' ಎಂದು ಅಭಿಪ್ರಾಯಪಟ್ಟಿದ್ದಾರೆ. ''ಪಾಕಿಸ್ತಾನ ತಂಡ ಪೂರ್ವ ತಯಾರಿ ಇಲ್ಲದೆ ಮೈದಾನಕ್ಕೆ ಇಳಿಯುತ್ತಿದೆ,'' ಎಂದು ದೂರಿದ್ದಾರೆ.

ಮಾಜಿ ವೇಗಿ ಸಿಕಂದರ್‌ ಭಕ್ತ್‌ ''ಪಾಕಿಸ್ತಾನ ತಂಡದ ಆಟಗಾರರ ಸಂಭಾವನೆ ಕಡಿತಗೊಳಿಸಿ,'' ಎಂದು ಒತ್ತಾಯಿಸಿದ್ದಾರೆ.

ಮಾಜಿ ಆಟಗಾರ ಮೊಹಮ್ಮದ್‌ ಯೂಸುಫ್‌ ''ಪಾಕಿಸ್ತಾನ ತಂಡದ ಆಂಗಿಕ ವರ್ತನೆ ಆಟಕ್ಕೆ ಪೂರಕವಾಗಿಲ್ಲ,'' ಎಂದು ಹೇಳಿದ್ದಾರೆ.

ಮಾಜಿ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ''ಸೋಲಿಗೆ ಕೋಚ್‌ ಹಾಗೂ ನಾಯಕ ಸರ್ಫರಾಜ್‌ ಅಹಮದ್‌ ಕಾರಣ'' ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಈ 'ಸೊನ್ನೆ ಸುತ್ತಿದ' ಶೋಯಿಬ್‌ ಮಲಿಕ್‌ಗೆ ನಿವೃತ್ತಿ ಘೋಷಿಸುವಂತೆ ಹಲವು ಹಿರಿಯ ಆಟಗಾರರು ಸಲಹೆ ನೀಡಿದ್ದಾರೆ.


ಮಿದುಳಿಲ್ಲದ ನಾಯಕ

ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹಮದ್‌ ಅವರನ್ನು 'ಮೆದುಳಿಲ್ಲದ ನಾಯಕ' ಎಂದು ಮಾಜಿ ಕ್ರಿಕೆಟಿಗ ಶೋಯಿಬ್‌ ಅಖ್ತರ್‌ ಜರೆದಿದ್ದಾರೆ.

''ದುರ್ಬಲ ಆಟಗಾರರನ್ನು ಹೊಂದಿರುವ ಪಾಕಿಸ್ತಾನ ತಂಡದಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಲು ಸಾಧ್ಯವಿರಲಿಲ್ಲ. ಆದರೆ, ನಾಯಕ ಸರ್ಫರಾಜ್‌ ಮಾತ್ರ ಇದ್ದ ಅವಕಾಶವನ್ನೂ ಕಳೆದುಕೊಂಡಿದ್ದಾರೆ,'' ಎಂದಿದ್ದಾರೆ.

ನಾನು ಪಾಕಿಸ್ತಾನ ಕೋಚ್‌ ಅಲ್ಲ

ಕಳಪೆ ಆಟವಾಡಿದ ಪಾಕಿಸ್ತಾನ ತಂಡಕ್ಕೆ ನೀವು ಏನು ಹೇಳಲು ಬಯಸುವಿರಿ... ಇದು ಪಾಕಿಸ್ತಾನದ ಪತ್ರಕರ್ತರೊಬ್ಬರು, ಗೆಲುವಿನ ರೂವಾರಿ ರೋಹಿತ್‌ ಶರ್ಮಾಗೆ ಕೇಳಿದ ಪ್ರಶ್ನೆ. ಇದಕ್ಕೆ ರೋಹಿತ್‌ ನೀಡಿದ ಉತ್ತರ ಹೀಗಿದೆ ''ನಾನು ಪಾಕಿಸ್ತಾನ ತಂಡದ ಕೋಚ್‌ ಆಗಿ ಆಯ್ಕೆಯಾದ ಬಳಿಕ ಖಂಡಿತವಾಗಿಯೂ ಹೇಳಬಲ್ಲೆ. ಈಗ ಸಲಹೆ ನೀಡಲು ಸಾಧ್ಯವಿಲ್ಲ''.

ಜನಮನಗಣ ಹಾಡಿದ ಪಾಕ್‌ ಅಭಿಮಾನಿ: ಪಂದ್ಯ ಆರಂಭಕ್ಕೆ ಮೊದಲ ಪಾಕ್‌ ಅಭಿಮಾನಿಗಳಿಬ್ಬರು ಸ್ಟೇಡಿಯಂನಲ್ಲಿ ಜನಮನಗಣ ಹಾಡಿ ನೆರೆದವರ ಅಭಿನಂದನೆಗೆ ಪಾತ್ರರಾದರು. ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪಾಕಿಸ್ತಾನದ ಧ್ವಜ ಹಿಡಿದಿದ್ದ ಅಭಿಮಾನಿಗಳು ತಾವೂ ಗುನುಗಲು ಆರಂಭಿಸಿದ್ದರು. ಗೀತೆ ಮುಕ್ತಾಯವಾದ ಬಳಿಕ ಸ್ಥಳದಲ್ಲಿದ್ದ ಇತರರು ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದರು.

ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌: ಪಾಕಿಸ್ತಾನ ತಂಡದ ವಿರುದ್ಧದ ಗೆಲವು ಮತ್ತೊಂದು 'ಸರ್ಜಿಕಲ್‌ ಸ್ಟ್ರೈಕ್‌' ಎಂದು ಕೇಂದ್ರ ಗೃಹಮಂತ್ರಿ ಅಮಿತ್‌ಶಾ ಬಣ್ಣಿಸಿದ್ದಾರೆ. ಪಂದ್ಯ ಗೆದ್ದ ಭಾರತ ತಂಡದ ಆಟಗಾರರಿಗೆ ಅಭಿನಂದನೆ ಸೂಚಿಸಿದ ಅವರು ''ಈ ಗೆಲುವಿನಿಂದ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತಾಗಿದೆ,'' ಎಂದಿದ್ದಾರೆ.

ಇದೇ ವೇಳೆ ಮಾಜಿ ಸಚಿವ ರಾಜನಾಥ್‌ ಸಿಂಗ್‌, ಕ್ರೀಡಾ ಸಚಿವ ಕಿರಣ್‌ ರಿಜಿಜು, ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

ಪಾಕ್‌ ಮಾಧ್ಯಗಳು: ಪಾಕ್‌ ಆಟವನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡ ಟೀಕಿಸಿವೆ. 'ಸಮಾ' ಪತ್ರಿಕೆ ''ಸೋಲಿನ ಬಳಿಕ ನಾಯಕ ಸರ್ಫರಾಜ್‌ ಅಹಮದ್‌ ಹಾಗೂ ಉಳಿದ ಆಟಗಾರರು ಡ್ರೆಸ್ಸಿಂಗ್‌ ರೂಂನಲ್ಲಿ ಜಗಳವಾಡಿದ್ದಾರೆ,'' ಎಂದು ಬರೆದಿದೆ.

'ದುನಿಯಾ' ಪತ್ರಿಕೆಯು ''ಪಾಕ್‌ ಕ್ರಿಕೆಟ್‌ ತಂಡದೊಳಗೆ ಹಲವು ಗುಂಪುಗಳಿವೆ,'' ಎಂದು ಹೇಳಿದೆ.

ಮೀಮ್‌, ಟ್ರೋಲ್‌ಗಳು: ಪಾಕಿಸ್ತಾನದ ವಿರುದ್ಧದ ಜಯಭೇರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್‌ಗಳು ಹಾಗೂ ಟ್ರೋಲ್‌ಗಳು ಸೃಷ್ಟಿಯಾಗಿವೆ. ಮಳೆ, ಸರ್ಫರಾಜ್‌ ಆಕಳಿಕೆ, ಶೋಯಿಬ್‌ ಸೊನ್ನೆ, ಪಾಕ್‌ ಪ್ರಧಾನಿಯ ಟ್ವೀಟ್‌, ಕಬ್ಬಿಣದ ಪಂಜರದೊಳಗಿನ ಟಿವಿ, ರೋಹಿತ್‌ ಕಾಲಿಗೆ ಬಿದ್ದ ಶೋಯಿಬ್‌, ಸರ್ಜಿಕಲ್‌ ಸ್ಟ್ರೈಕ್‌, ಪಾಕಿಸ್ತಾನದ ಫೀಲ್ಡಿಂಗ್‌ ಮತ್ತಿತರ ಸಂಗತಿಗಳನ್ನು ಇಟ್ಟುಕೊಂಡು ಟ್ರೋಲ್‌ ಹಾಗೂ ಮೀಮ್‌ಗಳನ್ನು ಸೃಷ್ಟಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌