ಆ್ಯಪ್ನಗರ

SMAR 2022-23: ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕ!

Mumbai T20 Squad for Syed Mushtaq Ali Trophy 2022-23: ಇತ್ತೀಚೆಗಷ್ಟೇ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲುವಂತೆ ಮಾಡಿದ ಕ್ಯಾಪ್ಟನ್‌ ಅಜಿಂಕ್ಯ ರಹಾನೆ, ಇದೀಗ 2022-23ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಸ್ಟಾರ್‌ ಆಟಗಾರರ ದಂಡನ್ನೇ ಹೊಂದಿರುವ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಬಹುನಿರೀಕ್ಷಿತ ದೇಶಿ ಟಿ20 ಕ್ರಿಕೆಟ್‌ ಟೂರ್ನಿಯು ಅಕ್ಟೋಬರ್‌ 11ರಂದು ಶುರುವಾಗಲಿದ್ದು, ಮುಂಬೈ ತಂಡ ತನ್ನ ಪಂದ್ಯಗಳನ್ನು ರಾಜ್‌ಕೋಟ್‌ನಲ್ಲಿ ಆಡಲಿದೆ.

Authored byವಿಜೇತ್ ಕುಮಾರ್ | Vijaya Karnataka Web 30 Sep 2022, 3:10 pm

ಹೈಲೈಟ್ಸ್‌:

  • 2022-23ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ.
  • ಸ್ಟಾರ್‌ ಆಟಗಾರರನ್ನು ಹೊಂದಿರುವ ಬಲಿಷ್ಠ ತಂಡ ಪ್ರಕಟ ಮಾಡಿದ ಮುಂಬೈ ಕ್ರಿಕೆಟ್‌ ಸಂಸ್ಥೆ.
  • ದುಲೀಪ್ ಟ್ರೋಫಿ ಯಶಸ್ಸಿನ ಬಳಿಕ ಮುಂಬೈ ತಂಡವನ್ನು ಮುನ್ನಡೆಸಲಿರುವ ಅಜಿಂಕ್ಯ ರಹಾನೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ajinkya Rahane
ಮುಂಬೈ ತಂಡದ ಆಟಗಾರರೊಂದಿಗೆ ಅಜಿಂಕ್ಯ ರಹಾನೆ (ಚಿತ್ರ: ಟಿಒಐ).
ಬೆಂಗಳೂರು: 2022-23ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈ ತಂಡವನ್ನು ಭಾರತ ಟೆಸ್ಟ್‌ ತಂಡದ ಮಾಜಿ ಉಪನಾಯಕ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ. ಬಹುನಿರೀಕ್ಷಿತ ದೇಶಿ ಟಿ20 ಕ್ರಿಕೆಟ್‌ ಟೂರ್ನಿ ಸಲುವಾಗಿ ಮುಂಬೈ ಕ್ರಿಕೆಟ್‌ ಸಂಸ್ಥೆ ತನ್ನ ಬಲಿಷ್ಠ ತಂಡವನ್ನು ಶುಕ್ರವಾರ ಪ್ರಕಟ ಮಾಡಿದ್ದು, ನಿರೀಕ್ಷೆಯಂತೆ ಸ್ಟಾರ್‌ ಆಟಗಾರ ತಂಡಕ್ಕೆ ಅಜಿಂಕ್ಯ ರಹಾನೆ ಅವರನ್ನು ಕ್ಯಾಪ್ಟನ್‌ ಆಗಿ ನೇಮಕ ಮಾಡಿದೆ. ಇತ್ತೀಚೆಗಷ್ಟೇ ಅಂತ್ಯಗೊಂಡ ದುಲೀಪ್‌ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್‌ ಝೋನ್‌ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆ ತಂಡಕ್ಕೆ ಚಾಂಪಿಯನ್ಸ್‌ ಪಟ್ಟ ಗೆದ್ದುಕೊಟ್ಟಿದ್ದರು.
ಅಜಿಂಕ್ಯ ರಹಾನೆ ಹೊರತಾಗಿ ಮುಂಬೈ ತಂಡದಲ್ಲಿ ಯಶಸ್ವಿ ಜೈಸ್ವಾಲ್‌, ಪೃಥ್ವಿ ಶಾ, ಸರ್ಫರಾಝ್‌ ಖಾನ್‌, ಶಾರ್ದುಲ್‌ ಠಾಕೂರ್‌ ಮತ್ತು ಶಾಮ್ಸ್‌ ಮುಲಾನಿ ಅವರಂತಹ ಸ್ಟಾರ್‌ ಆಟಗಾರರ ದಂಡೇ ಇದೆ. ಭಾರತ ತಂಡದ ಮಾಜಿ ಆಟಗಾರ ಸಲಿಲ್‌ ಅಂಕೋಲ ಸಾರಥ್ಯದ ಮುಂಬೈ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗೆ ಮುಂಬೈನ ಬಲಿಷ್ಠ ತಂಡ ಪ್ರಕಟ ಮಾಡಿದೆ. ಹಾರ್ದಿಕ್‌ ತಾಮೋರ್‌ ತಂಡದ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಅಕ್ಟೋಬರ್‌ನ ಎರಡನೇ ವಾರ ಶುರುವಾಗಲಿರುವ ಟೂರ್ನಿಯಲ್ಲಿ ಮುಂಬೈ ತಂಡ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಮ್, ರೈಲ್ವೇಸ್‌, ಉತ್ತರಾಖಂಡ್‌, ವಿದರ್ಭ ಮತ್ತು ಮಿಜೋರಾಮ್‌ ತಂಡಗಳಿವೆ. ಟೂರ್ನಿ ಸಲುವಾಗಿ ಮುಂಬೈ ತಂಡ ಅಕ್ಟೋಬರ್‌ 2ರಂದು ಅಹ್ಮದಾಬಾದ್‌ಗೆ ಪ್ರಯಾಣ ಬೆಳೆಸಲಿದೆ. ಟೂರ್ನಿಗೂ ಮುನ್ನ ಮುಂಬೈ ತಂಡ ಮೂರು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಗುಜರಾತ್‌ ಮತ್ತು ರಜಸ್ಥಾನ್‌ ತಂಡಗಳ ಎದುರು ರಾಜ್‌ಕೋಟ್‌ನಲ್ಲಿ ತಾಲೀಮು ನಡೆಸಲಿದೆ.

Ajinkya Rahane: ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ಗೆ ಅಂಗಣದಿಂದ ಹೊರ ನಡೆಯಲು ಹೇಳಿದ ಅಜಿಂಕ್ಯ ರಹಾನೆ!
ಸೈಯದ್‌ ಮುಷ್ತಾಕ್‌ ಅಲಿ ಟ್ರೋಫೊ ಟೂರ್ನಿಗೆ ಮುಂಬೈ ಟಿ20 ಕ್ರಿಕೆಟ್‌ ತಂಡ ಹೀಗಿದೆ
ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್‌, ಪೃಥ್ವಿ ಶಾ, ಸರ್ಫರಾಝ್‌ ಖಾನ್‌, ಶಾರ್ದುಲ್‌ ಠಾಕೂರ್‌, ಶಾಮ್ಸ್‌ ಮುಲಾನಿ, ತನುಷ್ ಕೋಟ್ಯಾನ್‌, ಹಾರ್ದಿಕ್‌ ತಾಮೋರ್‌ (ವಿಕೆಟ್‌ಕೀಪರ್‌), ಪ್ರಶಾಂತ್‌ ಸೋಲಂಕಿ, ಧವಳ್‌ ಕುಲಕರ್ಣಿ, ತುಶಾರ್‌ ದೇಶಪಾಂಡೆ, ಶಿವಂ ದುಬೇ, ಅಮನ್‌ ಖಾನ್‌, ಸಾಯ್‌ರಾಜ್‌ ಪಾಟಿಲ್‌, ಮೋಹಿತ್‌ ಆವಸ್ಥಿ.

2021-22ರ ಆವೃತ್ತಿಯಲ್ಲಿ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಮುಂಬೈ
ಕಳೆದ ವರ್ಷ 'ಬಿ' ಗುಂಪಿನಲ್ಲಿ ಆಡಿದ್ದ ಮುಂಬೈ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ನಾಕ್‌ಔಟ್‌ ಹಂತಕ್ಕೆ ತೇರ್ಗಡೆ ಆಗಲು ವಿಫಲವಾಯಿತು. ಟೂರ್ನಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್‌ ತಲುಪಿದವು. ಫೈನಲ್‌ನಲ್ಲಿ ಭರ್ಜರಿ ಆಟವಾಡಿದ್ದ ತಮಿಳುನಾಡು ತಂಡ ಟ್ರೋಫಿ ಗೆಲ್ಲುವ ಮೂಲಕ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ಬಾರಿ (3 ಬಾರಿ) ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದೆ.
ಲೇಖಕರ ಬಗ್ಗೆ
ವಿಜೇತ್ ಕುಮಾರ್
ವಿಜಯ ಕರ್ನಾಟಕ ವೆಬ್‌ನಲ್ಲಿ ಕ್ರೀಡಾ ವಿಭಾಗದ ಪತ್ರಕರ್ತರಾಗಿ 2019ರಿಂದ ಸೇವೆಯಲ್ಲಿದ್ದಾರೆ. ಇದಕ್ಕೂ ಮುನ್ನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಂಜೆ ವಾಣಿ ಮತ್ತು ಒನ್‌ ಇಂಡಿಯಾ ಸಂಸ್ಥೆಗಳಲ್ಲಿ ಟೆಕ್‌, ಆಟೊಮೊಬೈಲ್ಸ್‌, ರಾಜಕೀಯ, ಸಿನಿಮಾ ಮತ್ತು ವಾಣಿಜ್ಯ ಕ್ಷೇತ್ರಗಳ ಬಗ್ಗೆ ವರದಿ ಮಾಡಿದ ಅನುಭವ ಹೊಂದಿದ್ದು, ಟೆನಿಸ್‌, ಬ್ಯಾಡ್ಮಿಂಟನ್‌ ಮತ್ತು ಕ್ರಿಕೆಟ್‌ ಇವರ ಅಚ್ಚುಮೆಚ್ಚಿನ ಕ್ರೀಡೆಗಳು. ಪವರ್‌ಲಿಫ್ಟಿಂಗ್ ಇವರ ಹೊಸ ಪ್ರವೃತ್ತಿ, ವ್ಯಾಯಾಮ, ಸಾಹಿತ್ಯ ಓದು, ಪ್ರವಾಸ, ಬೈಕಿಂಗ್‌ ಹಾಗೂ ಚಾರಣ ಇವರ ನೆಚ್ಚಿನ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌