ಆ್ಯಪ್ನಗರ

ಪಾಕ್ ಪ್ರವಾಸದಿಂದ ಲಂಕಾ ಆಟಗಾರರು ಹಿಂಜರಿಯಲು ಐಪಿಎಲ್ ಕಾರಣ: ಆಫ್ರಿದಿ ಬಾಂಬ್

ಪಾಕಿಸ್ತಾನ ಪ್ರವಾಸದಿಂದ ಶ್ರೀಲಂಕಾದ ಪ್ರಮುಖ ಆಟಾಗರರು ಹಿಂದಕ್ಕೆ ಸರಿಯಲು ಇಂಡಿಯನ್ ಪ್ರೀಮಿಯರ್ ಲೀಗ್ ಒತ್ತಡವೇ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಆರೋಪ ಮಾಡಿದ್ದಾರೆ.

Vijaya Karnataka Web 20 Sep 2019, 1:01 pm
ಹೊಸದಿಲ್ಲಿ: ಭದ್ರತಾ ಕಾರಣದಿಂದಾಗಿ ಪಾಕಿಸ್ತಾನ ಕ್ರಿಕೆಟ್ ಪ್ರವಾಸ ಕೈಗೊಳ್ಳಲು ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ಹಿಂದೇಟು ಹಾಕಿದ್ದಾರೆ. ಶ್ರೀಲಂಕಾ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂಜರಿಯಲು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಾರಣವಾಗಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಬಾಂಬ್ ಸಿಡಿಸಿದ್ದಾರೆ.
Vijaya Karnataka Web shahid-afridi


ಆಫ್ರಿದಿ ಹೇಳಿಕೆಯನ್ನು ಪಾಕಿಸ್ತಾನ ಹಿರಿಯ ಕ್ರಿಕೆಟ್ ಪತ್ರಕರ್ತರಾಗಿರುವ ಸಜ್ ಸಾದಿಕ್ ಬಹಿರಂಗ ಮಾಡಿದ್ದಾರೆ. ಐಪಿಎಲ್ ಫ್ರಾಂಚೈಸಿಗಳಿಂದ ಶ್ರೀಲಂಕಾ ಆಟಗಾರರು ಒತ್ತಡವನ್ನು ಎದುರಿಸುತ್ತಿದ್ದಾರೆ. ಕೊನೆಯ ಬಾರಿಗೆ ಶ್ರೀಲಂಕಾ ಕ್ರಿಕೆಟಿಗರ ಜತೆಗೆ ಮಾತನಾಡಿದಾಗ ಪಾಕಿಸ್ತಾನಕ್ಕೆ ಬಂದು ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ (ಪಿಸಿಎಲ್) ಆಡುವುದರ ಬಗ್ಗೆ ಉತ್ಸುಕತೆ ತೋಡಿಕೊಂಡಿದ್ದರು. ಲಂಕನ್ ಆಟಗಾರರು ಪಾಕ್‌ಗೆ ಹೋಗಲು ಬಯಸುತ್ತಾರೆ. ಆದರೆ ಹಾಗೆ ಮಾಡಿದ್ದಲ್ಲಿ ಐಪಿಎಲ್ ಒಪ್ಪಂದ ನಷ್ಟವಾಗಲಿದೆ ಎಂಬ ಭೀತಿ ಕಾಡುತ್ತಿದೆ ಎಂದು ಆಫ್ರಿದಿ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ; ಪಾಕ್ ಮಾಜಿ ನಾಯಕ ಶಾಹೀದ್ ಆಫ್ರಿದಿ ಗುಣಗಾನ

ಪಾಕಿಸ್ತಾನ ಯಾವತ್ತೂ ಶ್ರೀಲಂಕಾ ಕ್ರಿಕೆಟನ್ನು ಬೆಂಬಲಿಸಿದೆ. ಶ್ರೀಲಂಕಾ ಪ್ರವಾಸದ ವೇಳೆ ನಮ್ಮ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ಘಟನೆಯೇ ನಡೆದಿಲ್ಲ. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪಾಕಿಸ್ತಾನಕ್ಕೆ ತೆರಳುವುದಕ್ಕಾಗಿ ಗುತ್ತಿಗೆ ಆಟಗಾರರ ಮೇಲೆ ಒತ್ತಡವನ್ನು ಹೇರಬೇಕು. ಪಾಕಿಸ್ತಾನಕ್ಕೆ ಬರುವ ಶ್ರೀಲಂಕಾ ಆಟಗಾರರನ್ನು ಪಾಕ್ ಇತಿಹಾಸದಲ್ಲಿ ಯಾವತ್ತೂ ಸ್ಮರಿಸಲಾಗುವುದು ಎಂಬ ಆಫ್ರಿದಿ ಹೇಳಿಕೆಯನ್ನು ಸಾದಿಕ್ ಟ್ವೀಟ್ ಮಾಡಿದ್ದಾರೆ.

ಈ ಮೊದಲು ಪಾಕಿಸ್ತಾನ ವಿಜ್ಞಾನ ಸಚಿವ ಫವಾದ್ ಹುಸೇನ್ (ಫವಾದ್ ಜೌಧರಿ) ಕೂಡಾ ಶ್ರೀಲಂಕಾ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂಜರಿಯಲು ಐಪಿಎಲ್ ಕಾರಣ ಎಂದು ಭಾರತದ ಮೇಲೆ ಗೂಬೆ ಕೂರಿಸಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ 2 ಯೋಜನೆಯಲ್ಲಿ ಹಿನ್ನಡೆ ಅನುಭವಿಸಿದ್ದ ಸಂದರ್ಭದಲ್ಲೂ ಪಾಕಿಸ್ತಾನ ಸಚಿವರು ಗೇಲಿ ಮಾಡಿದ್ದರು. ಇದಕ್ಕೆ ಭಾರತೀಯರು ಟ್ವಿಟರ್ ಮೂಲಕವೇ ತಕ್ಕ ಉತ್ತರವನ್ನು ನೀಡಿದ್ದರು.

ಪಾಕ್ ಪ್ರವಾಸ ಕೈಗೊಳ್ಳದಂತೆ ಲಂಕನ್ ಆಟಗಾರರಿಗೆ ಭಾರತ ಬೆದರಿಕೆ: ಪಾಕ್ ಸಚಿವ ಗಂಭೀರ ಆರೋಪ

ಶ್ರೀಲಂಕಾದ ಟ್ವೆಂಟಿ-20 ನಾಯಕ ಲಸಿತ್ ಮಾಲಿಂಗ, ಏಕದಿನ ನಾಯಕ ದಿಮುತ್ ಕರುಣಾರತ್ನೆ, ತಿಸಾರಾ ಪರೇರಾ, ಏಂಜಲೋ ಮ್ಯಾಥ್ಯೂಸ್, ನಿರೋಶನ್ ಡಿಕ್‌ವೆಲ್ಲ, ಕುಸಾಸ್ ಪರೇರಾ, ಧನಂಜಯ ಡಿ ಸಿಲ್ವ, ಅಕಿಲ ಧನಂಜಯ, ಸುರಂಗ ಲಕ್ಮಲ್ ಹಾಗೂ ದಿನೇಶ್ ಚಾಂದಿಮಾಲ್ ಪಾಕಿಸ್ತಾನಕ್ಕೆ ತೆರಳಲು ವಿಸಮ್ಮತಿಯನ್ನು ಸೂಚಿಸಿದ್ದಾರೆ.

ಏತನ್ಮಧ್ಯೆ ಭದ್ರತಾ ಭೀತಿ ಹಾಗೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳಲಿದೆ. ಎಲ್ಲ ರೀತಿಯ ಭದ್ರತೆಯನ್ನು ಒದಗಿಸಲಾಗುವುದೆಂದು ಪಾಕಿಸ್ತಾನ ರಕ್ಷಣಾ ಸಚಿವಾಲಯವು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಭರವಸೆಯನ್ನು ನೀಡಿದೆ.

2009ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರು ತೆರಳುತ್ತಿದ್ದ ಬಸ್‌ ಮೇಲೆ ಉಗ್ರರು ದಾಳಿ ನಡೆಸಿದ್ದರು. ತದಾ ಬಳಿಕ ಅಂತಾರಾಷ್ಟ್ರೀಯ ತಂಡಗಳು ಪಾಕ್‌ಗೆ ಪ್ರಯಾಣ ಬೆಳೆಸಲು ಹಿಂದೇಟು ಹಾಕುತ್ತಿದೆ. ಈ ನಡುವೆ 2017 ಅಕ್ಟೋಬರ್‌ನಲ್ಲಿ ಲಾಹೋರ್‌ನಲ್ಲಿ ಟ್ವಿ-20 ಪಂದ್ಯವೊಂದರಲ್ಲಿ ಲಂಕನ್ ತಂಡ ಭಾಗವಹಿಸಿತ್ತು.

ಪ್ರಸ್ತುತ ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ಸರಣಿಯಲ್ಲಿ ತಲಾ ಮೂರು ಏಕದಿನ ಮತ್ತು ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ. ಪ್ರಸ್ತುತ ಏಕದಿನ ಹಾಗೂ ಟಿ20 ಪಂದ್ಯಗಳು ಅನುಕ್ರಮವಾಗಿ ಕರಾಚಿ ಹಾಗೂ ಲಾಹೋರ್‌ನಲ್ಲಿ ನಡೆಯಲಿದೆ. ಈ ಹಿಂದೆ 2017ರಲ್ಲಿ ತಿಸಾರಾ ಪರೇರಾ ನೇತೃತ್ವದಲ್ಲಿ ಶ್ರೀಲಂಕಾ ತಂಡವು ಪಾಕ್ ಪ್ರವಾಸವನ್ನು ಕೈಗೊಂಡಿತ್ತು.

ಶ್ರೀಲಂಕಾ ಏಕದಿನ ಹಾಗೂ ಟ್ವೆಂಟಿ-20 ತಂಡಗಳ ನಾಯಕರಾದ ದಿಮುತ್ ಕರುಣಾರತ್ನೆ ಹಾಗೂ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಸಿಂಹಳೀಯರ ತಂಡವನ್ನು ಅನುಕ್ರಮವಾಗಿ ಲಹಿರು ತಿರಿಮಣ್ಣೆ ಹಾಗೂ ದಸುನ್ ಶನಕ ಮುನ್ನಡೆಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌