ಆ್ಯಪ್ನಗರ

ಪಂದ್ಯ ಗೆಲ್ಲುವ ಬುಮ್ರಾ ಸಾಮರ್ಥ್ಯವನ್ನು ಕಡೆಗಣಿಸಲು ಹೇಗೆ ಸಾಧ್ಯ? ಟೀಕಾಕಾರರ ವಿರುದ್ಧ ತಿರುಗಿಬಿದ್ದ ಶಮಿ

ಅತೀವ ಒತ್ತಡದಲ್ಲಿರುವ ಭಾರತೀಯ ಬೌಲರ್ ಜಸ್ಪ್ರೀತ್ ಬುಮ್ರಾಗೆ ಸಹ ವೇಗದ ಬೌಲರ್ ಮೊಹಮ್ಮದ್ ಶಮಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಒಂದೆರಡು ಪಂದ್ಯಗಳ ಕೆಟ್ಟ ನಿರ್ವಹಣೆಯಿಂದ ಬುಮ್ರಾ ಸಾಮರ್ಥ್ಯವನ್ನು ಕಡೆಗಣಿಸಲು ಹೇಗೆ ಸಾಧ್ಯ ಎಂದು ಟೀಕಾಕಾರರ ವಿರುದ್ಧ ಶಮಿ ಗುಡುಗಿದ್ದಾರೆ.

Vijaya Karnataka Web 15 Feb 2020, 3:10 pm
ಹ್ಯಾಮಿಲ್ಟನ್: ಕೇವಲ ಒಂದರೆಡು ಕೆಟ್ಟ ಪ್ರದರ್ಶನದ ಬೆನ್ನಲ್ಲೇ ಪಂದ್ಯ ಗೆಲ್ಲುವ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸಾಮರ್ಥ್ಯವನ್ನು ಹೇಗೆ ಕಡೆಗಣಿಸಲು ಸಾಧ್ಯ ಎಂದು ಪ್ರಶ್ನಿಸಿರುವ ಸಹ ಆಟಗಾರ ಮೊಹಮ್ಮದ್ ಶಮಿ ಟೀಕಾಕಾರರ ವಿರುದ್ದ ತಿರುಗಿ ಬಿದ್ದಿದ್ದಾರೆ.
Vijaya Karnataka Web ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ


ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಕೆಟ್ ಕಬಳಿಸುವಲ್ಲಿ ಜಸ್ಪ್ರೀತ್ ಬುಮ್ರಾ ವಿಫಲವಾಗಿದ್ದರು. ಗಾಯದಿಂದ ಚೇತರಿಕೆಗೊಂಡು ತಂಡವನ್ನು ಸೇರಿಕೊಂಡಿರುವ ಜಸ್ಪ್ರೀತ್ ಬುಮ್ರಾ ಪ್ರಭಾವಿ ಎನಿಸಿರಲಿಲ್ಲ. ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ಬುಮ್ರಾಗೆ ಬೆಂಬಲ ನೀಡಿರುವ ಮೊಹಮ್ಮದ್ ಶಮಿ ಹೇಳಿಕೆಯನ್ನು ಕೊಟ್ಟಿದ್ದಾರೆ.

"ಮೂರು ನಾಲ್ಕು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಲಿಲ್ಲ ಎಂಬ ಮಾತ್ರಕ್ಕೆ ಜಸ್ಪ್ರೀತ್ ಬುಮ್ರಾ ಪಂದ್ಯ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವನ್ನು ಹೇಗೆ ಕಡೆಗಣಿಸಲು ಸಾಧ್ಯ" ಎಂದು ಶಮಿ ಪ್ರಶ್ನಿಸಿದ್ದಾರೆ.

ಆರ್‌ಸಿಬಿ ನೂತನ ಲೋಗೋ ಮುಂಬೈ ಸ್ಟಾರ್ ಬೌಲರ್ ಶೈಲಿಯನ್ನು ಹೋಲುತ್ತಿದೆಯೇ?

"ಭಾರತಕ್ಕಾಗಿ ಬುಮ್ರಾ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಮರೆಯಲು ಅಥವಾ ಕಡೆಗಣಿಸಲು ಹೇಗೆ ಸಾಧ್ಯ? ಹಾಗಾಗಿ ನೀವು ಧನಾತ್ಮಕವಾಗಿ ಚಿಂತನೆ ಮಾಡಿದರೆ ಅದು ಆಟಗಾರ ಹಾಗೂ ಆತನ ಆತ್ಮವಿಶ್ವಾಸದ ಮೇಲೆ ಉತ್ತಮವಾಗಿ ಪರಿಣಮಿಸಲಿದೆ" ಎಂದರು.

ಗಾಯದಿಂದ ಪುನರಾಗಮನ ಮಾಡುವುದು ಕಷ್ಟದ ವಿಚಾರ ಎಂಬುದನ್ನು ಶಮಿ ಒತ್ತಿ ಹೇಳಿದರು. "ಓರ್ವ ಕ್ರೀಡಾಪಟುವಾಗಿ ಇದು ವಿಭಿನ್ನ ಪರಿಸ್ಥಿತಿ. ಹೊರಗಿನಿಂದ ಕಾಮೆಂಟ್ ಮಾಡುವುದು ಸುಲಭ. ಕ್ರೀಡಾಳುಗಳು ಗಾಯಕ್ಕೊಳಗಾಗುತ್ತಾರೆ. ಹಾಗಾಗಿ ಧನಾತ್ಮಕ ಅಂಶವನ್ನು ನೋಡಬೇಕೇ ಹೊರತಾಗಿ ಋಣಾತ್ಮಕ ಅಂಶಗಳನ್ನಲ್ಲ. 2015ರಲ್ಲಿ ನಾನು ಕೂಡಾ ಗಾಯಕ್ಕೊಳಗಾಗಿದ್ದೆ" ಎಂದು ಸೇರಿಸಿದರು.

ಕೆಲವೊಂದು ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡದಿದ್ದರೆ ಜನರು ವಿಭಿನ್ನವಾಗಿ ಯೋಚಿಸುತ್ತಾರೆ. ಇನ್ನು ನಮ್ಮ ವಿಷಯಕ್ಕೆ ಬಂದಾಗ ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದರು.

ಭಾರತೀಯ ವೇಗಿಗಳ ಮಿಂಚು; ನ್ಯೂಜಿಲೆಂಡ್ ಇಲೆವೆನ್ 235ಕ್ಕೆ ಆಲೌಟ್

ಅದೇ ಹೊತ್ತಿಗೆ ತಮ್ಮ ಅನುಭವಗಳನ್ನು ಯುವ ಆಟಗಾರರಿಗೆ ಹಂಚಿಕೊಳ್ಳುವುದಾಗಿ ಸೇರಿಸಿದರು. "ಅನುಭವಿ ಆಟಗಾರರು ನಿಮ್ಮ ಸುತ್ತಲೂ ಇರುವಾಗ, ಯುವ ಆಟಗಾರರು ಬೇಗನೆ ಪಕ್ವತೆಯನ್ನು ಸಾಧಿಸುತ್ತಾರೆ. ಹಾಗಾಗಿ ಹಿರಿಯ ಆಟಗಾರನಾಗಿ ಯುವ ಆಟಗಾರರ ಜೊತೆಗೆ ಬೆರೆಯುವುದಾಗಿ" ತಿಳಿಸಿದರು.

"ನವದೀಪ್ ಸೈನಿ ಪ್ರತಿಭಾವಂತ ವೇಗಿಯಾಗಿದ್ದು, ಹೆಚ್ಚಿನ ಬೆಂಬಲದ ಅಗತ್ಯವಿದೆ. ನಾವು ಹಿರಿಯರು ಅವರ ನೆರವಿಗಾಗಿ ಜೊತೆಗಿದ್ದೇವೆ" ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌