ಬೆಂಗಳೂರು: ಚಿಕ್ಕಂದಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಗೈ ಕಳೆದುಕೊಂಡರೂ ಎಡಗೈಯಲ್ಲೇ ಕ್ರಿಕೆಟ್ ಆಡುವ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಳ್ಳಿ ತಾಲೂಕಿನ ಗುಂಟಿಗಾನಹಳ್ಳಿಯ ಶಿವಶಂಕರ್ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಯ ಅಭ್ಯಾಸ ಪಂದ್ಯದಲ್ಲಿ 95 ರನ್ ಗಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
98 ಎಸೆತಗಳನ್ನೆದುರಿಸಿದ ಶಿವಶಂಕರ್ 14 ಬೌಂಡರಿ ಸಹಿತ 95 ರನ್ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತಂಡದ ಪರ ಗರಿಷ್ಠ ರನ್ ಗಳಿಸಿರುವ ಶಿವಶಂಕರ್ ಅವರ ಸ್ಟ್ರೈಕ್ ರೇಟ್ 96.9. ಒಂಟಿಗೈಯಲ್ಲೇ ಉತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಆಡುವ ಸಾಮರ್ಥ್ಯ ಹೊಂದಿರುವ ಶಿವಶಂಕರ್ಗೆ ಇತ್ತೀಚಿಗೆ ಕೆಎಸ್ಸಿಎ ಲೀಗ್ನಲ್ಲೂ ಅಡಿ ಮಿಂಚಿದ್ದರು.
ಕಿಟ್ ನೀಡಿದ ಕೌನೇನ್ ಅಬ್ಬಾಸ್
ಶಿವಶಂಕರ್ಗೆ ಉತ್ತಮ ಬ್ಯಾಟ್ ಇರಲಿಲ್ಲ. ಆದರೂ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದರು. ಇದನ್ನು ಗಮನಿಸಿದ ರಾಜ್ಯ ರಣಜಿ ತಂಡದಆಟಗಾರ ಕೌನೇನ್ ಅಬ್ಬಾಸ್ ಒಂಟಿಗೈ ಆಟಗಾರ ಶಿವಶಂಕರ್ಗೆ ಪೂರ್ಣ ಕಿಟ್ ನೀಡಿ ಪ್ರೋತ್ಸಾಹಿಸಿದ್ದಾರೆ. ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ ನಡೆದ ರಣಜಿ ಪಂದ್ಯದ ವೇಳೆ ಕೌನೇನ್ ಅಬ್ಬಾಸ್ ತಮ್ಮ ಸಹೋದರನ ಮೂಲಕ ಶಿವಶಂಕರ್ಗೆ ಬ್ಯಾಟ್ ಮತ್ತು ಪ್ಯಾಡ್ ಒಪ್ಪಿಸಿದ್ದಾರೆ.
ಈ ಕುರಿತು ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಶಿವಶಂಕರ್, 'ಶನಿವಾರ ಇನಿಂಗ್ಸ್ ಬಹಳ ಖುಷಿಕೊಟ್ಟಿದೆ, ಕಿಟ್ ನೀಡಿದ ಕೌನೇನ್ ಅಬ್ಬಾಸ್ ಸರ್ಗೆ ಈ ಇನಿಂಗ್ಸ್ ಅರ್ಪಣೆ. ಅವರು ಉತ್ತಮ ಗುಣಮಟ್ಟದ ಬ್ಯಾಟ್ ನೀಡಿದ್ದರಿಂದ ಉತ್ತಮ ಇನಿಂಗ್ಸ್ ಆಡಲು ಸಾಧ್ಯವಾಯಿತು. ಎಲ್ಲರೂ ಇನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೌನೇನ್ ಅಬ್ಬಾಸ್ ಅವರ ಉಪಕಾರಕ್ಕೆ ಚಿರೃಣಿ, ಅದೇ ರೀತಿ ಪ್ರೋತ್ಸಾಹ ನೀಡುತ್ತಿರುವ ಕೆಐಒಸಿಯ ನಿರ್ದೇಶಕರಾದ ಇರ್ಫಾನ್ ಸೇಟ್ ಅವರಿಗೂ ಚಿರಋುಣಿ,' ಎಂದಿದ್ದಾರೆ.