ಆ್ಯಪ್ನಗರ

ಅಶ್ವಿನ್‌ರಂತಹ ವಿಶ್ವದರ್ಜೆಯ ಸ್ಪಿನ್ನರ್‌ಗಳನ್ನು ಮೀರಿಸಿದ ಕರ್ನಾಟಕದ ಗೌತಮ್

ರಣಜಿ ಟ್ರೋಫಿ ಬಿ ಗುಂಪಿನ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಎಂಟು ಹಾಗೂ ಆರು ವಿಕೆಟ್ ಸೇರಿದಂತೆ ಒಟ್ಟು 14 ವಿಕೆಟ್ ಕಬಳಿಸಿರುವ ಆಫ್ ಸ್ಪಿನ್ನರ್ ಕೆ ಗೌತಮ್, ಕರ್ನಾಟಕದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

Vijaya Karnataka Web 13 Dec 2019, 12:40 pm
ದಿಂಡಿಗಲ್: ಬಲಗೈ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಸ್ಪಿನ್ ಮೋಡಿಯ ನೆರವಿನಿಂದ ಕರ್ನಾಟಕ ತಂಡವು ತಮಿಳುನಾಡು ವಿರುದ್ಧ ನಡೆದ ರಣಜಿ ಟ್ರೋಫಿ ಬಿ ಗುಂಪಿನ ಮೊದಲ ಪಂದ್ಯದಲ್ಲಿ 26 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Vijaya Karnataka Web ಕೃಷ್ಣಪ್ಪ ಗೌತಮ್


ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದಿದ್ದ ಗೌತಮ್ ಎರಡನೇ ಇನ್ನಿಂಗ್ಸ್‌ನಲ್ಲಿ ಎಂಟು ವಿಕೆಟ್ ಉರುಳಿಸಿ ಎದುರಾಳಿ ತಂಡದ ನಾಟಕೀಯ ಕುಸಿತಕ್ಕೆ ಕಾರಣವಾದರು. ಒಟ್ಟಾರೆಯಾಗಿ ಪಂದ್ಯದಲ್ಲಿ 14 ವಿಕೆಟ್ ಕಬಳಿಸಿದ ಗೌತಮ್ ಅರ್ಹತವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರವಾದರು. ಇದರೊಂದಿಗೆ ತಮಿಳುನಾಡು ತಂಡದಲ್ಲಿದ್ದ ಟೀಮ್ ಇಂಡಿಯಾ ಬೌಲರ್ ಆರ್ ಅಶ್ವಿನ್ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನು ಮೀರಿ ನಿಂತಿದ್ದಾರೆ.

ತಮ್ಮ ಬೌಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೌತಮ್, "ನಿಮ್ಮ ವೇಗ, ಲೈನ್ ಹಾಗೂ ಲೆಂಗ್ತ್ ಬದಲಾಯಿಸಬೇಕಿದೆ. ವಿಕೆಟ್ ಪಡೆಯಲು 10 ವೈವಿಧ್ಯಮಯ ಬೌಲಿಂಗ್‌ನ ಅವಶ್ಯಕತೆಯಿಲ್ಲ. ಬ್ಯಾಟ್ಸ್‌ಮನ್‌ಗೆ ಕಂಟಕ ತರಬಲ್ಲ ಒಂದು ಮಾರಕ ಅಸ್ತ್ರವಿದ್ದರೆ ಸಾಕು" ಎಂದು ವಿವರಿಸಿದರು.

ಸ್ಥಾನ ಭದ್ರವಾಗಿದೆಯೇ ಎಂಬುದನ್ನು ತಲೆಕೆಡಿಸಿಕೊಳ್ಳದೇ ಉತ್ತಮ ಆಟದತ್ತ ಗಮನ ಹರಿಸಿರುವ ಕೆಎಲ್ ರಾಹುಲ್

"ತಂಡದ ಒತ್ತಡ ಹಾಗೂ ಜವಾಬ್ದಾರಿಯನ್ನು ನಾನು ಆನಂದಿಸುತ್ತೇನೆ. ಇನ್ನು ನಿಖರತೆಯ ಬಗ್ಗೆ ಮಾತನಾಡುವುದಾದರೆ ದೈನಂದಿನ ಕಠಿಣ ಪರಿಶ್ರಮ ವಹಿಸುತ್ತೇನೆ" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ತಿಳಿಸಿದರು.

"ಇದು ನನ್ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳಲ್ಲಿ ಒಂದಾಗಿದೆ. ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತಿರುವ ತಮಿಳುನಾಡು ಬ್ಯಾಟ್ಸ್‌ಮನ್‌ಗಳ ವಿರುದ್ದ ಬೌಲಿಂಗ್ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹಾಗಾಗಿ ಗುಣಮಟ್ಟದ ತಂಡದ ವಿರುದ್ಧ ವಿಕೆಟ್ ಕಬಳಿಸಿರುವುದು ಉತ್ತಮ ಭಾವನೆ ತಂದಿದೆ" ಎಂದರು.

ರಣಜಿ ಟ್ರೋಫಿ: ತಮಿಳುನಾಡು ವಿರುದ್ಧ ಕರ್ನಾಟಕ್ಕೆ ರೋಚಕ ಜಯ ತಂದುಕೊಟ್ಟ ಗೌತಮ್‌!

ಕಳೆದ ಶುಕ್ರವಾರ ವಿವಾಹ ಜೀವನಕ್ಕೆ ಕಾಲಿರಿಸಿರುವ ಗೌತಮ್, 10 ತಾಸುಗಳಷ್ಟು ರಸ್ತೆ ಪ್ರಯಾಣದ ಮೂಲಕ ಭಾನುವಾರ ರಾತ್ರಿಯಷ್ಟೇ ತಂಡವನ್ನು ಸೇರಿದ್ದರು. ಇದೀಗ ಎರಡೂ ಇನ್ನಿಂಗ್ಸ್‌ಗಳಲ್ಲೂ ಐದಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡುವ ಮೂಲಕ ಮ್ಯಾಚ್ ವಿನ್ನರ್ ಎನಿಸಿದ್ದಾರೆ. "ನನ್ನಿಂದ ಸಾಧ್ಯವಾಗುವ ಎಲ್ಲವನ್ನು ಮಾಡಿದ್ದೇನೆ. 10 ತಾಸುಗಳಷ್ಟು ರಸ್ತೆ ಪ್ರಯಾಣ ಮಾಡಿರುವ ನಾನು ತಂಡಕ್ಕಾಗಿ ನನ್ನಿಂದಾಗುವ ಎಲ್ಲ ಸೇವೆಯನ್ನು ನೀಡಲು ಬಯಸಿದ್ದೆ" ಎಂದರು.

37 ಪ್ರಥಮ ದರ್ಜೆ ಪಂದ್ಯಗಳಲ್ಲಿ 146 ವಿಕೆಟ್ ಹಾಗೂ 834 ರನ್ ಗಳಿಸಿರುವ ಗೌತಮ್ ನೈಜ ಆಲ್‌ರೌಂಡರ್ ಎನಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ತಮ್ಮ ಫಾಪು ಮೂಡಿಸಿದ್ದಾರೆ. ಆದರೆ ಈಗಿನ ಪ್ರದರ್ಶನದ ಮೂಲಕ ತಮ್ಮ ಭವಿಷ್ಯ ಬದಲಾಗಬಹುದೇ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. "ಅವೆಲ್ಲವೂ ನನ್ನ ನಿಯಂತ್ರಣದಲ್ಲಿಲ್ಲ. ಉತ್ತಮ ಪ್ರದರ್ಶನ ನೀಡುವುದು ಮಾತ್ರ ನನ್ನ ಗುರಿಯಾಗಿದೆ" ಎಂದಿದ್ದಾರೆ.

ಸಚಿನ್, ಧೋನಿ, ಕೊಹ್ಲಿಯನ್ನೇ ಹಿಂದಿಕ್ಕಿ ಹೊಸ ದಾಖಲೆ ಬರೆದ ಯುವರಾಜ್ ಸಿಂಗ್

ಅತ್ಯಂತ ರೋಚಕವಾಗಿ ಸಾಗಿದ ರಣಜಿ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಕೊನೆಯ ಓವರ್‌ನಲ್ಲಿ ತಮಿಳುನಾಡು ತಂಡವನ್ನು ಆಲೌಟ್ ಮಾಡುವಲ್ಲಿ ಕರ್ನಾಟಕ ಯಶಸ್ವಿಯಾಯಿತು. ಈ ಮೂಲಕ ವಿಜಯ್ ಹಜಾರೆ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯಗಳ ಬಳಿಕವೀಗ ರಣಜಿ ಟ್ರೋಫಿಯಲ್ಲೂ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧ ಗೆಲುವು ಬಾರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌