ಆ್ಯಪ್ನಗರ

ಭಾರತದ ನಂ.4 ಸಮಸ್ಯೆಗೆ ಮನೀಶ್ ಪಾಂಡೆ ಉತ್ತರವಾಗಲಿದ್ದಾರೆಯೇ? ನೂತನ ಬ್ಯಾಟಿಂಗ್ ಕೋಚ್ ಹೇಳಿದ್ದೇನು?

ಕಳೆದ ಮೂರು ವರ್ಷಗಳಲ್ಲಿ ಎದುರಾಗಿರುವ ದೊಡ್ಡ ಸಮಸ್ಯೆಗೆ ನೂತನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಮನೀಶ್ ಪಾಂಡೆಗೆ ಹೆಚ್ಚಿನ ಅವಕಾಶ ನೀಡುವುದನ್ನು ಪ್ರತಿಪಾದಿಸಿದ್ದಾರೆ.

Vijaya Karnataka Web 6 Sep 2019, 4:29 pm
ಹೊಸದಿಲ್ಲಿ: ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ ಹಂತದಿಂದಲೇ ಹೊರಬಿದ್ದಿತ್ತು. ಇದಾದ ಬೆನ್ನಲ್ಲೇ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಭಾರತಕ್ಕೆ ಟ್ರೋಫಿ ನಷ್ಟವಾಗಿದೆ ಎಂಬ ಬಗ್ಗೆ ಬಲವಾದ ಆರೋಪಗಳು ಕೇಳಿಬಂದಿದೆ.
Vijaya Karnataka Web vikram-rathour


ಇದೇ ಕಾರಣಕ್ಕಾಗಿ ಸಂಜಯ್ ಬಂಗಾರ್ ಅವರನ್ನು ಬ್ಯಾಟಿಂಗ್ ಕೋಚ್ ಸ್ಥಾನದಿಂದ ತೆರವುಗೊಳಿಸಲಾಗಿದೆ. ಇದೀಗ ಈ ಸ್ಥಾನಕ್ಕೆ ಆಯ್ಕೆಯಾಗಿರುವ ವಿಕ್ರಮ್ ಸಿಂಗ್ ರಾಥೋಡ್, ಹೊಸ ಗೇಮ್‌ಪ್ಲ್ಯಾನ್‌ಗಳನ್ನು ಹಂಚಿಕೊಂಡಿದ್ದಾರೆ.

ಇದು ವಿಶ್ವಕಪ್‌ಗೆ ಮಾತ್ರ ಸೀಮಿತವಾದ ಅಂಶವಲ್ಲ. ಈ ವಿಚಾರವನ್ನು ಗಂಭೀರವಾಗಿ ಯೋಚಿಸಬೇಕು. ಏಕದಿನದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ನಿರ್ವಹಣೆ ನೀಡುತ್ತಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮನೀಷ್ ಪಾಂಡೆ ಕೂಡಾ ಇದ್ದಾರೆ. ದೇಶೀಯ ಹಾಗೂ ಭಾರತ ಎ ತಂಡದ ಪರ ಅವರಿಬ್ಬರು ಉತ್ತಮ ನಿರ್ವಹಣೆಯನ್ನು ನೀಡಿದ್ದಾರೆ ಎಂದು ಸೇರಿಸಿದರು.

ಈ ಆಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಅವರನ್ನು ನಾವು ಬೆಂಬಲಿಸಬೇಕು ಮತ್ತು ಸರಿಯಾದ ತಯಾರಿಯನ್ನು ಒದಗಿಸಬೇಕಾಗಿದೆ. ಇದರಿಂದ ಅವರು ಸುದೀರ್ಘ ಸಮಯದ ವರೆಗೆ ಆಡಬಹುದಾಗಿದೆ. ಬೇಕಾದಷ್ಟು ಸಾಮರ್ಥ್ಯ ಅವರಲ್ಲಿದೆ ಎಂದು ರಾಥೋಡ್ ವಿವರಿಸಿದರು.

ನನಗೆ ದೊಡ್ಡ ಜವಾಬ್ದಾರಿ ದೊರಕಿದ್ದು, ಕ್ರಿಕೆಟಿಗರಿಗೆ ತಮ್ಮ ಜೀವನದಲ್ಲಿ ದೊಡ್ಡ ವಿಷಯಗಳನ್ನು ಸಾಧಿಸಲು ನೆರವಾಗಬೇಕಿದೆ. ಹಾಗಾಗಿ ಬ್ಯಾಟ್ಸ್‌ಮನ್‌ಗಳಿಗೆ ಎಲ್ಲ ರೀತಿಯ ಸಹಾಯವನ್ನು ಮಾಡಲು ರೆಡಿಯಾಗಿದ್ದೇನೆ ಎಂದು ನುಡಿದರು.

ನಾವು ಅಪಾರ ಪ್ರತಿಭೆಯ ತಂಡವನ್ನು ಹೊಂದಿದ್ದೇವೆ. ಇದರ ಹೊರತಾಗಿ ಪ್ರತಿಭಾನ್ವಿತ ಕ್ರಿಕೆಟಿಗರ ದೊಡ್ಡ ಗುಂಪನ್ನು ಹೊಂದಿದ್ದೇವೆ. ಅವರಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಬೆಂಬಲಿಸಬೇಕಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ನೋಡಿದರೆ ಖಂಡಿತವಾಗಿಯೂ ಉತ್ತಮ ನಿರ್ವಹಣೆಯನ್ನು ನೀಡಬಹುದಾಗಿದೆ ಎಂದು ಹೇಳಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಜೋಡಿಯ ಬಗ್ಗೆ ಆತಂಕ ಮನೆ ಮಾಡಿದೆ. ನಮ್ಮ ಬಳಿ ಹಲವು ಆಯ್ಕೆಗಳಿದ್ದು, ಆರೋಗ್ಯಕರ ಪೈಪೋಟಿ ನಡೆಯುತ್ತಿದೆ. ಹಾಗಾಗಿ ಮತ್ತಷ್ಟು ಸ್ಥಿರ ಪ್ರದರ್ಶನ ನೀಡುವತ್ತ ಮಾರ್ಗಗಳನ್ನು ಹುಡುಕಬೇಕಿದೆ ಎಂದರು.

ಕೋಚ್ ರವಿಶಾಸ್ತ್ರಿ, ಸಹಾಯಕ್ ಕೋಚ್ ಬಿ ಅರುಣ್, ಆರ್ ಶ್ರೀಧರ್ ಮತ್ತು ನಾಯಕ ವಿರಾಟ್ ಕೊಹ್ಲಿರನ್ನು ಚೆನ್ನಾಗಿ ಬಲ್ಲವನಾಗಿದ್ದು, ಈ ಹಿಂದೆಯೂ ಜತೆಯಾಗಿ ಕೆಲಸ ಮಾಡಿರುತ್ತೇನೆ. ಬ್ಯಾಟ್ಸ್‌ಮನ್‌ಗಳನ್ನು ವೈಯಕ್ತಿಕವಾಗಿಯೂ ತಿಳಿದಿದ್ದೇನೆ. ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದೇನೆ. ಇವೆಲ್ಲವೂ ಭಾರತ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವಾಗುವ ಭರವಸೆಯಿದೆ ಎಂದು ಭಾರತದ ಮಾಜಿ ಆಯ್ಕೆಗಾರರೂ ಆಗಿರುವ ರಾಥೋಡ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌