ಆ್ಯಪ್ನಗರ

ಐಸಿಸಿ ನಿಯಮಕ್ಕೆ ಬದ್ಧ : ವಿನೋದ್‌ ರಾಯ್‌

ಐಸಿಸಿ ನಿಯಮವನ್ನು ಬಿಸಿಸಿಐ ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಿತ ಕ್ರಿಕೆಟ್‌ ಆಡಳಿತಾತ್ಮಕ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ಹೇಳುವ ಮೂಲಕ ಯೂಟರ್ನ್‌ ತೆಗೆದುಕೊಂಡಿದ್ದಾರೆ.

Agencies 9 Jun 2019, 5:00 am
ಹೊಸದಿಲ್ಲಿ: ಐಸಿಸಿ ನಿಯಮವನ್ನು ಬಿಸಿಸಿಐ ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಿತ ಕ್ರಿಕೆಟ್‌ ಆಡಳಿತಾತ್ಮಕ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌ ಹೇಳುವ ಮೂಲಕ ಯೂಟರ್ನ್‌ ತೆಗೆದುಕೊಂಡಿದ್ದಾರೆ.
Vijaya Karnataka Web we will go by icc norms coa cheif vinod rai on ms dhonis glove controversy
ಐಸಿಸಿ ನಿಯಮಕ್ಕೆ ಬದ್ಧ : ವಿನೋದ್‌ ರಾಯ್‌


ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಕೈಗವಸಿನಲ್ಲಿ ವಿಶಿಷ್ಟ ಸೇನಾ ಚಿಹ್ನೆ ಧರಿಸಿದ್ದ ಧೋನಿಗೆ ಬೆಂಬಲ ವ್ಯಕ್ತಪಡಿಸಿದ ಮರುದಿನವೇ ರಾಯ್‌ ಹೀಗೆ ಹೇಳಿದ್ದಾರೆ.

''ನಮ್ಮ ನಿಲುವು ಸುಸ್ಪಷ್ಟ. ನಾವು ಐಸಿಸಿ ನಿಯಮ ಪಾಲಿಸುತ್ತೇವೆ. ಇದು ಧಾರ್ಮಿಕ ಅಥವಾ ವಾಣಿಜ್ಯ ಸಂದೇಶವೇನಲ್ಲ. ಐಸಿಸಿ ಇತರ ಆಟಗಾರರಿಗೂ ಇಂತಹ ವಿಷಯಗಳಲ್ಲಿ ಅವಕಾಶ ಮಾಡಿಕೊಟ್ಟಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ವಿಷಯ ಉಲ್ಬಣಗೊಳ್ಳಲು ಬಿಡುವುದಿಲ್ಲ,'' ಎಂದು ರಾಯ್‌ ಶನಿವಾರ ಹೇಳಿದರು.

''ಗ್ಲವ್ಸ್‌ನಲ್ಲಿ ಬಳಸಲು ಎರಡು ಪ್ರಾಯೋಜಕ ಲಾಂಛನಗಳಿಗಷ್ಟೇ ಅವಕಾಶ ಮಾಡಿಕೊಡಲಾಗಿದೆ ಎಂಬುದು ನಮಗೆ ಐಸಿಸಿ ಮೂಲಕ ತಿಳಿದುಬಂತು. ಐಸಿಸಿ ನಿಯಮ ಉಲ್ಲಂಘಿಸುವ ಪ್ರಮೇಯವೇ ಇಲ್ಲ. ಅದರಲ್ಲಿ ದೇಶಪ್ರೇಮ ಅಥವಾ ರಾಷ್ಟ್ರೀಯತೆ ಇಲ್ಲ. ಅದು ಅವರ (ಧೋನಿ) ವೈಯಕ್ತಿಕ ಸಂದೇಶವಷ್ಟೇ. ನಾವು ಐಸಿಸಿ ನಿಯಮ ಪಾಲಿಸುತ್ತೇವೆ. ಯಾವುದೇ ನಿಯಮದ ವಿರುದ್ಧ ನಾವು ಹೋಗುವುದಿಲ್ಲ. ನಮ್ಮದೊಂದು ಕ್ರೀಡಾ ರಾಷ್ಟ್ರ,'' ಎಂದು ರಾಯ್‌ ಸ್ಪಷ್ಟಪಡಿಸಿದರು.

ಏತನ್ಮಧ್ಯೆ, ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಕೂಡ ಐಸಿಸಿ ನಿಯಮದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ವಿಶಿಷ್ಟ ಚಿಹ್ನೆ ಬಳಸಿದ್ದು ವೈಯಕ್ತಿಕ ನಿರ್ಧಾರ''

ಡೆಹ್ರಾಡೂನ್‌ : ಟೀಮ್‌ ಇಂಡಿಯಾದ ಮಾಜಿ ನಾಯಕ ಧೋನಿ ತಮ್ಮ ವಿಕೆಟ್‌ಕೀಪಿಂಗ್‌ ಕೈಗವಸಿನಲ್ಲಿ ಸೇನಾ ವಿಶಿಷ್ಟ ಚಿಹ್ನೆ ಬಳಸಿರುವುದು ಅವರ ವೈಯಕ್ತಿಕ ನಿರ್ಧಾರ ಎಂದು ಲೆ.ಜ.ಚೆರಿಷ್‌ ಮೈಥ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ಈ ವಿವಾದದಲ್ಲಿ ಸೇನೆಯನ್ನು ಎಳೆದು ತರಬಾರದೆಂದೂ ಅವರು ಸೂಚಿಸಿದರು. ''ಅದು ಧೋನಿ ಮತ್ತು ಐಸಿಸಿ ನಡುವಣ ವಿಷಯ. ಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ,'' ಎಂದರು.

ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್‌ ಎಸೆದ ಇನಿಂಗ್ಸ್‌ನ 40ನೇ ಓವರ್‌ನಲ್ಲಿ ಆ್ಯಂಡೈಲ್‌ ಫೆಹ್ಲುಕ್ವಾಯೊ ಅವರನ್ನು ಧೋನಿ ಸ್ಟಂಪ್‌ಔಟ್‌ ಮಾಡಿದ ವೇಳೆ ಅವರ ಕೈಗವಸಿನಲ್ಲಿದ್ದ 'ಬಲಿದಾನ್‌ ಬ್ಯಾಡ್ಜ್‌' ಟಿವಿ ರಿಪ್ಲೇಯಲ್ಲಿ ಬೆಳಕಿಗೆ ಬಂದಿತ್ತು.

ಅರೆಸೇನಾ ಪಡೆಗಳ ಕಮಾಂಡೊಗಳಷ್ಟೇ ಬ್ಯಾಡ್ಜ್‌ ಧರಿಸಬಹುದು

'ಬಲಿದಾನ್‌' ಎಂಬುದು ವಿಶೇಷ ಕಾರ್ಯಪಡೆ (ಪ್ಯಾರಾಚೂಟ್‌ ರೆಜಿಮೆಂಟ್‌ನ ಅಂಗ) ಬಳಸುವ ವಿಶಿಷ್ಟ ಚಿಹ್ನೆ. ಮೇಲ್ಮುಖವಾಗಿರುವ ರೆಕ್ಕೆಯಂತಹ ಎರಡು ಬ್ಲೇಡ್‌ಗಳ ನಡುವೆ ಕೆಳಮುಖವಾಗಿರುವ ಒಂದು ಕಮಾಂಡೊ ಡ್ಯಾಗರ್‌ (ಬಾಕು) ಇರುತ್ತದೆ. ಆ ಆಕೃತಿಯ ನಡುವೆ ದೇವನಾಗರಿಯಲ್ಲಿ 'ಬಲಿದಾನ್‌' ಎಂದು ಬರೆದಿರುತ್ತದೆ. ಅರೆಸೇನಾ ಪಡೆಗಳ ಕಮಾಂಡೊಗಳು ಮಾತ್ರ ಅದನ್ನು ಬಳಸಬಹುದಾಗಿದೆ.
ಧೋನಿಗೆ ಭಾರತೀಯ ಆಟಗಾರರ ಬೆಂಬಲ
ಬಿಸಿಸಿಐನ ಸಿಒಎ ವಿನೋದ್‌ ರಾಯ್‌ ಮತ್ತು ಸಿಇಒ ರಾಹುಲ್‌ ಜೊಹ್ರಿ ಗ್ಲವ್ಸ್‌ ವಿವಾದದಿಂದ ಹಿಂದೆ ಸರಿದಿದ್ದರೂ ಟೀಮ್‌ ಇಂಡಿಯಾ ಸದಸ್ಯರು ತಮ್ಮ 'ಕ್ಯಾಪ್ಟನ್‌' ಧೋನಿಗೆ ಬೆಂಬಲ ಮುಂದುವರಿಸಲು ತೀರ್ಮಾನಿಸಿದ್ದಾರೆ. ಅವರು ಪ್ರಸ್ತುತ ಕೊಹ್ಲಿಗೆ ನಾಯಕ ಎಂದೂ ಧೋನಿಗೆ ಗೌರವ ಸೂಚಕವಾಗಿ 'ಕ್ಯಾಪ್ಟನ್‌' ಎಂದೂ ಸಂಬೋಧಿಸುತ್ತಿದ್ದಾರೆ.

ಶುಕ್ರವಾರ ಮುಂಬಯಿಯಲ್ಲಿ ಸಭೆ ನಡೆಸಿದ ಬಳಿಕ ಸಿಒಎ ಹಾಗೂ ಸಿಇಒ ಪ್ರಕರಣಕ್ಕೆ ಅಂತ್ಯ ಹಾಡಲು ತೀರ್ಮಾನಿಸಿದ್ದರೂ ಸದ್ಯ ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ ಆಡುತ್ತಿರುವ ಟೀಮ್‌ ಇಂಡಿಯಾ ಸದಸ್ಯರು ಧೋನಿ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಅವರ ಬೆನ್ನಿಗೆ ನಿಲ್ಲುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಇತ್ತ ಭಾರತದಲ್ಲಿ ಕೆಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳೂ ಮಾಜಿ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌