ಆ್ಯಪ್ನಗರ

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕನ್ನಡತಿ ವಿ.ಆರ್‌ ವನಿತಾ!

ಭಾರತ ತಂಡದ ಅನುಭವಿ ಆಟಗಾರ್ತಿ ಹಾಗೂ ಕರ್ನಾಟಕದ ತಾರೆ ವಿ.ಆರ್ ವನಿತಾ, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. 31 ವರ್ಷದ ಆಟಗಾರ್ತಿ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಾದ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಮೂಲಕ ನಿವೃತ್ತಿಯ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಬಲಗೈ ಆರಂಭಿಕ ಬ್ಯಾಟರ್‌ ಮತ್ತು ಬಲಗೈ ಮಧ್ಯಮ ವೇಗಿ ಆಗಿರುವ ವನಿತಾ, ಭಾರತ ಮಹಿಳಾ ಕ್ರಿಕೆಟ್‌ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ 6 ಪಂದ್ಯ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 16 ಪಂದ್ಯಗಳನ್ನು ಆಡಿದ್ದಾರೆ.

Vijaya Karnataka Web 21 Feb 2022, 10:33 pm

ಹೈಲೈಟ್ಸ್‌:

  • ಸೋಷಿಯಲ್‌ ಮೀಡಿಯಾ ಮೂಲಕ ನಿವೃತ್ತಿ ಘೋಷಿಸಿದ ವಿ.ಆರ್‌ ವನಿತಾ.
  • ಭಾರತ ತಂಡದ ಪರ 16 ಟಿ20-ಐಗಳನ್ನು ಆಡಿರುವ ಕರ್ನಾಟಕದ ಆಟಗಾರ್ತಿ.
  • ಒಡಿಐ ಕ್ರಿಕೆಟ್‌ನಲ್ಲೂ ಭಾರತ ತಂಡ ಪರ 6 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಓಪನರ್‌.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web VR Vanitha 2022
ಕರ್ನಾಟಕದ ಅನುಭವಿ ಮಹಿಳಾ ಕ್ರಿಕೆಟರ್‌ ವಿ.ಆರ್‌ ವನಿತಾ (ಚಿತ್ರ: ಟ್ವಿಟರ್‌).
ಬೆಂಗಳೂರು: ಅನುಭವಿ ಆರಂಭಿಕ ಬ್ಯಾಟರ್‌ ಕರ್ನಾಕಟದ ವಿ.ಆರ್‌ ವನಿತಾ, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಸೋಮವಾರ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ತಮ್ಮ ನಿವೃತ್ತಿ ವಿಚಾರವನ್ನು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.
"19 ವರ್ಷಗಳ ಹಿಂದ ನಾನು ಕ್ರಿಕೆಟ್‌ ಆಡಲು ಆರಂಭಿಸಿದ್ದು, ಆಗ ಕ್ರೀಡೆಯನ್ನು ಪ್ರೀತಿಸುವ ಪುಟ್ಟ ಹುಡುಗಿಯಾಗಿದ್ದೆ. ಈ ದಿನವೂ ಕೂಡ ಕ್ರಿಕೆಟ್‌ ಮೇಲಿನ ಪ್ರೀತಿ ಹಾಗೆಯೇ ಇದೆ. ಇಲ್ಲಿ ನನ್ನ ದಾರಿ ಅಷ್ಟೇ ಬೇರೆಡೆಗೆ ತಿರುಗುತ್ತಿದೆ. ನನ್ನ ಹೃದಯ ಹೇಳುತ್ತಿದೆ ಆಟ ಮುಂದುವರಿಸು ಎಂದು, ಆದರೆ ನನ್ನ ದೇಹ ಸಾಕು ನಿಲ್ಲಿಸು ಎನ್ನುತ್ತಿದೆ. ನನ್ನ ದೇಹದ ಮಾತನ್ನು ಕೊನೆಗೂ ಕೇಳಿ, ನಿವೃತ್ತಿ ನೀಡುವ ನಿರ್ಧಾರ ಮಾಡಿದ್ದೇನೆ. ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಈ ಮೂಲಕ ಘೋಷಿಸುತ್ತಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಏಳು ಬೀಳನ್ನು ಕಂಡಿದ್ದೇ," ಎಂದು ವನಿತಾ ನಿವೃತ್ತಿ ಪತ್ರದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

"ನನ್ನ ವೃತ್ತಿಬದುಕಿನ ಬಗ್ಗೆ ಕೆಲವೇ ಕೆಲ ವಿಷಾದಗಳಿವೆ. ಭಾರತ ತಂಡದ ಪರ ಆಡಿರುವುದಕ್ಕೆ ಮತ್ತು ನನಗೆ ಸಿಕ್ಕ ಅವಕಾಶಗಳಿಗೆ ನಾನು ಚಿರ ಋಣಿ. ನನ್ನ ಈ ಪಯಣದಲ್ಲಿ ಹಲವರಿಗೆ ಧನ್ಯವಾದ ಹೇಳಬಯಸುತ್ತೇನೆ. ಇಷ್ಟು ವರ್ಷಕಾಲ ನನಗೆ ಬೆಂಬಲಿಸಿದ ಪ್ರತಿಯೊಬ್ಬರು, ನನ್ನ ಪೋಷಕರು, ಒಡ ಹುಟ್ಟಿದವರು ಎಲ್ಲರೂ ನನ್ನ ಪರವಾಗಿ ಭದ್ರವಾಗಿ ನಿಂತಿದ್ದರು. ನನಗೆ ಮಾರ್ಗದರ್ಶನ ನೀಡಿದ ಇರ್ಫಾನ್‌ ಸರ್‌, ಆರಂಭಿಕ ದಿನಗಳಲ್ಲಿ ನನ್ನಲ್ಲಿನ ಆಟಕ್ಕೆ ಒಂದು ದಿಕ್ಕು ಕೊಟ್ಟರು. ನಾಝ್‌ ಭಾಯ್‌ ನೆಟ್ಸ್‌ನಲ್ಲಿ ಗಂಟೆ ಗಟ್ಟಲೆ ನನ್ನ ಆಟ ಗಮನಿಸಿ ತಿದ್ದಿ ತೀಡಿದರು," ಎಂದು ವನಿತಾ ತಮ್ಮ ಪತ್ರದಲ್ಲಿ ಬೆರೆದುಕೊಂಡಿದ್ದಾರೆ.

ಐಪಿಎಲ್‌ ಹರಾಜು ದನದ ವ್ಯಾಪಾರದಂತೆ ಎಂದ ರಾಬಿನ್ ಉತ್ತಪ್ಪ!

2014ರ ಜನವರಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವನಿತಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಭಾರತ ತಂಡದ ಪರ 6 ಏಕದಿನ ಕ್ರಿಕೆಟ್‌ ಮತ್ತು 16 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಆರಂಭಿಕ ಬ್ಯಾಟರ್‌ ಮತ್ತು ಬಲಗೈ ಮಧ್ಯಮ ವೇಗಿ ಆಗಿರುವ ವನಿತಾ, ಎರಡೂ ವಿಭಾಗಗಳಲ್ಲಿ ಕ್ರಮವಾಗಿ 85 ಮತ್ತು 216 ರನ್‌ಗಳನ್ನು ಗಳಿಸಿದ್ದಾರೆ. 2016ರ ಐಸಿಸಿ ಮಹಿಳಾ ಕ್ರಿಕೆಟ್‌ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವನಿತಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ಸ್‌ ಪ್ರವೇಶಿಸಲು ವಿಫಲವಾಗಿತ್ತು.

"ನನ್ನ ಈಗಿನ ಕೋಚ್‌ ಮುರಳಿ ಸರ್‌ ಸದಾ ನನಗೆ ಉತ್ತಮ ಹಾದಿ ತೋರಿಸಿದ್ದಾರೆ. ನನ್ನ ಮೆಂಟರ್‌ ವರುಣ್‌ ಮತ್ತು ಸಹೋದರ ಫಿಟ್ನೆಸ್‌ಗೆ ಪರಿಚಯ ಮಾಡಿದರು. ಎನ್‌ಸಿಎ ಟ್ರೇನರ್‌ ಆನಂದ್‌, ಟ್ರೇನರ್‌ ರೋಹನ್‌ ಎಲ್ಲರಿಗೂ ಧನ್ಯವಾದ. ನನಗೆ ಅವಕಾಶಗಳನ್ನು ಕೊಟ್ಟ ಶಾಂತಾ ಮೇಡಮ್ ಮತ್ತು ಕಲ್ಪನಾ ಮೇಡಮ್ ಅವರಿಗೂ ಧನ್ಯವಾದ," ಎಂದಿದ್ದಾರೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟಿರುವ ಬಗ್ಗೆ ಸುಳಿವು ಕೊಟ್ಟ ದ್ರಾವಿಡ್‌!

ಕ್ಯಾಪ್ಟನ್‌ ಮಿಥಾಲಿ ರಾಜ್‌ಗೆ ಧನ್ಯವಾದ
ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಅವರಿಗೆ ವನಿತಾ ಇದೇ ವೇಳೆ ಧನ್ಯವಾದ ಹೇಳಿದ್ದಾರೆ. "ದಿಲೀಪ್‌ ಅಣ್ಣ ಅವರು ನನ್ನ ಸಹೋದರನಂತೆ ಕ್ರಿಕೆಟ್‌ ಮತ್ತು ನನ್ನ ಜೀವನಕ್ಕೆ ನೆರವಾಗಿದ್ದಾರೆ. ಗರ್ಗಿ ಮೇಡಮ್‌ ನನಗೆ ಹೊಸ ಆಯಾಮಗಳನ್ನು ತೋರಿಸಿಕೊಟ್ಟರು. ಜೂಲನ್‌ ನನಗೆ ಕಾಲ ಕಾಲಕ್ಕೆ ಅಗತ್ಯದ ಸಲಹೆಗಳನ್ನು ನೀಡಿದ್ದಾರೆ. ಮಿಥಾಲಿ ಸದಾ ನನ್ನ ನಾಯಕಿ. ಕ್ರಿಕೆಟ್‌ ಮತ್ತು ವೈಯಕ್ತಿಕ ಜೀವನದಲ್ಲಿ ಆಕೆಯೇ ನನ್ನ ಆದರ್ಶ," ಎಂದು ಬರೆದುಕೊಂಡಿದ್ದಾರೆ.

ದೇಶಿ ಟೂರ್ನಿಗಳಲ್ಲಿ ಹಲವು ವರ್ಷಗಳ ಕಾಲ ಕರ್ನಾಟಕ ಪರ ಆಡಿದ್ದ ವನಿತಾ, ಬಳಿಕ ಅವಕಾಶಗಳನ್ನು ಹುಡುಕುತ್ತಾ ಬಂಗಾಳ ತಂಡದ ಪರ ಬ್ಯಾಟ್‌ ಬೀಸಿದ್ದರು. ಬಂಗಾಳ ಕ್ರಿಕೆಟ್‌ ಸಂಸ್ಥೆ ಆಯೋಜನೆಯ ಮಹಿಳಾ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಆರ್ಯನ್‌ ಕ್ಲಬ್‌ ತಂಡದ ನಾಯಕಿಯಾಗಿ ಆಡಿದ್ದರು. ರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ 6 ಇನಿಂಗ್ಸ್‌ಗಳಿಂದ 225 ರನ್‌ ಗಳಿಸಿ ಬಂಗಾಳ ತಂಡವನ್ನು ಸೆಮಿಫೈನಲ್ಸ್‌ ತಲುಪುವಂತೆ ಮಾಡಿದ್ದರು.

"ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಬಂಗಾಳ ಕ್ರಿಕೆಟ್‌ ಸಂಸ್ಥೆಗೆ, ಅಲ್ಲಿನ ಅಧಿಕಾರಿಗಳಿಗೆ, ರಾಜ್ಯ ತಂಡದ ಕ್ಯಾಪ್ಟನ್ಸ್‌, ಕೋಚ್‌ಗಳು, ಫಿಸಿಯೋಥೆರಪಿಸ್ಟ್‌, ಕ್ರೀಡಾಂಗಣದ ಸಿಬ್ಬಂದಿ ವರ್ಗ ಎಲದ್ಲರಿಗೂ ಧನ್ಯವಾದ ಹೇಳಲು ವಯಸುತ್ತೇನೆ. ಕರ್ನಾಟಕ ತಂಡದಲ್ಲಿ ಆಡಿದ ನನ್ನೆಲ್ಲಾ ಸಹಾ ಆಟಗಾರ್ತಿಯರಿಗೂ ಧನ್ಯವಾದ. ಅವರೊಟ್ಟಿಗೆ ಹಲವು ಅವಿಸ್ಮರಣೀಯ ಸಮಯಗಳನ್ನು ಕಳೆದಿದ್ದೇನೆ. ಇದೀಗ ಮುಂದಿನ ದಿನಗಳಲ್ಲಿ ಕೋಚಿಂಗ್‌ ಕಡೆಗೆ ಗಮನ ನೀಡಿ, ಭವಿಷ್ಯದ ತಾರೆಗಳನ್ನು ನಿರ್ಮಿಸುವ ಕಡೆಗೆ ಶ್ರಮಿಸಲಿದ್ದೇನೆ," ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌