ಆ್ಯಪ್ನಗರ

ಆಯ್ಕೆ ಸಭೆಗೆ ಕಾರ್ಯದರ್ಶಿಗೆ ಪ್ರವೇಶವಿಲ್ಲ

ತಂಡಗಳ ಆಯ್ಕೆ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಪಾಲ್ಗೊಳ್ಳುವಂತಿಲ್ಲ ಎಂದು, ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಆಡಳಿತಾತ್ಮಕ ಸಮಿತಿ(ಸಿಒಎ) ಗುರುವಾರ ನಿರ್ದೇಶನವೊಂದನ್ನು ಹೊರಡಿಸಿದೆ.

Vijaya Karnataka 19 Jul 2019, 5:00 am
ಹೊಸದಿಲ್ಲಿ: ತಂಡಗಳ ಆಯ್ಕೆ ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಪಾಲ್ಗೊಳ್ಳುವಂತಿಲ್ಲ ಎಂದು, ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಆಡಳಿತಾತ್ಮಕ ಸಮಿತಿ(ಸಿಒಎ) ಗುರುವಾರ ನಿರ್ದೇಶನವೊಂದನ್ನು ಹೊರಡಿಸಿದೆ.
Vijaya Karnataka Web cricket center1


ಸೆ. 3ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೆ ತಂಡದ ಆಯ್ಕೆಗೆ ಸಭೆ ಸೇರುವ ಮುನ್ನಾ ದಿನ ಈ ನಿರ್ದೇಶನ ಜಾರಿಯಾಗಿದ್ದು, ಬಿಸಿಸಿಐನ ಆಡಳಿತ ಯಂತ್ರದೊಳಗೆ ತಲ್ಲಣ ಉಂಟಾಗಿದೆ.

ಎಂಎಸ್‌ಕೆ ಪ್ರಸಾದ್‌ ಅಧ್ಯಕ್ಷತೆಯ ಐದು ಮಂದಿ ಸದಸ್ಯರಿರುವ ಸಮಿತಿಯು ಇದುವರೆಗೆ ತಂಡವನ್ನು ಆಯ್ಕೆ ಮಾಡುತ್ತಿದ್ದರೂ, ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿಯ ಅನುಮತಿಯೊಂದಿಗೆ ನಡೆಯುತ್ತಿತ್ತು. ಆದರೆ, ಗುರುವಾರ ಹೊರಡಿಸಿದ ನಿರ್ದೇಶನದ ಪ್ರಕಾರ, ಇನ್ನು ಮುಂದೆ ಸಭೆಯಲ್ಲಿ ಕಾರ್ಯದರ್ಶಿ ಪಾಲ್ಗೊಳ್ಳುವಂತಿಲ್ಲ. ಇಡೀ ಸಭೆಯನ್ನು ಸಮಿತಿಯ ಅಧ್ಯಕ್ಷರೇ ನಡೆಸಬೇಕು. ಜತೆಗೆ ಟೂರ್ನಿಯ ಮಧ್ಯದಲ್ಲಿ ಆಟಗಾರರನ್ನು ಬದಲಿಸುವ ನಿರ್ಧಾರಕ್ಕೂ ಕಾರ್ಯದರ್ಶಿಯ ಅನುಮತಿ ಬೇಕಾಗಿಲ್ಲ ಎಂದು ಹೇಳಿದೆ. ಇದು ಶುಕ್ರವಾರ ಮುಂಬಯಿನಲ್ಲಿ ನಡೆಯಲಿರುವ ಸಭೆಯ ಮೇಲೆ ಕರಿಛಾಯೆ ಮೂಡಿಸಿದೆ.

ಹಳೆ ವ್ಯವಸ್ಥೆಗೆ ಕೊನೆ

ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಕಾರ್ಯದರ್ಶಿ ಸಭೆಯಲ್ಲಿ ಪಾಲ್ಗೊಳ್ಳುವುದು ಅನಗತ್ಯ. ಆದರೆ, ಹೊಸ ಸಂವಿಧಾನ ರೂಪುಗೊಂಡು 11 ತಿಂಗಳಾಗಿದ್ದರೂ ಹಳೆಯ ಮಾದರಿಯನ್ನೇ ಮುಂದುವರಿಸಲಾಗುತ್ತಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿನೋದ್‌ ರಾಯ್‌, ಡಯಾನ ಎಡುಲ್ಜಿ ಹಾಗೂ ಲೆ. ಜನರಲ್‌ ರವಿ ಥೋಡ್ಗೆ ಅವರಿರುವ ಆಡಳಿತಾತ್ಮಕ ಸಮಿತಿ, ಹೊಸ ಸಂವಿಧಾನದ ಪ್ರಕಾರವೇ ಸಭೆಗಳು ನಡೆಯಬೇಕು ಎಂದು ಸೂಚನೆ ನೀಡಿದೆ.

ಭತ್ಯೆಗೆ ಅನುಮತಿ ಬೇಕಾಗಿಲ್ಲ

ಆಯ್ಕೆ ಸಮಿತಿಯ ಸಭೆ, ಪ್ರವಾಸ ಹಾಗೂ ಕ್ರಿಕೆಟ್‌ ಪಂದ್ಯಗಳ ಟಿಕೆಟ್‌ಗಳ ವೆಚ್ಚಗಳಿಗೆ ಕಾರ್ಯದರ್ಶಿಗೆ ಇ-ಮೇಲ್‌ ಕಳುಹಿಸುವ ಮೂಲಕ ಅನುಮತಿ ಪಡೆಯುವ ವ್ಯವಸ್ಥೆ ಇನ್ನೂ ಜಾರಿಯಲ್ಲಿದೆ. ಹೊಸ ಸಂವಿಧಾನದಲ್ಲಿ ಈ ಅಂಶವಿಲ್ಲ ಎಂದು ಸಿಒಎ ಅಭಿಪ್ರಾಯಪಟ್ಟಿದೆ.

ನಿರ್ದೇಶನಗಳು ಇಂತಿವೆ

1) ವಿದೇಶಿ ಪ್ರವಾಸ ಹೊರತು ಪಡಿಸಿ ಉಳಿದೆಲ್ಲ ಪಂದ್ಯಾವಳಿಗಳ ಆಯ್ಕೆ ಸಭೆಯನ್ನು ಆಯಾಯ ಸಮಿತಿಗಳ ಅಧ್ಯಕ್ಷರೇ ನಡೆಸಬೇಕು. ವಿದೇಶ ಪ್ರವಾಸದ ಸಭೆಗೆ ಆಡಳಿತ ವ್ಯವಸ್ಥಾಪಕ ಪಾಲ್ಗೊಳ್ಳಬಹುದು. ಆದರೆ, ಸಿಇಒ ಸೇರಿದಂತೆ ಇನ್ಯಾವುದೇ ಅಧಿಕಾರಿಗಳು ಪಾಳ್ಗೊಳ್ಳಬಾರದು.

2) ಆಯ್ಕೆ ಸಮಿತಿಯ ಸಭೆಯ ಸಂಪೂರ್ಣ ವಿವರಗಳನ್ನು ಸಮಿತಿ ಅಧ್ಯಕ್ಷರೇ ತಯಾರಿಸಿ ಸಹಿ ಹಾಕಿ ಕಾರ್ಯದರ್ಶಿಗೆ ಕಳುಹಿಸಬೇಕು. ಕಾರ್ಯದರ್ಶಿ ಅದರ ದಾಖಲೆಯನ್ನಷ್ಟೇ ಮಾಡಬೇಕು.

3) ಯಾವುದೇ ಆಯ್ಕೆ ಅಥವಾ ಬದಲಾವಣೆಗೆ ಕಾರ್ಯದರ್ಶಿಯ ಶಿಫಾರಸು ಅಥವಾ ಅನುಮತಿಯ ಅಗತ್ಯವಿಲ್ಲ. ಹೊಸ ಸಂವಿಧಾನದ ಪ್ರಕಾರವೇ ಸಭೆ ನಡೆಯಬೇಕು.

4) ಪ್ರವಾಸ ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಮಾಡುವ ಹೊಣೆಗಾರಿಕೆ ಸಿಇಒ ಮೇಲಿದ್ದು, ಈ ಅಗತ್ಯಗಳಿಗೆ ಸಿಒಗೆ ಇ- ಮೇಲ್‌ ಕಳುಹಿಸಬೇಕು.

ಪ್ರತಿಕ್ರಿಯೆ ಸಿಕ್ಕಿಲ್ಲ

ಶುಕ್ರವಾರ ಮುಂಬಯಿನಲ್ಲಿ ನಡೆಯಲಿರುವ ವೆಸ್ಟ್‌ ಇಂಡೀಸ್‌ ಪ್ರವಾಸದ ಆಯ್ಕೆಯ ಸಭೆ ಹೊಸ ನಿರ್ದೇಶನದ ಪ್ರಕಾರವೇ ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ, ಹಳೆ ಮಾದರಿಯಂತೆ ಸಭೆ ನಡೆಸಲು ಯೋಜನೆ ರೂಪಿಸಿದ್ದ ಆಯ್ಕೆ ಸಮಿತಿಗೆ ಈಗ ಇಕ್ಕಟ್ಟು ಸೃಷ್ಟಿಯಾಗಿದೆ. ಆದರೆ, ಇದುವರೆಗೆ ಯಾರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌