ಆ್ಯಪ್ನಗರ

ಆಯ್ಕೆ ಟ್ರಯಲ್ಸ್‌ ಇಲ್ಲದೆ ಮೇರಿ ಕೋಮ್‌ಗೆ ಒಲಿಂಪಿಕ್‌ ಅರ್ಹತೆ ನೀಡಿದ್ದು ಸರಿಯೇ?

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರಷ್ಟೇ ಒಲಿಂಪಿಕ್ಸ್‌ಗೆ ನೇರ ಅರ್ಹತೆ. ಆದರೆ, ಕಂಚಿನ ಪದಕ ಗೆದ್ದು ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳದೆ ಮೇರಿ ಕೋಮ್‌ ಟೋಕಿಯೊ ಟಿಕೆಟ್‌ ಪಡೆದಿರುವುದನ್ನು ಯುವ ಬಾಕ್ಸರ್‌ ನಿಖಾತ್‌ ಝರೀನ್‌ ಪ್ರಶ್ನಿಸಿದ್ದಾರೆ.

Vijaya Karnataka Web 17 Oct 2019, 7:23 pm
ಹೊಸದಿಲ್ಲಿ: ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರತ ಬಾಕ್ಸಿಂಗ್‌ ತಂಡವನ್ನು ಪ್ರಕಟಿಸಲಾಗಿದ್ದು, ಆಯ್ಕೆ ಟ್ರಯಲ್ಸ್‌ ಇಲ್ಲದೇ ಸ್ಟಾರ್‌ ಬಾಕ್ಸರ್‌ ಮೇರಿ ಕೋಮ್‌ಗೆ ಸ್ಥಾನ ನೀಡಿರುವುದನ್ನು ಪ್ರಶ್ನಿಸಿರುವ ಕಿರಿಯರ ವಿಭಾಗದ ಮಾಜಿ ವಿಶ್ವ ಚಾಂಪಿಯನ್‌ ನಿಖಾತ್‌ ಝರೀನ್‌, ಕೋಮ್‌ ವಿರುದ್ಧ ಟ್ರಯಲ್ಸ್‌ ಪಂದ್ಯ ಕೋರಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೆ ಪತ್ರ ಬರೆದಿದ್ದಾರೆ.
Vijaya Karnataka Web nikhath zareen on mary kom 2019


ಮಹಿಳೆಯರ 51 ಕೆಜಿ ವಿಭಾಗದಲ್ಲಿ ಇತ್ತೀಚೆಗಷ್ಟೇ ನಡೆದ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ದಾಖಲೆಯ 8ನೇ ಪದಕ ಗೆದ್ದ 36 ವರ್ಷದ ಅನುಭವಿ ಬಾಕ್ಸರ್‌ ಮೇರಿ ಕೋಮ್‌, ಒಲಿಂಪಿಕ್ಸ್‌ ತಂಡದಲ್ಲಿ ನೇರವಾಗಿ ಸ್ಥಾನ ಪಡೆದಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದವರಿಗಷ್ಟೇ ನೇರ ಅರ್ಹತೆ ಎಂದು ಈ ಮೊದಲು ಸೂಚಿಸಲಾಗಿತ್ತು. ಹೀಗಾಗಿ ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟ ಮೇರಿ ಕೋಮ್‌ ಒಲಿಂಪಿಕ್ಸ್‌ ತಂಡದಲ್ಲಿ ಸ್ಥಾನ ಪಡೆಯಲು ಆಯ್ಕೆ ಟ್ರಯಲ್ಸ್‌ ನಲ್ಲಿ ಸ್ಪರ್ಧಿಸ ಬೇಕಿತ್ತು.

ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ಬೆಳ್ಳಿಗೆ ತೃಪ್ತಿಪಟ್ಟ ಮಂಜು ರಾಣಿ

"ಸರ್‌, ಕ್ರೀಡೆಯಲ್ಲಿ ನ್ಯಾಯಯುತ ಆಟಕ್ಕೆ ಮೊದಲ ಆದ್ಯತೆ ನೀಡಬೇಕು. ಒಲಿಂಪಿಕ್ಸ್‌ ಚಾಂಪಿಯನ್‌ಗಳು ಕೂಡ ಒಲಂಪಿಕ್ಸ್‌ನಲ್ಲಿ ಮರಳಿ ದೇಶವನ್ನು ಪ್ರತಿನಿಧಿಸಲು ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳಬೇಕು. ಮೇರಿ ಕೋಮ್‌ ನನ್ನ ಆರಾಧ್ಯ ದೈವ. ಅವರಂತೆ ನಾನೂ ಕೂಡ ಶ್ರೇಷ್ಠ ಬಾಕ್ಸರ್‌ ಆಗುವ ಕನಸು ಕಂಡಿದ್ದೇನೆ. ಅವರು ಬಾಕ್ಸಿಂಗ್‌ ದಂತಕತೆ. ಹೀಗಿರುವಾಗಿ ಒಲಿಂಪಿಕ್ಸ್‌ ಅರ್ಹತೆಯಿಂದ ಅವರನ್ನು ಹೊರಗಿಟ್ಟು ನೇರ ಅರ್ಹತೆ ನೀಡುವುದು ಸರಿಯಲ್ಲ," ಎಂದು 20 ವರ್ಷದ ಯುವ ಬಾಕ್ಸರ್‌ ನಿಖಾತ್‌ ಹೇಳಿದ್ದಾರೆ.

"ಒಲಿಂಪಿಕ್ಸ್‌ನಲ್ಲಿ 23 ಚಿನ್ನಗಳನ್ನು ಗೆದ್ದಿರುವ ಮೈಕಲ್‌ ಫೆಲ್ಪ್ಸ್‌ ಕೂಡ ಅರ್ಹತೆಗಾಗಿ ಮರಳಿ ಸ್ಪರ್ಧಿಸುತ್ತಿದ್ದಾರೆ. ನಾವು ಕೂಡ ಇದೇ ರೀತಿ ನಡೆದುಕೊಳ್ಳಬೇಕು.," ಎಂದು ಮನವಿ ಮಾಡಿಕೊಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪು; ಕಂಚಿನ ಪದಕಕ್ಕೆ ತೃಪ್ತಿಪಟ್ಟ ಮೇರಿ ಕೋಮ್

ಈ ಮಧ್ಯೆ ಭಾರತೀಯ ಬಾಕ್ಸಿಂಗ್‌ ಸಂಸ್ಥೆ (ಬಿಎಫ್‌ಐ) ತೆಗೆದುಕೊಂಡಿರುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮೇರಿ ಕೋಮ್‌ ನೇರ ಅರ್ಹತೆಯನ್ನು ಸಮ್ಮತಿಸಿಕೊಂಡಿದ್ದಾರೆ.

"ನನಗೆ ಯಾವುದೇ ರೀತಿಯ ಸಹಾಯ ಬೇಕಿಲ್ಲ. ಬದಲಿಗೆ ನ್ಯಾಯಯುತವಾಗಿ ಸಿಗಬೇಕಾದ ಅವಕಾಶವನ್ನಷ್ಟೇ ಕೇಳುತ್ತಿದ್ದೇನೆ. ಟ್ರಯಲ್‌ ಬಳಿಕ ಮೇರಿ ಕೋಮ್‌ ಅಲ್ಲ ಯಾರು ಬೇಕಾದರೂ ಆಯ್ಕೆಯಾಗಲಿ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತರಲು ಎಲ್ಲಾ ಸ್ಪರ್ಧಿಗಳಿಗೂ ನ್ಯಾಯಯುತ ಅವಕಾಶ ಸಿಕ್ಕಿತು ಎಂದು ನೆಮ್ಮದಿಯಿಂದ ನಿದ್ರೆ ಮಾಡಲು ಸಾಧ್ಯವಾಗುತ್ತದೆ," ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌