ಶಾಹಿದ್ ಅಫ್ರಿದಿ ಪಾಕಿಸ್ತಾನದ ಇಮ್ರಾನ್ ಖಾನ್ ಆಗಲು ಹೊರಟಿದ್ದಾರೆಯೇ?
ಕಾಶ್ಮೀರ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಆಫ್ರಿದಿ, ಭಾರತೀಯ ಹಾಗೂ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಮ್ಮದೇ ಸಹಾಯಾರ್ಥ ಸಂಸ್ಥೆಯ ಮೂಲಕ ಪಾಕಿಸ್ತಾನ ಬಡ ಜನರಿಗೆ ಮಾನವೀಯ ಸೇವೆ ಮಾಡುತ್ತಿರುವುದಕ್ಕೆ ಭಾರತೀಯ ಕ್ರಿಕೆಟಿಗರಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಬೆಂಬಲ ಸೂಚಿಸಿದ್ದರು.
ಆದರೆ ಇತ್ತೀಚೆಗೆ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಫ್ರಿದಿ ನೀಡಿರುವ ಕೀಳು ಮಟ್ಟದ ಹೇಳಿಕೆಯಿಂದ ಭಾರತೀಯ ಆಟಗಾರರ ಸ್ನೇಹ ಬಾಂಧವ್ಯವನ್ನು ಕಡಿದುಕೊಂಡಿದ್ದಾರೆ.
ಗೌತಿಯಿಂದ ತಕ್ಕ ಶಾಸ್ತಿ
ಆಡುವ ಕಾಲಘಟ್ಟದಲ್ಲಿ 'ಬೂಮ್ ಬೂಮ್' ಎಂದು ಖ್ಯಾತಿ ಪಡೆದಿರುವ ಆಫ್ರಿದಿ, ಭಾರತೀಯ ಆಟಗಾರರ ವಿರುದ್ಧ ಮೈದಾನದಲ್ಲಿ ನೇರ ಜಟಾಪಟಿಗಿಳಿದಿದ್ದರು. ಮಾಜಿ ಆಟಗಾರ ಗೌತಮ್ ಆಫ್ರಿದಿ ಜೊತೆಗಿನ ವಿವಾದವನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ.
ಕಾಶ್ಮೀರ ವಿಚಾರದಲ್ಲಿ ಮತ್ತೆ ವಿಷ ಕಕ್ಕಿದ ಅಫ್ರಿದಿ, ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ!
ಅಂದು ಆಫ್ರಿದಿ ಚಳಿ ಬಿಡಿಸಿದ್ದ ಗೌತಿ, ಮೈದಾನದಲ್ಲೇ ತಕ್ಕ ತಿರುಗೇಟು ನೀಡಿದ್ದರು. ನಿವೃತ್ತಿಯ ಬಳಿಕವೂ ಆಫ್ರಿದಿ, ಭಾರತ ಹಾಗೂ ಕಾಶ್ಮೀರ ಬಗ್ಗೆ ಮಾಡುತ್ತಿರುವ ಪ್ರತಿಯೊಂದು ಟೀಕೆಗೂ ಗೌತಮ್ ಗಂಭೀರ್ ಖಡಕ್ ಜವಾಬ್ ನೀಡುತ್ತಿದ್ದಾರೆ. ಈ ಮೂಲಕ ಆಫ್ರಿದಿಯ ಬಟಾಬಯಲು ಮಾಡುತ್ತಿದ್ದಾರೆ.
ಯುವಿ, ಭಜ್ಜಿಯಿಂದಲೂ ತಿರುಗೇಟು
ಆಫ್ರಿದಿ ತಮ್ಮ ಹೇಳಿಕೆಯಲ್ಲಿ ಭಾರತೀಯ ಪ್ರಧಾನಿಯನ್ನು ಅವಹೇಳನ ಮಾಡಿದ್ದರು. ಕೊರೊನಾಗಿಂತಲೂ ದೊಡ್ಡ ರೋಗ ನರೇಂದ್ರ ಮೋದಿಗೆ ಅಂಟಿಕೊಂಡಿದೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಾಶ್ಮೀರದಲ್ಲಿರುವ ನಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯೊಡನೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಮೋದಿ ಜಗತ್ತಿಗೆ ಮಾತ್ರವಲ್ಲದೆ ಆ ದೇವರ ಮುಂದೆ ಕೂಡಾ ಉತ್ತರ ನೀಡಬೇಕು. ಮೋದಿ ಧೈರ್ಯವಂತ ಎಂದು ಫೋಸ್ ಕೊಡುತ್ತಾರೆ. ಆದರೆ ಅಷ್ಟೇ ಹೆದರುಪುಕ್ಕಲ. ನಾವೆಲಕ್ಕೂ ನಮ್ಮ ಸೈನಿಕರ ಬೆಂಬಲಕ್ಕಿದ್ದೇವೆ. ಪಾಕ್ ಸೇನೆಗೆ ಸಾಥ್ ನೀಡುತ್ತಿರುವ ಸ್ಥಳೀಯರಿಗೂ ನನ್ನ ಸಲಾಂ ಎಂದು ಹೇಳಿಕೆ ನೀಡಿದ್ದರು .
ಅಲ್ಲದೆ ನರೇಂದ್ರ ಮೋದಿ ಪ್ರಧಾನಿಯಾಗಿರುವ ವರೆಗೂ ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿರುವ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್, ಆಫ್ರಿದಿ ಜೊತೆಗಿನ ಬಾಂಧವ್ಯ ಕಡಿಯುವುದಾಗಿ ಘೋಷಿಸಿದ್ದರು.
ಇಮ್ರಾನ್ ಖಾನ್ ಆಗಲು ಹೊರಟಿದ್ದಾರೆಯೇ?
ಒಟ್ಟಾರೆಯಾಗಿ ಶಾಹಿದ್ ಅಫ್ರಿದಿ, ಪಾಕಿಸ್ತಾನ ಪ್ರಧಾನಿ ಹಾಗೂ ಮಾಜಿ ನಾಯಕ ಇಮ್ರಾನ್ ಖಾನ್ ಆಗಲು ಹೊರಡಿದಂತಿದೆ. ನಿವೃತ್ತಿಯ ಬಳಿಕವಂತೂ ರಾಜಕಾರಣ ಸೇರಿದಂತೆ ಪ್ರತಿ ವಿಷಯದಲ್ಲೂ ಮೂಗು ತೂರಿಸುತ್ತಿದ್ದಾರೆ. ಭಾರತವು ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಆಫ್ರಿದಿ ಕೆಂಡಾಮಂಡಲವಾಗಿದ್ದರು. ಅಲ್ಲದೆ ಭಾರತದಿಂದ ಕಾಶ್ಮೀರ ಸ್ವತಂತ್ರಗೊಳಿಸುವಂತೆ ಘೋಷವಾಕ್ಯ ಕೂಗಿದ್ದರು.
ಭಜ್ಜಿಗೆ ಜ್ಞಾನೋದಯ!, ಅಫ್ರಿದಿ ಜೊತೆ ಇನ್ನಾವುದೇ ಬಾಂಧವ್ಯವಿಲ್ಲ ಎಂದ ಟರ್ಬನೇಟರ್
ನಿಕಟ ಭವಿಷ್ಯದಲ್ಲಿ ಆಫ್ರಿದಿ ರಾಜಕೀಯ ಅಖಾಡಕ್ಕಿಳಿಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಎಲ್ಲ ಹೇಳಿಕೆಗಳನ್ನು ಗಮನಿಸಿದರೆ ಮಾನವೀಯ ವಿಚಾರಗಳನ್ನು ಇಟ್ಟುಕೊಂಡು ಜನರ ಪ್ರೀತಿ ಪಾತ್ರವಾಗಲು ಪೂರ್ವ ತಯಾರಿ ನಡೆಸುವಂತಿದೆ. ಏನೇ ಆದರೂ ಆಫ್ರಿದಿ ತನ್ನ ರಾಷ್ಟ್ರದ ಆಂತರಿಕ ವಿಚಾರದ ಬಗ್ಗೆ ಮಾತ್ರ ಗಮನ ಹರಿಸಿದರೆ ಮಾತ್ರ ಒಳಿತು. ಇಲ್ಲವಾದ್ದಲ್ಲಿ ಭಾರತದಿಂದ ತಕ್ಕ ಶಾಸ್ತಿಯಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.