ಆ್ಯಪ್ನಗರ

ಮಾಂತ್ರಿಕ ಕೋಚ್‌ ಸನತ್‌ ಕುಮಾರ್‌

ಆಂಧ್ರ ತಂಡದ ಯಶಸ್ಸಿನ ಹಿಂದೆ ಕನ್ನಡಿಗ | ದೇಶೀಯ ಕ್ರಿಕೆಟ್‌ನ ಯಶಸ್ವಿ ತರಬೇತುದಾರ ಸುದರ್ಶನ್‌ ಬೆಂಗಳೂರು ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಕೋಚ್‌ ಎಂದೇ ಖ್ಯಾತಿ ಪಡೆದಿರುವ ...

Vi.Ka. Suddiloka 16 Feb 2018, 4:00 am

ಆಂಧ್ರ ತಂಡದ ಯಶಸ್ಸಿನ ಹಿಂದೆ ಕನ್ನಡಿಗ | ದೇಶೀಯ ಕ್ರಿಕೆಟ್‌ನ ಯಶಸ್ವಿ ತರಬೇತುದಾರ

ಸುದರ್ಶನ್‌

Vijaya Karnataka Web sanath kumar a successful coach in india domestic cricket
ಮಾಂತ್ರಿಕ ಕೋಚ್‌ ಸನತ್‌ ಕುಮಾರ್‌

ಬೆಂಗಳೂರು: ದೇಶೀಯ ಕ್ರಿಕೆಟ್‌ನ ಅತ್ಯುತ್ತಮ ಕೋಚ್‌ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ಕೆ.ಸನತ್‌ ಕುಮಾರ್‌, ಯಾವುದೇ ತಂಡದ ಕೋಚಿಂಗ್‌ ಜವಾಬ್ದಾರಿ ವಹಿಸಿಕೊಂಡರೂ ಅಲ್ಲಿ ಅದ್ಭುತವನ್ನು ಸೃಷ್ಠಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಂಧ್ರ ತಂಡದ ಐತಿಹಾಸಿಕ ಸಾಧನೆ.

ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಆಂಧ್ರ ತಂಡ 'ಸಿ' ಗುಂಪಿನಲ್ಲಿ ಆಡಿದ ಆರೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ನಾಕ್‌ಔಟ್‌ ಹಂತಕ್ಕೇರಿದೆ. ಗ್ರೂಪ್‌ನಲ್ಲಿ ಮುಂಬಯಿ, ತಮಿಳುನಾಡು, ಗುಜರಾತ್‌, ಮಧ್ಯಪ್ರದೇಶಗಳಂತಹ ಬಲಿಷ್ಠ ತಂಡಗಳನ್ನು ಬಗ್ಗು ಬಡಿದಿರುವ ಆಂಧ್ರದ ಈ ಸ್ಮರಣೀಯ ಸಾಧನೆಯ ಹಿಂದಿನ ಶಕ್ತಿ ಕೋಚ್‌ ಸನತ್‌ ಕುಮಾರ್‌.

ಕಳೆದೆರಡು ಸಾಲಿನಿಂದ ಆಂಧ್ರ ತಂಡದ ಪ್ರಧಾನ ತರಬೇತುದಾರರಾಗಿರುವ ಸನತ್‌ ಕುಮಾರ್‌, ತಂಡದ ಪ್ರಗತಿಗೆ ಕಾರಣರಾಗಿದ್ದಾರೆ. ವಿಜಯ್‌ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಆಂಧ್ರ, ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲೂ ಗಮನಾರ್ಹ ಪ್ರದರ್ಶನ ತೋರಿತ್ತು. ದಕ್ಷಿಣ ವಲಯ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳೊಂದಿಗೆ ತಲಾ 16 ಅಂಕಗಳನ್ನು ಗಳಿಸಿದ್ದರೂ, ರನ್‌ರೇಟ್‌ ಆಧಾರದಲ್ಲಿ ಸೂಪರ್‌ ಲೀಗ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ರಣಜಿ ಟ್ರೋಫಿಯಲ್ಲೂ ಕೇವಲ 2 ಅಂಕಗಳ ಕೊರತೆಯಿಂದಾಗಿ ಕ್ವಾರ್ಟರ್‌ ಫೈನಲ್‌ ಅವಕಾಶ ಕೂದಲೆಳೆಯ ಅಂತರದಲ್ಲಿ ಕೈ ತಪ್ಪಿತ್ತು.

ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ದುರ್ಬಲ ತಂಡಗಳಲ್ಲೊಂದಾದ ಆಂಧ್ರ ಇದೀಗ ಸನತ್‌ ಗರಡಿಯಲ್ಲಿ ಬಲಿಷ್ಠ ತಂಡವಾಗಿ ರೂಪುಗೊಂಡಿದೆ. ತಂಡದ ಈ ಸುಧಾರಣೆಯ ಬಗ್ಗೆ 'ವಿಜಯ ಕರ್ನಾಟಕ' ಜತೆ ಮಾತನಾಡಿದ ಸನತ್‌, ''ಯಶಸ್ಸಿನಲ್ಲಿ ಸಿದ್ಧತೆ ಮತ್ತು ಯೋಜನೆ ದೊಡ್ಡ ಪಾತ್ರ ವಹಿಸಿದೆ. ಇಲ್ಲಿ ಪ್ರತಿಭೆಯಿದೆ, ಪ್ರೇರಣೆ ಇಲ್ಲ. ಆಟಗಾರರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವವರಿಲ್ಲ. ನಾನು ಬಂದು ಮಾಡಿದ ಮೊದಲ ಕೆಲಸವೇ ಅದು. ಆಯ್ಕೆಯ ಕುರಿತು ತಲೆ ಕೆಡಿಸಿಕೊಳ್ಳಬೇಡಿ, ಶೇಕಡ 100ರಷ್ಟು ಪರಿಶ್ರಮ ಪಟ್ಟರೆ ನಿಮ್ಮ ಹಿಂದೆ ನಾನಿದ್ದೇನೆ ಎಂದೆ. ಅವರ ಮನಸ್ಥಿತಿಯನ್ನು ಬದಲಿಸಿದೆ,'' ಅದು ದೊಡ್ಡ ಬದಲಾವಣೆಗೆ ಕಾರಣವಾಯಿತು,'' ಎಂದರು.

ಯಶಸ್ವಿ ಕೋಚ್‌

ಕರ್ನಾಟಕ ಪರ ರಣಜಿ ಪಂದ್ಯಗಳನ್ನೂ ಆಡಿರುವ ಸನತ್‌ ಕುಮಾರ್‌ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಕೋಚ್‌ ಎಂಬುದನ್ನು ಅವರು ತರಬೇತಿ ನೀಡಿದ ತಂಡಗಳ ಸಾಧನೆಗಲೇ ಹೇಳುತ್ತವೆ. 2009-10ರಲ್ಲಿ ಕರ್ನಾಟಕದ ಕೋಚ್‌ ಆಗಿದ್ದಾಗ ತಂಡ ರಣಜಿ ಟ್ರೋಫಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. 2010-11ನೇ ಸಾಲಿನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. 2011ರಿಂದ 2014ರವರೆಗೆ ಬರೋಡ ಕೋಚ್‌ ಆಗಿದ್ದಾಗ, ಆ ತಂಡ ಎರಡು ಬಾರಿ ದೇಶೀಯ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿತ್ತು.

2014-15ನೇ ಸಾಲಿನಲ್ಲಿ ಅಸ್ಸಾಂ ತಂಡದ ತರಬೇತುದಾರರಾಗಿ ನೇಮಕಗೊಂಡ ಸನತ್‌, ಅದೇ ವರ್ಷ ತಂಡವನ್ನು ರಣಜಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಸಿದ್ದರು. 2015-16ನೇ ಸಾಲಿನಲ್ಲಿ ಅಸ್ಸಾಂ ತಂಡ ಸೆಮಿಫೈನಲ್‌ ಪ್ರವೇಶಿಸಿತ್ತು. 2016-17ನೇ ಸಾಲಿನಲ್ಲಿ ಆಂಧ್ರ ತಂಡದ ಕೋಚ್‌ ಆಗಿ ಸನತ್‌ ನೇಮಕಗೊಂಡ ನಂತರ, ಕಳೆದೆರಡು ವರ್ಷಗಳಲ್ಲಿ ಆಂಧ್ರ ಗಮನಾರ್ಹ ಪ್ರದರ್ಶನ ತೋರುತ್ತಿದೆ.

ಕರ್ನಾಟಕಕ್ಕೆ ಬರಲು ಸಿದ್ಧ

ಕೋಚಿಂಗ್‌ನಲ್ಲಿ ಅತ್ಯುತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿರುವ ಸನತ್‌ ಕುಮಾರ್‌ ಕರ್ನಾಟಕ ತಂಡಕ್ಕೆ ಕೋಚಿಂಗ್‌ ನೀಡಲು ಸಿದ್ಧರಿದ್ದಾರೆ. ಇದಕ್ಕಾಗಿ ತಮ್ಮ ಸಂಭಾವನೆಯ ಮೊತ್ತದಲ್ಲಿ 10 ಲಕ್ಷ ರೂ.ಗಳನ್ನು ಕಡಿತಗೊಳಿಸಿ 25 ಲಕ್ಷ ರೂ.ಗಳಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದರೂ, ರಾಜ್ಯ ಕ್ರಿಕೆಟ್‌ ಸಂಸ್ಥೆ ಆಸಕ್ತಿ ತೋರುತ್ತಿಲ್ಲ. ಕಳೆದ 3 ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಎಡವುತ್ತಾ ಬಂದಿರುವ ಕರ್ನಾಟಕ ತಂಡ, ಮತ್ತೆ ತನ್ನ ಹಳೆಯ ಖದರ್‌ ತೋರಬೇಕಾದರೆ ಸನತ್‌ ಕುಮಾರ್‌ ಅವರಂತಹ ತರಬೇತುದಾರನ ಅವಶ್ಯಕತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌