ಆ್ಯಪ್ನಗರ

ಕೋಟಿ ಕೋಟಿ ಹಣಕ್ಕೆ ಸೇಲಾಗಿದ್ದಾರೆ ಎಂಬ ಸಚಿವರ ಆರೋಪಗಳನ್ನು "ಸಾರಾ' ಸಗಟು ತಿರಸ್ಕರಿಸಿದ ವಿಶ್ವನಾಥ್‌

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಹಾಗೂ ಅತೃಪ್ತ ಶಾಸಕರ ನಡುವಿನ ಮುಸುಕಿನ ಗುದ್ದಾಟ ಜೋರಾಗಿದೆ. ಸಾರಾ ಮಹೇಶ್‌ ಹಾಗೂ ಎಚ್‌ ವಿಶ್ವನಾಥ್‌ 'ಕೋಟಿ ಕೋಟಿ ಕಲಹ' ಮುಂದುವರಿದಿದೆ.

Vijaya Karnataka Web 19 Jul 2019, 5:40 pm
ಬೆಂಗಳೂರು: ಸಾಲ ತೀರಿಸಲು ಕೋಟಿ ಕೋಟಿ ಹಣವನ್ನು ಪಡೆಯುವುದಕ್ಕೆ ಬಿಜೆಪಿ ಸೇರಿದ್ದಾರೆ ಎಂದು ಆರೋಪ ಮಾಡಿರುವ ಸಚಿವ ಸಾ.ರಾ. ಮಹೇಶ್‌ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧ ಎಂದು ಅತೃಪ್ತ ಶಾಸಕರ ಬಣದಲ್ಲಿರುವ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.
Vijaya Karnataka Web ಎಚ್‌ ವಿಶ್ವನಾಥ್‌
ಎಚ್‌ ವಿಶ್ವನಾಥ್‌


ಮುಂಬೈಯಿಂದ ಖಾಸಗಿ ವಾಹಿನಿ ಜತೆ ಮಾತನಾಡಿದ ವಿಶ್ವನಾಥ್‌ ಸಚಿವ ಸಾರಾ ಮಹೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವಾಸಮತಯಾಚನೆ ಚರ್ಚೆಯ ವೇಳೆ ಮಾತನಾಡಿದ ಸಚಿವ ಸಾರಾ ಮಹೇಶ್‌, ಎಚ್‌ ವಿಶ್ವನಾಥ್‌ ವಿರುದ್ಧ ಬಹುದೊಡ್ಡ ಆರೋಪ ಮಾಡಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದವರು, ಈಗ ಪಕ್ಷಕ್ಕೆ ರಾಜೀನಾಮೆ ನೀಡಿ ಇದಕ್ಕೆಲ್ಲ ನಾನೇ ಕಾರಣ ಎಂದಿದ್ದರು. ಅವರೊಂದಿಗೆ ಮಾತನಾಡಿದಾಗ ಚುನಾವಣೆ ಸಂದರ್ಭದಲ್ಲಿ ಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸಲು ನೆರವು ನೀಡಿ ಎಂದು ಕೋರಿದ್ದರು. ತಿಂಗಳು ತಿಂಗಳು ಕಂತು ತೀರಿಸುವುದಾಗಿ ಭರವಸೆ ನೀಡಿದ್ದೇ ಎಂದು ಸಚಿವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಚ್‌ ವಿಶ್ವನಾಥ್‌, ನನ್ನ ಅನುಪಸ್ಥಿತಿಯಲ್ಲಿ ಸಚಿವ ಸಾರಾ ಮಹೇಶ್‌ ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ. ಸದನದ ಹಕ್ಕು ಬಾಧ್ಯತೆಗಳನ್ನು ರಕ್ಷಿಸಬೇಕಾದ ಹಾಗೂ ತಾವು ಪಾರದರ್ಶಕ ಎಂದು ಹೇಳಿಕೊಳ್ಳುವ ಸ್ಪೀಕರ್‌ ಈ ರೀತಿ ಮಾತನಾಡಲು ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದರು.

ಸಾರಾ ಮಹೇಶ್‌ ಅವರು ವೃಥಾ ಆರೋಪ ಮಾಡಿದ್ದಾರೆ. ಸಚಿವರಿಗೆ ಧೈರ್ಯವಿದ್ದರೆ ಸದನದ ಹೊರಗಡೆಯೂ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಲಿ ಎಂದು ವಿಶ್ವನಾಥ್‌ ಸವಾಲು ಹಾಕಿದರು.

ನನ್ನಂಥವರು ಸಾಲ ಮಾಡಿಯೇ ಚುನಾವಣೆ ಎದುರಿಸಬೇಕಾಗುತ್ತದೆ. 20 ಕೋಟಿ ರೂ.ಗಳಿಗೂ ಅಧಿಕ ಸಾಲ ಇದೆ. ನನ್ನ ಸಾಲಕ್ಕೆ ಕುಟುಂಬ ಸದಸ್ಯರು ಜವಾಬ್ದಾರರು. ಸ್ನೇಹಿತರು ನೆರವು ನೀಡುತ್ತಾರೆ. ಇದಕ್ಕಾಗಿ ರಿಯಲ್‌ ಎಸ್ಟೇಟ್‌ನ ಸಾ.ರಾ. ಮಹೇಶ್‌ ನೆರವು ನನಗೆ ಬೇಕಾಗಿಲ್ಲ ಎಂದರು.

ತಂದೆ, ತಾಯಿ, ಮಕ್ಕಳ ಮೇಲೆ ಆಣೆ ಮಾಡಿದ್ದಾರೆ. ಸಾರಾ ಮಹೇಶ್‌ ಸತ್ಯ ಹೇಳಿದ್ದೇ ಆಗಲಿ. ಸದನದ ಹೊರಗೂ ಮಾತನಾಡಬೇಕು. ಕಾಲ ಕೂಡಿಬಂದಾಗ ಮಹೇಶ್ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ. ಕಾನೂನು ಹೋರಾಟಕ್ಕೆ ಚಿಂತನೆ ನಡೆಸುತ್ತಿದ್ದೇನೆ ಎಂದು ವಿಶ್ವನಾಥ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ