ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ | ಫೈನಲ್ನಲ್ಲಿ ಬಂಗಾಳ ವಿರುದ್ಧ 37 ರನ್ಗಳ ಜಯ
ಹೊಸದಿಲ್ಲಿ: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್(112) ಅವರ ಶತಕದ ಬಲದಿಂದ ಮಿಂಚಿದ ತಮಿಳುನಾಡು ತಂಡ, ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರ ನಡೆದ ಫೈನಲ್ ಹಣಾಹಣಿಯಲ್ಲಿ ವಿಜಯ್ ಶಂಕರ್ ಸಾರಥ್ಯದ ತಮಿಳುನಾಡು, ಮನೋಜ್ ತಿವಾರಿ ನೇತೃತ್ವದ ಬಂಗಾಳ ತಂಡವನ್ನು 37 ರನ್ಗಳಿಂದ ಮಣಿಸಿತು. ಈ ಮೂಲಕ ತಮಿಳುನಾಡು 5ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡರೆ, ಬಂಗಾಳ 5ನೇ ಬಾರಿ ಫೈನಲ್ನಲ್ಲಿ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ತಮಿಳುನಾಡು 47.2 ಓವರ್ಗಳಲ್ಲಿ 217 ರನ್ಗಳಿಗೆ ಆಲ್ಔಟಾಯಿತು. ಮೊಹಮ್ಮದ್ ಶಮಿ ಮತ್ತು ಅಶೋಕ್ ದಿಂಡಾ ದಾಳಿಗೆ ತತ್ತರಿಸಿದ ತಮಿಳುನಾಡು ಒಂದು ಹಂತದಲ್ಲಿ 49 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅಮೋಘ ಶತಕದೊಂದಿಗೆ ತಂಡವನ್ನು ಮೇಲೆತ್ತಿದರು. 120 ಎಸೆತಗಳನ್ನೆದುರಿಸಿದ ಕಾರ್ತಿಕ್ 14 ಬೌಂಡರಿಗಳ ನೆರವಿನಿಂದ 112 ರನ್ ಗಳಿಸಿ ಕೊನೆಯವರಾಗಿ ಔಟಾದರು.
ಸಾಧಾರಣ ಸವಾಲು ಬೆನ್ನಟ್ಟಿದ ಬಂಗಾಳ ಫೈನಲ್ನ ಒತ್ತಡವನ್ನು ನಿಭಾಯಿಸಲಾಗದೆ 180 ರನ್ಗಳಿಗೆ ಆಲ್ಔಟಾಗಿ ಸೋಲೊಪ್ಪಿಕೊಂಡಿತು. 5ನೇ ಕ್ರಮಾಂಕದಲ್ಲಿ ಸುದೀಪ್ ಚಟರ್ಜಿ ಗಳಿಸಿದ 58 ರನ್ ತಂಡದ ಪರ ದಾಖಲಾದ ಏಕೈಕ ಅರ್ಧಶತಕ. ಸಂಘಟಿತ ದಾಳಿಯ ಮೂಲಕ ಎದುರಾಳಿಯನ್ನು ಕಟ್ಟಿ ಹಾಕಿದ ತಮಿಳುನಾಡು ಬೌಲರ್ಗಳು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಶತಕವೀರ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ ಕಾರ್ತಿಕ್ 2 ಶತಕ, 4 ಅರ್ಧಶತಕಗಳೊಂದಿಗೆ 607 ರನ್ ಕಲೆ ಹಾಕಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು: 47.2 ಓವರ್ಗಳಲ್ಲಿ 217 (ದಿನೇಶ್ ಕಾರ್ತಿಕ್ 112, ಬಾಬಾ ಇಂದ್ರಜಿತ್ 32, ವಾಷಿಂಗ್ಟನ್ ಸುಂದರ್ 22; ಮೊಹಮ್ಮದ್ ಶಮಿ 26ಕ್ಕೆ4, ಅಶೋಕ್ ದಿಂಡಾ 36ಕ್ಕೆ3)
ಬಂಗಾಳ: 45.5 ಓವರ್ಗಳಲ್ಲಿ 180 (ಸುದೀಪ್ ಚಟರ್ಜಿ 58, ಮನೋಜ್ ತಿವಾರಿ 32; ಅಶ್ವಿನ್ ಕ್ರಿಸ್ಟ್ 23ಕ್ಕೆ2, ಎಂ.ಮೊಹಮ್ಮದ್ 30ಕ್ಕೆ2, ರಾಹಿಲ್ ಶಾ 38ಕ್ಕೆ2)