ಕರುಣ್ ಶತಕಕ್ಕೆ ಮಣಿದ ತ.ನಾಡು
ಸೈಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ20 ಟೂರ್ನಿ ಏಜೆನ್ಸೀಸ್ ವಿಶಾಖಪಟ್ಟಣ ಕರುಣ್ ನಾಯರ್(111) ಅವರ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್ ಬಲದಿಂದ ಮಿಂಚಿದ ಕರ್ನಾಟಕ ...
ಸೈಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ20 ಟೂರ್ನಿ
ವಿಶಾಖಪಟ್ಟಣ: ಕರುಣ್ ನಾಯರ್(111) ಅವರ ಸ್ಫೋಟಕ ಶತಕ ಹಾಗೂ ಸಂಘಟಿತ ಬೌಲಿಂಗ್ ಬಲದಿಂದ ಮಿಂಚಿದ ಕರ್ನಾಟಕ ತಂಡ, ಸೈಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ20 ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ 78 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ 4 ಅಂಕ ಸಂಪಾದಿಸಿದ ರಾಜ್ಯ ತಂಡ ಒಟ್ಟಾರೆ 12 ಅಂಕಗಳೊಂದಿಗೆ ತಮಿಳುನಾಡು ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇಲ್ಲಿನ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 179 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ತಮಿಳುನಾಡು, ರಾಜ್ಯದ ಯುವ ಲೆಗ್ಸ್ಪಿನ್ನರ್ ಪ್ರವೀಣ್ ದುಬೆ(19ಕ್ಕೆ4) ದಾಳಿಗೆ ಕುಸಿದು 16.3 ಓವರ್ಗಳಲ್ಲಿ ಕೇವಲ 101 ರನ್ಗಳಿಗೆ ಆಲ್ಔಟಾಯಿತು. ಆಫ್ಸ್ಪಿನ್ನರ್ ಕೆ.ಗೌತಮ್(14ಕ್ಕೆ2) 2 ವಿಕೆಟ್ ಉರುಳಿಸಿದರು.
ಕರುಣ್ ಏಕಾಂಗಿ ಹೋರಾಟ
ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 77 ರನ್ ಸಿಡಿಸಿದ್ದ ಕರುಣ್ ನಾಯರ್ ತಮಿಳುನಾಡು ವಿರುದ್ಧ ಏಕಾಂಗಿ ಹೋರಾಟ ನಡೆಸಿ ಅಮೋಘ ಶತಕ ಬಾರಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕರುಣ್ 52 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ಗಳೊಂದಿಗೆ ಅಬ್ಬರಿಸಿ 111 ರನ್ ಸಿಡಿಸಿ 18ನೇ ಓವರ್ನಲ್ಲಿ ಔಟಾದರು. ಒಂದೆಡೆ ಸಹ ಆಟಗಾರರು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ ಮತ್ತೊಂದೆಡೆ ಆರ್ಭಟಿಸಿದ ಕರುಣ್, ತಮಿಳುನಾಡು ಬೌಲರ್ಗಳನ್ನು ಧೂಳೀಪಟ ಮಾಡಿ ಕರ್ನಾಟಕ ಉತ್ತಮ ಮೊತ್ತ ಕಲೆ ಹಾಕಲು ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ಗಳಲ್ಲಿ 179/9 (ಕರುಣ್ ನಾಯರ್ 111, ಆರ್.ಸಮರ್ಥ್ 19, ಮಯಾಂಕ್ ಅಗರ್ವಾಲ್ 13; ಡೇವಿಡ್ಸನ್ 30ಕ್ಕೆ5).
ತಮಿಳುನಾಡು: 16.3 ಓವರ್ಗಳಲ್ಲಿ 101 (ವಾಷಿಂಗ್ಟನ್ ಸುಂದರ್ 34, ವಿಜಯ್ ಶಂಕರ್ 20; ಪ್ರವೀಣ್ ದುಬೆ 19ಕ್ಕೆ4, ಕೆ.ಗೌತಮ್ 14ಕ್ಕೆ2, ಎಸ್.ಅರವಿಂದ್ 4ಕ್ಕೆ1).