ಆ್ಯಪ್ನಗರ

ತಮಿಳುನಾಡು 5ನೇ ಬಾರಿ ಚಾಂಪಿಯನ್‌

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ | ಫೈನಲ್‌ನಲ್ಲಿ ಬಂಗಾಳ ವಿರುದ್ಧ 37 ರನ್‌ಗಳ ಜಯ ಏಜೆನ್ಸೀಸ್‌ ಹೊಸದಿಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ...

ಏಜೆನ್ಸೀಸ್ 21 Mar 2017, 4:00 am

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ | ಫೈನಲ್‌ನಲ್ಲಿ ಬಂಗಾಳ ವಿರುದ್ಧ 37 ರನ್‌ಗಳ ಜಯ

ಹೊಸದಿಲ್ಲಿ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌(112) ಅವರ ಶತಕದ ಬಲದಿಂದ ಮಿಂಚಿದ ತಮಿಳುನಾಡು ತಂಡ, ಪ್ರಸಕ್ತ ಸಾಲಿನ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ವಿಜಯ್‌ ಶಂಕರ್‌ ಸಾರಥ್ಯದ ತಮಿಳುನಾಡು, ಮನೋಜ್‌ ತಿವಾರಿ ನೇತೃತ್ವದ ಬಂಗಾಳ ತಂಡವನ್ನು 37 ರನ್‌ಗಳಿಂದ ಮಣಿಸಿತು. ಈ ಮೂಲಕ ತಮಿಳುನಾಡು 5ನೇ ಬಾರಿ ವಿಜಯ್‌ ಹಜಾರೆ ಟ್ರೋಫಿ ಮುಡಿಗೇರಿಸಿಕೊಂಡರೆ, ಬಂಗಾಳ 5ನೇ ಬಾರಿ ಫೈನಲ್‌ನಲ್ಲಿ ಸೋಲು ಕಂಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ತಮಿಳುನಾಡು 47.2 ಓವರ್‌ಗಳಲ್ಲಿ 217 ರನ್‌ಗಳಿಗೆ ಆಲ್‌ಔಟಾಯಿತು. ಮೊಹಮ್ಮದ್‌ ಶಮಿ ಮತ್ತು ಅಶೋಕ್‌ ದಿಂಡಾ ದಾಳಿಗೆ ತತ್ತರಿಸಿದ ತಮಿಳುನಾಡು ಒಂದು ಹಂತದಲ್ಲಿ 49 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತ ಅನುಭವಿ ಆಟಗಾರ ದಿನೇಶ್‌ ಕಾರ್ತಿಕ್‌ ಅಮೋಘ ಶತಕದೊಂದಿಗೆ ತಂಡವನ್ನು ಮೇಲೆತ್ತಿದರು. 120 ಎಸೆತಗಳನ್ನೆದುರಿಸಿದ ಕಾರ್ತಿಕ್‌ 14 ಬೌಂಡರಿಗಳ ನೆರವಿನಿಂದ 112 ರನ್‌ ಗಳಿಸಿ ಕೊನೆಯವರಾಗಿ ಔಟಾದರು.

ಸಾಧಾರಣ ಸವಾಲು ಬೆನ್ನಟ್ಟಿದ ಬಂಗಾಳ ಫೈನಲ್‌ನ ಒತ್ತಡವನ್ನು ನಿಭಾಯಿಸಲಾಗದೆ 180 ರನ್‌ಗಳಿಗೆ ಆಲ್‌ಔಟಾಗಿ ಸೋಲೊಪ್ಪಿಕೊಂಡಿತು. 5ನೇ ಕ್ರಮಾಂಕದಲ್ಲಿ ಸುದೀಪ್‌ ಚಟರ್ಜಿ ಗಳಿಸಿದ 58 ರನ್‌ ತಂಡದ ಪರ ದಾಖಲಾದ ಏಕೈಕ ಅರ್ಧಶತಕ. ಸಂಘಟಿತ ದಾಳಿಯ ಮೂಲಕ ಎದುರಾಳಿಯನ್ನು ಕಟ್ಟಿ ಹಾಕಿದ ತಮಿಳುನಾಡು ಬೌಲರ್‌ಗಳು ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಶತಕವೀರ ದಿನೇಶ್‌ ಕಾರ್ತಿಕ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ ಕಾರ್ತಿಕ್‌ 2 ಶತಕ, 4 ಅರ್ಧಶತಕಗಳೊಂದಿಗೆ 607 ರನ್‌ ಕಲೆ ಹಾಕಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

Vijaya Karnataka Web tamil nadu clinch fifth vijay hazare crown outplay bengal
ತಮಿಳುನಾಡು 5ನೇ ಬಾರಿ ಚಾಂಪಿಯನ್‌

ಸಂಕ್ಷಿಪ್ತ ಸ್ಕೋರ್‌

ತಮಿಳುನಾಡು: 47.2 ಓವರ್‌ಗಳಲ್ಲಿ 217 (ದಿನೇಶ್‌ ಕಾರ್ತಿಕ್‌ 112, ಬಾಬಾ ಇಂದ್ರಜಿತ್‌ 32, ವಾಷಿಂಗ್ಟನ್‌ ಸುಂದರ್‌ 22; ಮೊಹಮ್ಮದ್‌ ಶಮಿ 26ಕ್ಕೆ4, ಅಶೋಕ್‌ ದಿಂಡಾ 36ಕ್ಕೆ3)

ಬಂಗಾಳ: 45.5 ಓವರ್‌ಗಳಲ್ಲಿ 180 (ಸುದೀಪ್‌ ಚಟರ್ಜಿ 58, ಮನೋಜ್‌ ತಿವಾರಿ 32; ಅಶ್ವಿನ್‌ ಕ್ರಿಸ್ಟ್‌ 23ಕ್ಕೆ2, ಎಂ.ಮೊಹಮ್ಮದ್‌ 30ಕ್ಕೆ2, ರಾಹಿಲ್‌ ಶಾ 38ಕ್ಕೆ2)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌