ಆ್ಯಪ್ನಗರ

ಫೆ.14 ಕರಾಳ ದಿನ: ಹುತಾತ್ಮ ಯೋಧರಿಗಾಗಿ ಹೃದಯ ಮಿಡಿದ ಸಾನಿಯಾ

ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಸೆಲೆಬ್ರಿಟಿಗಳ ವಿರುದ್ಧ ಆಕ್ರೋಶ ಹರಡುತ್ತಿರುವ ಜನರ ಮೇಲೆ ಸಾನಿಯಾ ಮಿರ್ಜಾ ಗರಂ ಆಗಿದ್ದಾರೆ. ಅಲ್ಲದೆ ಫೆ.14 ಕರಾಳ ದಿನ ಎಂದು ಹೇಳಿದ್ದಾರೆ.

Vijaya Karnataka Web 17 Feb 2019, 8:06 pm
ಹೊಸದಿಲ್ಲಿ: ಪುಲ್ವಾಮಾ ಉಗ್ರರ ದಾಳಿಯ ಬಳಿಕ ಸೆಲೆಬ್ರಿಟಿಗಳು ಅದರಲ್ಲೂ ಪ್ರಮುಖವಾಗಿಯೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಂತಾಪವನ್ನು ಸೂಚಿಸಿರುವುದನ್ನು ಹೊರತುಪಡಿಸಿದರೆ ದಾಳಿಯನ್ನು ಕಟುವಾಗಿ ಖಂಡಿಸದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಹಾಗೂ ಟೀಕೆಗೊಳಗಾಗಿತ್ತು.
Vijaya Karnataka Web sania-pulwama


ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾನಿಯಾ, ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಾಟ್ಟಾಗಿದ್ದು, ಫೆ.14 ಕರಾಳ ದಿನ ಎಂದು ಬಿಂಬಿಸಿದ್ದಾರೆ.

"ಈ ಪೋಸ್ಟ್, ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ದೇಶಭಕ್ತಿ ಹಾಗೂ ಕಾಳಜಿಯನ್ನು ಸಾಬೀತು ಮಾಡಬೇಕೆಂದು ಬಯಸುವರಿಗಾಗಿದೆ. ಯಾಕೆ? ಏಕೆಂದರೆ ನಾವು ಸೆಲೆಬ್ರಿಟಿಗಳು. ನಿಮ್ಮಲ್ಲಿ ಹತಾಶೆಗೊಂಡ ಕೆಲವು ವ್ಯಕ್ತಿಗಳು ಮತ್ತಷ್ಟು ದ್ವೇಷವನ್ನು ಹರಡಲು ಬಯಸುವೀರಾ?" ಎಂದು ಪ್ರಶ್ನಿಸಿದ್ದಾರೆ.

ಅದೇ ಹೊತ್ತಿಗೆ ತಾವು ಭಯೋತ್ಪಾದನೆ ವಿರುದ್ಧ ಸಾನಿಯಾ ಒತ್ತಿ ಹೇಳಿದರು. ಅಲ್ಲದೆ ಪುಲ್ವಾಮಾ ದಾಳಿಯಿಂದ ಸಾಕಷ್ಟು ನೊಂದಿದ್ದು, ಘಟನೆಯನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.

ಅಷ್ಟಾದರೂ ಸಾನಿಯಾ ಶಾಂತಿಯ ಪರ ಮಾತನಾಡಿದ್ದಾರೆ. ನಾನು ಸಾರ್ವಜನಿಕವಾಗಿ ಖಂಡಿಸಬೇಕಾದ ಅಗತ್ಯವಿಲ್ಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆಯ ವಿರುದ್ಧ ಕಿರುಚಾಡುವ ಅಗತ್ಯವಿಲ್ಲ. ಖಂಡಿತವಾಗಿಯೂ ನಾವೆಲ್ಲರೂ ಭಯೋತ್ಪಾದನೆಯ ವಿರುದ್ಧವಾಗಿದ್ದೇವೆ. ಉತ್ತಮ ಮನೋಸ್ಥಿತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಭಯೋತ್ಪಾದನೆಯನ್ನು ವಿರೋಧಿಸುತ್ತಾರೆ. ಹಾಗೆ ಮಾಡದಿದ್ದರೆ ಅಲ್ಲೇನೋ ಸಮಸ್ಯೆಯಿದೆ ಎಂದು ಸೇರಿಸಿದರು.

"ನಾನು ನನ್ನ ದೇಶಕ್ಕಾಗಿ ಆಡುತ್ತೇನೆ, ಬೆವರು ಸುರಿಸುತ್ತೇನೆ. ಹಾಗೆ ದೇಶಕ್ಕಾಗಿ ಸೇವೆ ಸಲ್ಲಿಸುತ್ತೇನೆ. ನಾನು ಸಿಆರ್‌ಪಿಎಫ್ ಹಾಗೂ ಅವರ ಕುಟುಂಬದ ಜತೆಗಿದ್ದೇನೆ. ನನ್ನ ಹೃದಯವು ಹುತಾತ್ಮ ಯೋಧರಿಗಾಗಿ ಮಿಡಿಯುತ್ತಿದ್ದು, ನಮ್ಮ ದೇಶವನ್ನು ರಕ್ಷಿಸಿದ ಅವರು ನೈಜ ಹೀರೊಗಳು. ಫೆ.14 ಭಾರತದ ಪಾಲಿಗೆ ಕರಾಳ ದಿನ. ಇಂತಹ ದಿನ ಮರುಕಳಿಸದಿರಲಿ. ಯಾವ ಸಂತಾಪದಿಂದಲೂ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಈ ದಿನವನ್ನು ಮರೆಯಲು ಅಥವಾ ಕ್ಷಮಿಸಲು ಸಾಧ್ಯವಿಲ್ಲ. ಹೌದು, ಶಾಂತಿಗಾಗಿ ನನ್ನ ಪ್ರಾರ್ಥನೆ, ದ್ವೇಷದ ಬದಲು ನೀವು ಕೂಡಾ ಶಾಂತಿಯನ್ನೇ ಹರಡಬೇಕು" ಎಂದು ಕರೆ ನೀಡಿದರು.

ಅಂತಿಮವಾಗಿ ಸೆಲೆಬ್ರಿಟಿಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮುಖಾಂತರವಲ್ಲವಿದ್ದರೂ ದೇಶಕ್ಕಾಗಿ ತಮ್ಮ ಸೇವೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು.

"ಏನಾದರೂ ಒಳ್ಳೆಯದಾಗುವುದಾದರೆ ಕೋಪವು ಉತ್ತಮ. ಜನರನ್ನು ಟ್ರೋಲ್ ಮಾಡಿ ನೀವು ಏನನ್ನೂ ಗಿಟ್ಟಿಸಿಕೊಳ್ಳುವುದಿಲ್ಲ. ಜಗತ್ತಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ. ಯಾವತ್ತೂ ಇರುವುದು ಕೂಡಾ ಇಲ್ಲ. ಅಲ್ಲಿ ಕುಳಿತುಕೊಂಡು ಸಾರ್ವಜನಿಕ ವ್ಯಕ್ತಿಗಳು ದುರಂತದ ಬಗ್ಗೆ ಎಷ್ಟು ಪೋಸ್ಟ್ ಮಾಡಿದ್ದಾರೆಂದು ಗುರಿ ಮಾಡುವುದರ ಬದಲು ರಾಷ್ಟ್ರ ಸೇವೆ ಮಾಡಿ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸದೆಯೇ ನಮ್ಮ ಸೇವೆಯನ್ನು ನಾವು ಮಾಡುತ್ತಿದ್ದೇವೆ. ನೀವು ಕೂಡಾ ಅದನ್ನೇ ಮಾಡಿ. ಅದು ಕೂಡಾ ಮುಖ್ಯ. ಪ್ರಾರ್ಥನೆಗಳು ಮತ್ತು ಶಾಂತಿ" ಎಂದು ಮಾತನ್ನು ಕೊನೆಗೊಳಿಸಿದರು.

ಪಾಕಿಸ್ತಾನದ ಕ್ರಿಕೆಟಿಗ ಶೋಯಿಬ್ ಮಲಿಕ್‌ರನ್ನು ಸಾನಿಯಾ ಮದುವೆಯಾಗಿದ್ದರು. ಆದರೆ ಎಲ್ಲೂ ಪಾಕ್ ಪ್ರಚೋದಿತ ಭಯೋತ್ಪಾದನೆ ಬಗ್ಗೆ ಒಂದು ಮಾತನ್ನು ಆಡದಿರುವುದು ಹೆಚ್ಚಿನ ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌