ಸೈಯದ್ ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್ ಇಂದಿನಿಂದ | ವಿನಯ್ ಪಡೆಗೆ ಪಂಜಾಬ್ ಸವಾಲು
ಬೆಂಗಳೂರು: ದಕ್ಷಿಣ ವಲಯ ಚಾಂಪಿಯನ್ ಕರ್ನಾಟಕ ತಂಡ, ಸೈಯದ್ ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್ ಲೀಗ್ ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಂಜಾಬ್ ತಂಡವನ್ನು ಎದುರಿಸಲಿದೆ.
ಕೋಲ್ಕೊತಾದ ಸಾಲ್ಟ್ಲೇಕ್ ಬಳಿಯಿರುವ ಜಾಧವ್ಪುರ್ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲುವ ಮೂಲಕ ಆರ್.ವಿನಯ್ ಕುಮಾರ್ ನಾಯಕತ್ವದ ಕರ್ನಾಟಕ 'ಎ' ಗುಂಪಿನಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ವಲಯ ಟೂರ್ನಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದು ಚಾಂಪಿಯನ್ ಆಗಿತ್ತು. ಇದೀಗ ಸೂಪರ್ ಲೀಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಆದರೆ ಕರ್ನಾಟಕದ ಸ್ಟಾರ್ ಬ್ಯಾಟ್ಸ್ಮನ್ ಮನೀಶ್ ಪಾಂಡೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ಜ.24ರಂದು ಹರಿಣಗಳ ನಾಡಿಗೆ ತೆರಳಲಿರುವ ಕಾರಣ ಸೂಪರ್ ಲೀಗ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
'ಎ' ಗುಂಪಿನಲ್ಲಿ ಕರ್ನಾಟಕ, ಪಂಜಾಬ್, ಮುಂಬಯಿ, ಜಾರ್ಖಂಡ್ ಮತ್ತು ರಾಜಸ್ಥಾನ ತಂಡಗಳು ಸ್ಥಾನ ಪಡೆದಿದ್ದರೆ, 'ಬಿ' ಗುಂಪಿನಲ್ಲಿ ದಿಲ್ಲಿ, ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ ಮತ್ತು ಬರೋಡಾ ತಂಡಗಳು ಸ್ಥಾನ ಪಡೆದಿವೆ. ಪ್ರತಿ ತಂಡಗಳು ಲೀಗ್ ಹಂತದಲ್ಲಿ ತಲಾ ನಾಲ್ಕು ಪಂದ್ಯಗಳನ್ನಾಡಲಿದ್ದು, ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಲಾ ಒಂದು ತಂಡ ಫೈನಲ್ ಪ್ರವೇಶಿಸಲಿದೆ. ಫೈನಲ್ ಹಣಾಹಣಿ ಜ.27ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಆರಂಭ: ಬೆಳಗ್ಗೆ 8.45ಕ್ಕೆ
ಸ್ಥಳ: ಜಾಧವ್ಪುರ್ ಯುನಿವರ್ಸಿಟಿ ಮೈದಾನ, ಸಾಲ್ಟ್ಲೇಕ್; ಕೋಲ್ಕೊತಾ
'ಎ' ಗ್ರೂಪ್: ಕರ್ನಾಟಕ, ಪಂಜಾಬ್, ಮುಂಬಯಿ, ಜಾರ್ಖಂಡ್, ರಾಜಸ್ಥಾನ
'ಬಿ' ಗ್ರೂಪ್: ದಿಲ್ಲಿ, ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ, ಬರೋಡಾ
ಇಂದಿನ ಇತರ ಪಂದ್ಯಗಳು
ಜಾರ್ಖಂಡ್ - ಮುಂಬಯಿ
ದಿಲ್ಲಿ - ತಮಿಳುನಾಡು
ಬಂಗಾಳ - ಬರೋಡ