ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಇಂದಿನಿಂದ ಟಿ20 ಕಿಕ್‌

ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ಆರನೇ ಆವೃತ್ತಿಯ ಟಿ-20 ಕ್ರಿಕೆಟ್‌ನ ಮೊದಲೆರಡು ಚರಣಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಕ್ತಾಯಗೊಂಡಿದ್ದು, ಅಂತಿಮ ಚರಣದ ಪಂದ್ಯಗಳು ಗುರುವಾರ ಹುಬ್ಬಳ್ಳಿಯಲ್ಲಿ ಆರಂಭವಾಗಲಿವೆ.

Vijaya Karnataka 14 Sep 2017, 8:56 am

ಕೆಪಿಎಲ್‌-6: 3ನೇ ಚರಣದ ಪಂದ್ಯಗಳು ಇಂದು ಆರಂಭ | ಸೆಮಿಫೈನಲ್‌ ಗುರಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌

ನವೀನ್‌ ಬಿಲ್ಗುಣಿ

Vijaya Karnataka Web t20 kick in hubli
ಹುಬ್ಬಳ್ಳಿಯಲ್ಲಿ ಇಂದಿನಿಂದ ಟಿ20 ಕಿಕ್‌


ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ಆರನೇ ಆವೃತ್ತಿಯ ಟಿ-20 ಕ್ರಿಕೆಟ್‌ನ ಮೊದಲೆರಡು ಚರಣಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಮುಕ್ತಾಯಗೊಂಡಿದ್ದು, ಅಂತಿಮ ಚರಣದ ಪಂದ್ಯಗಳು ಗುರುವಾರ ಹುಬ್ಬಳ್ಳಿಯಲ್ಲಿ ಆರಂಭವಾಗಲಿವೆ.

ಇಲ್ಲಿನ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮೈದಾನ ಹೊಡಿಬಡಿ ಆಟಕ್ಕೆ ಆತಿಥ್ಯ ವಹಿಸಲಿದೆ. 9 ದಿನಗಳ ಅವಧಿಯಲ್ಲಿ ಏಳು ಲೀಗ್‌, ಎರಡು ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಕ್ಕೆ ಹುಬ್ಬಳ್ಳಿ ಕ್ರಿಕೆಟ್‌ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಕಳೆದ ಬಾರಿ ಪೂರ್ಣ ಪ್ರಮಾಣದ ಟೂರ್ನಿಗೆ ಸಾಕ್ಷಿಯಾಗಿದ್ದ ರಾಜನಗರದ ಮೈದಾನಕ್ಕೆ ಮತ್ತೊಮ್ಮೆ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯದ ಅವಕಾಶ ಒಲಿದು ಬಂದಿದೆ.

ಸೆಮಿಫೈನಲ್‌ ಕನಸಲ್ಲಿ ಟೈಗರ್ಸ್‌

ಗುರುವಾರ ನಡೆಯುವ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್‌ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ಸೆಣಸಾಡಲಿವೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್‌.ವಿನಯ್‌ಕುಮಾರ್‌ ನಾಯಕತ್ವದ ಟೈಗರ್ಸ್‌ ಪಡೆ, ಮೈಸೂರು ವಿರುದ್ಧ ಗೆದ್ದರೆ ಪ್ರಸಕ್ತ ಸಾಲಿನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ. ಮತ್ತೊಂದೆಡೆ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿರುವ ವಾರಿಯರ್ಸ್‌ ತಂಡ ಸೆಮೀಸ್‌ ಹಾದಿಯನ್ನು ಸುಗಮವಾಗಿಸಿಕೊಳ್ಳಬೇಕಾದರೆ ಈ ಪಂದ್ಯವನ್ನು ಗೆಲ್ಲಬೇಕಿದೆ.

ದೇಶಾದ್ಯಂತ ಕೆಪಿಎಲ್‌ ಹವಾ: ರಘುರಾಮ್‌ ಭಟ್‌

ದೇಶಾದ್ಯಂತ ಕೆಪಿಎಲ್‌ ಹವಾ ಸೃಷ್ಟಿಯಾಗಿದ್ದು, ಇದೇ ಮಾದರಿಯಲ್ಲಿ ಮಹಿಳಾ ಕೆಪಿಎಲ್‌ಗೆ ಮುಂದಾದರೂ ಪ್ರೋತ್ಸಾಹ ನೀಡಲಾಗುವುದು ಎಂದು ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಆಡಳಿತ ಮಂಡಳಿ ಸದಸ್ಯ ರಘುರಾಮ್‌ ಭಟ್‌ ತಿಳಿಸಿದ್ದಾರೆ.

ರಾಜಗರದ ಕೆಎಸ್‌ಸಿಎ ಮೈದಾನದಲ್ಲಿ 'ವಿಜಯ ಕರ್ನಾಟಕ' ಜತೆ ಮಾತನಾಡಿದ ಅವರು, ''ಕೆಪಿಎಲ್‌ ಟೂರ್ನಿ ಉದಯೋನ್ಮುಖ ಆಟಗಾರರಿಗೆ ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸುತ್ತಿದೆ. ರಣಜಿ, ಐಪಿಎಲ್‌ನಲ್ಲೂ ಕೆಪಿಎಲ್‌ ಆಡಿದ ಹಲವು ಆಟಗಾರರಿದ್ದಾರೆ. ಕೆಪಿಎಲ್‌ ಆರಂಭಕ್ಕೆ ಮೈಸೂರಿನ ರಾಜಮನೆತನದ ದಿ.ಶ್ರೀಕಂಠದತ್ತ ಒಡೆಯರ್‌ ಹಾಗೂ ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಕಾರಣೀಭೂತರಾಗಿದ್ದಾರೆ'' ಎಂದು ಹೇಳಿದರು.

ಹುಬ್ಬಳ್ಳಿ ಲಕ್ಕಿ ಗ್ರೌಂಡ್‌: ಅರ್ಜುನ ರಂಗ

ಮೈಸೂರು ವಾರಿಯರ್ಸ್‌ ತಂಡಕ್ಕೆ ರಾಜನಗರದ ಕೆಎಸ್‌ಸಿಎ ಮೈದಾನ ಲಕ್ಕಿ ಗ್ರೌಂಡ್‌ ಆಗಿದೆ ಎಂದು ತಂಡದ ಮಾಲೀಕ ಅರ್ಜುನ್‌ ರಂಗ ಹೇಳಿದ್ದಾರೆ.

''ಇದೇ ಮೈದಾನದಲ್ಲಿ ಮೊದಲ ಬಾರಿ ತಂಡ ಚಾಂಪಿಯನ್‌ ಆಗಿತ್ತು. ಇಲ್ಲಿಯೇ ಸತತ ಏಳು ಪಂದ್ಯಗಳನ್ನು ಗೆದ್ದ ದಾಖಲೆಯೂ ಇದೆ. ಕರುಣ್‌ ನಾಯರ್‌ ತಂಡಕ್ಕೆ ಮರಳಲಿದ್ದು ಬಲ ಹೆಚ್ಚಲಿದೆ. ಮನೀಷ್‌ ಪಾಂಡೆ ಗೈರು ತಂಡಕ್ಕೆ ಕಾಡುತ್ತಿಲ್ಲ. ತಂಡ ಸಮತೋಲನದಿಂದ ಕೂಡಿದೆ. ಐಪಿಎಲ್‌ ಆಡಿದ ಕೌಶಿಕ್‌, ಜೆ.ಸುಚಿತ್‌, ಶ್ರೇಯಸ್‌ ಗೋಪಾಲ್‌, ರಣಜಿ ಆಟಗಾರ ಎಸ್‌.ಎಲ್‌.ಅಕ್ಷಯ್‌, ಅರ್ಜುನ್‌ ಹೊಯ್ಸಳ ಸೇರಿದಂತೆ ಪ್ರಮುಖ ಆಟಗಾರರನ್ನು ಹೊಂದಿದೆ'' ಎಂದರು.

ಇಂದಿನ ಪಂದ್ಯ

ಹುಬ್ಬಳ್ಳಿ ಟೈಗರ್ಸ್‌ - ಮೈಸೂರು ವಾರಿಯರ್ಸ್‌

ಪಂದ್ಯ ಆರಂಭ: ಸಂಜೆ 7ಕ್ಕೆ

ಸ್ಥಳ: ಕೆಎಸ್‌ಸಿಎ ರಾಜನಗರ ಕ್ರೀಡಾಂಗಣ, ಹುಬ್ಬಳ್ಳಿ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 1

ಸ್ಟಾರ್‌ ಆಟಗಾರರು

ಹುಬ್ಬಳ್ಳಿ ಟೈಗರ್ಸ್‌ ಮೈಸೂರು ವಾರಿಯರ್ಸ್‌

ಆರ್‌.ವಿನಯ್‌ ಕುಮಾರ್‌ ಕರುಣ್‌ ನಾಯರ್‌

ಮಯಾಂಕ್‌ ಅಗರ್ವಾಲ್‌ ಸುನೀಲ್‌ ರಾಜು

ಅಭಿಷೇಕ್‌ ರೆಡ್ಡಿ ಜೆ.ಸುಚಿತ್‌

ಪ್ರವೀಣ್‌ ದುಬೆ ಶ್ರೇಯಸ್‌ ಗೋಪಾಲ್‌

ಕೆಪಿಎಲ್‌-6ನೇ ಆವೃತ್ತಿಯ ಅಂಕ ಪಟ್ಟಿ

ತಂಡ ಪಂದ್ಯ ಗೆಲುವು ಸೋಲು ಫಲಿತಾಂಶವಿಲ್ಲ ಅಂಕ

ಬೆಳಗಾವಿ ಪ್ಯಾಂಥರ್ಸ್‌ 04 03 01 00 06

ಹುಬ್ಬಳ್ಳಿ ಟೈಗರ್ಸ್‌ 04 03 01 00 06

ನಮ್ಮ ಶಿವಮೊಗ್ಗ 04 02 01 01 05

ಮೈಸೂರು ವಾರಿಯರ್ಸ್‌ 04 02 02 00 04

ಬಿಜಾಪುರ ಬುಲ್ಸ್‌ 04 02 02 00 04

ಬಳ್ಳಾರಿ ಟಸ್ಕರ್ಸ್‌ 04 01 02 01 03

ಬೆಂಗಳೂರು ಬ್ಲಾಸ್ಟರ್ಸ್‌ 04 00 04 00 00

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌