ಆ್ಯಪ್ನಗರ

Asia Cup 2022: ಪಾಕ್ ತಂಡಕ್ಕೆ ಎಚ್ಚರಿಕೆ ರವಾನಿಸಿದ ಸಲ್ಮಾನ್‌ ಬಟ್‌!

India vs Pakistan Match in Asia Cup 2022: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಂಬರುವ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಎರಡೂ ರಾಷ್ಟ್ರಗಳ ನಡುವಣ ಹದಗೆಟ್ಟ ರಾಜಕೀಯ ಸ್ಥಿತಿಗತಿಗಳ ಪರಿಣಾಮ ಇಂದು ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಯುತ್ತಿಲ್ಲ. ಹೀಗಾಗಿ ಕೇವಲ ಐಸಿಸಿ ಮತ್ತು ಎಸಿಸಿ ಆಯೋಜಿತ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಾ ಬಂದಿವೆ. ಹೀಗಾಗಿ ಆಗಸ್ಟ್‌ 28ರಂದು ನಡಯಲಿರುವ ಹೈ ವೋಲ್ಟೇಜ್ ಪಂದ್ಯ ವೀಕ್ಷಣೆ ಸಲುವಾಗಿ ಕ್ರಿಕೆಟ್ ಜಗತ್ತು ಎದುರು ನೋಡುತ್ತಿದೆ.

Authored byವಿಜೇತ್ ಕುಮಾರ್ | Vijaya Karnataka Web 14 Aug 2022, 3:31 pm

ಹೈಲೈಟ್ಸ್‌:

  • ಆಗಸ್ಟ್‌ 27ರಂದು ಯುಎಇ ಆತಿಥ್ಯದಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಶುರುವಾಗಲಿದೆ.
  • ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆ.28ರಂದು ಇಂಡೊ-ಪಾಕಿಸ್ತಾನ ನಡುವಣ ಕದನ.
  • ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಎಚ್ಚರಿಕೆ ರವಾನಿಸಿದ ಪಾಕ್‌ ತಂಡದ ಮಾಜಿ ನಾಯಕ ಸಲ್ಮಾನ್ ಬಟ್.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web IND vs PAK
ಭಾರತ ಮತ್ತು ಪಾಕಿಸ್ತಾನ ನಡುವಣ ಕದನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ (ಚಿತ್ರ: ಐಸಿಸಿ).
ಬೆಂಗಳೂರು: ಟೀಮ್ ಇಂಡಿಯಾ ಮುಂಬರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಗಾಯದ ಸಮಸ್ಯೆಗಳ ಕಾರಣ ಭಾರತ ತಂಡ ಜಸ್‌ಪ್ರೀತ್‌ ಬುಮ್ರಾ ಮತ್ತು ಹರ್ಷಲ್ ಪಟೇಲ್‌ ಅವರಂತಹ ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ ಆದರೂ, ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡದ ಎದುರು ಎಚ್ಚರಿಕೆಯಿಂದ ಆಡುವಂತೆ ಪಾಕ್‌ ತಂಡದ ಮಾಜಿ ನಾಯಕ ಸಲ್ಮಾನ್‌ ಬಟ್‌, ಯುವ ಕಪ್ತಾನ ಬಾಬರ್‌ ಆಝಮ್‌ ಸಾರಥ್ಯದ ಪಾಕಿಸ್ತಾನ ತಂಡಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಮುಂಬರುವ ಎಷ್ಯಾ ಕಪ್‌ 2022 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆ.28ರಂದು (ಭಾನುವಾರ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕ್‌ ತಂಡ ಪ್ರಮುಖವಾಗಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್‌ ವಿರಾಟ್‌ ಕೊಹ್ಲಿ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಬಟ್‌ ಹೇಳಿದ್ದಾರೆ.

"ಟೀಮ್ ಇಂಡಿಯಾ ತನ್ನ ಆಟಗಾರರಿಗೆ ಅಗತ್ಯ ವಿಶ್ರಾಂತಿ ಕೊಡುವ ಉದ್ದೇಶದಿಂದ ಪ್ರತಿ ಸರಣಿಯಲ್ಲಿ ಆಟಗಾರರನ್ನು ಬದಲಾಯಿಸುವ ತಂತ್ರ ಅನುಸರಿಸುತ್ತಾ ಬಂದಿದೆ. ಈ ಮೂಲಕ ಹಿರಿಯ ಆಟಗಾರರಿಗೆ ಅಗತ್ಯದ ವಿಶ್ರಾಂತಿ ಕೊಟ್ಟಿದೆ. ಜೊತೆಗೆ ಯುವ ಆಟಗಾರರಿಗೆ ಅಗತ್ಯದ ಅವಕಾಶಗಳನ್ನು ನೀಡಿದೆ. ತಂಡದಲ್ಲಿ ಇಷ್ಟು ಬದಲಾವಣೆ ತರುವಷ್ಟು ಪ್ರತಿಭಾನ್ವಿತ ಆಟಗಾರರ ದಂಡನ್ನು ಟೀಮ್ ಇಂಡಿಯಾ ಹೊಂದಿದೆ. ತಂದ ಬೆಂಚ್‌ ಬಲ ಅತ್ಯಂತ ಬಲಿಷ್ಠವಾಗಿದೆ," ಎಂದು ಬಟ್‌ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಏಷ್ಯಾ ಕಪ್‌: ಬಾಂಗ್ಲಾದೇಶ ತಂಡಕ್ಕೆ ಶಕಿಬ್ ಅಲ್‌ ಹಸನ್‌ ನಾಯಕ!

ಈ ಟೂರ್ನಿ ಮೂಲಕ ವಿರಾಟ್‌ ಕೊಹ್ಲಿ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಟೆಸ್ಟ್‌, ಟಿ20 ಮತ್ತು ಒಡಿಐ ಸರಣಿಗಳನ್ನು ಆಡಿದ ಬಳಿಕ ವಿರಾಟ್‌ ವಿಶ್ರಾಂತಿ ತೆಗೆದುಕೊಂಡಿದ್ದು, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದಾರೆ. ಈಗ ಆಗಸ್ಟ್‌ 27ರಂದು ಶುರುವಾಗಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಹಾಜರಾಗಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯ ವಿರಾಟ್‌ ಪಾಲಿನ 100ನೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯವಾಗಲಿದೆ.

"ವಿರಾಟ್‌ ಕೊಹ್ಲಿ ಅವರಲ್ಲಿ ಅನುಭವ ಮತ್ತು ಸಾಮರ್ಥ್ಯ ಎರಡೂ ಇದೆ. ವಿರಾಟ್‌ ಬೇಗ ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲಿ ಎಂದು ಭಾರತ ತಂಡ ಹಾತೊರೆಯುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಹಿಂದೆ ಹಲವು ಆಟಗಾರರು ತಮ್ಮ ಲಯ ಕಂಡುಕೊಂಡ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ವಿರಾಟ್‌ ಏನಾದರೂ ತಮ್ಮ ಲಯ ಕಂಡುಕೊಂಡಿದ್ದೇ ಆದರೆ, ಪಾಕಿಸ್ತಾನ ತಂಡ ಖಂಡಿತಾ ಸಂಕಷ್ಟದಲ್ಲಿರಲಿದೆ," ಎಂದು ಬಟ್‌ ಎಚ್ಚರಿಸಿದ್ದಾರೆ.

ಅಂದಹಾಗೆ ಕಳೆದ ವರ್ಷ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಎದುರು ವಿರಾಟ್‌ ಕೊಹ್ಲಿ ಹೋರಾಟಯುತ ಅರ್ಧಶತಕ ಬಾರಿಸಿದ್ದರು. ಆದರೆ, ಆ ಪಂದ್ಯದಲ್ಲಿ ಪಾಖಿಸ್ತಾನ ತಂಡ 10 ವಿಕೆಟ್‌ಗಳ ಅಚ್ಚರಿಯ ಜಯ ದಾಖಲಿಸಿತ್ತು.

ಏಷ್ಯಾ ಕಪ್: ಭಾರತ-ಪಾಕಿಸ್ತಾನ ನಡುವಣ ಮುಖಾಮುಖಿ ದಾಖಲೆ ವಿವರ ಇಲ್ಲಿದೆ!

ಏಷ್ಯಾ ಕಪ್‌ ಟೂರ್ನಿಗೆ ಭಾರತ ಟಿ20 ತಂಡ ಹೀಗಿದೆ
ಓಪನರ್ಸ್‌: ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌
ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌: ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ
ವಿಕೆಟ್‌ಕೀಪರ್ಸ್‌: ರಿಷಭ್ ಪಂತ್‌ ಮತ್ತು ದಿನೇಶ್‌ ಕಾರ್ತಿಕ್
ಆಲ್‌ರೌಂಡರ್ಸ್‌: ಹಾರ್ದಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ
ವೇಗದ ಬೌಲರ್ಸ್‌: ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌
ಸ್ಪಿನ್ನರ್ಸ್‌: ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌
ಕಾಯ್ದಿರಿಸಿದ ಆಟಗಾರರು: ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌