ಆ್ಯಪ್ನಗರ

ಸೀರಿಯಲ್ ಪ್ರಚಾರಕಿಯಾದ ನಟಿ ಪ್ರಿಯಾಂಕಾ ಉಪೇಂದ್ರ

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ರಾಜೇಶ್ ನಟರಂಗ, ಆರತಿ ಕುಲಕರ್ಣಿ, ನಿಶಿತಾ ಗೌಡ ಹಾಗೂ ಪುಟಾಣಿ ತಾರೆ ಶೃತಾ ಮುಖ್ಯಭೂಮಿಕೆಯಲ್ಲಿರುವ ಈ ಕೌಟುಂಬಿಕ ಧಾರಾವಾಹಿಯ ಪ್ರಚಾರಕಿಯಾಗಿ ನಟಿ ಪ್ರಿಯಾಂಕಾ ಉಪೇಂದ್ರ ಕಾಣಿಸುತ್ತಿದ್ದಾರೆ.

Vijaya Karnataka Web 30 Jul 2019, 3:01 pm
ತಂದೆ, ಮಗಳಿಗೆ ಹೇಳಿರುವ ಒಂದು ಸುಳ್ಳು ಅವಳ ಕನಸಿಗೆ ಸ್ಫೂರ್ತಿಯಾಗಿರುತ್ತದೆ. ತಾನು ದೊಡ್ಡವಳಾಗಿ ಒಬ್ಬ ಡಾಕ್ಟರ್ ಆಗಬೇಕೆಂಬುದೇ ನಮ್ಮ ಪುಟ್ಟ ಕಥಾನಾಯಕಿ ಅನುಳ ದೊಡ್ಡ ಕನಸು. ವಿಧಿಯ ಲೀಲೆಯಂತೆ, ತಂದೆಗೆ ಪೂರ್ಣ ಮಾಡಲಾಗದ ಆ ಕನಸನ್ನ ಪುಟ್ಟ ಮಗಳು ತನ್ನದಾಗಿಸಿಕೊಂಡು ಅದನ್ನ ನನಸಾಗಿಸುವ ಕಥೆಯೇ ಈ "ನಾನು ನನ್ನ ಕನಸು". ಈ ಹೊಸ ಧಾರಾವಾಹಿ ಉದಯ ಟಿವಿಯಲ್ಲಿ ಆರಂಭವಾಗುತ್ತಿದೆ.
Vijaya Karnataka Web naanu-nanna-kanasu


ಆದರೆ ಕನಸಿನ ದಾರಿಯಲ್ಲಿ ಎಲ್ಲವೂ ಸುಗಮವಾಗಿರದೆ, ದೊಡ್ಡ ಆಘಾತವೊಂದನ್ನ ಅನು ಎದುರಿಸಬೇಕಾಗುತ್ತದೆ. ಅನುಳ ಕನಸಿಗೆ ಅಡ್ಡಗಾಲಾಗಿರುವ ವಿಲನ್‍ಗಳು ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನೇ ಎಸೆಯುತ್ತಿದ್ದಾರೆ. ಆ ಎಲ್ಲ ಅಡೆತಡೆಗಳನ್ನ ಎದುರಿಸಿ ತನ್ನ ಕನಸನ್ನ ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆ ಎಂಬುದೇ ಈ ಕಥೆಯ ಜೀವಾಳ. ಹಾಗಂತ ಬಹುತೇಕ ಧಾರಾವಾಹಿಗಳಂತೆ, ಹೆಣ್ಣೊಬ್ಬಳ ಗೋಳಿನ ಕಥೆಯಂತೂ ಖಂಡಿತ ಅಲ್ಲ. ಕಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತಾ ಲವಲವಿಕೆಯಿಂದ ಇರುವ ಹುಡುಗಿ ಅನು.

ಕಿರುತೆರೆಯಲ್ಲಿ ಮಿಂಚಿದ ಪುಟಾಣಿ ತಾರೆ “ಶೃತಾ” ಅನು ಪಾತ್ರ ನಿರ್ವಹಿಸುತ್ತಿದ್ದರೆ, ಕನಸನ್ನ ಹೇಳಿಕೊಟ್ಟ ತಂದೆಯಾಗಿ ಸಿನಿಮಾದ ಖ್ಯಾತ ನಟರಾದ ರಾಜೇಶ್ ನಟರಂಗ ನಿರ್ವಹಿಸುತ್ತಿದ್ದಾರೆ. ಅನುವಿನ ತಾಯಿಯಾಗಿ ಆರತಿ ಕುಲಕರ್ಣಿ ನಟಿಸುತ್ತಿದ್ದರೆ, ಅನುವಿನ ಕನಸಿಗೆ ಅಡ್ಡವಾಗಿರುವ ಮುಖ್ಯ ಖಳರಾಗಿ ನಿಶಿತಾ ಗೌಡ ನಟಿಸುತ್ತಿದ್ದಾರೆ. ಬಹಳ ವರ್ಷಗಳ ವಿರಾಮದ ನಂತರ ನಿಶಿತಾ ಗೌಡ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿರುವುದು ವಿಶೇಷ. ಇತರ ಮುಖ್ಯಪಾತ್ರಗಳಲ್ಲಿ ವಿಶಾಲ್ ರಘು, ಹರೀಶ್,ಬಾಲನಟರಾಗಿ ಸ್ಕಂದ ನಟಿಸುತ್ತಿದ್ದಾರೆ. [ಚಂದನವನಕ್ಕೆ ಕಾಲಿಟ್ಟ ಉಪೇಂದ್ರ ಮಗಳು]

ಇಷ್ಟೇ ಅಲ್ಲದೆ, ನಾನು ನನ್ನ ಕನಸು ಧಾರಾವಾಹಿಯ ಪ್ರಮೋಷನ್‍ಗೆ ಖ್ಯಾತ ಸಿನೆಮಾತಾರೆ ಪ್ರಿಯಾಂಕಾ ಉಪೇಂದ್ರ ಭಾಗಿಯಾಗಿರುವುದು ಇನ್ನೊಂದು ವಿಶೇಷ. ಇದರ ಪ್ರೋಮೋಗಳಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಥೆಯ ಮುಖ್ಯ ಘಟ್ಟಗಳನ್ನು ತೆರೆಯ ಮೇಲೆ ಬಂದು ಹೇಳಲಿದ್ದಾರೆ.

ಹಿಂದಿ ಟೆಲಿವಿಷನ್‍ನ ಬಹುಪ್ರಸಿದ್ಧ ಸಂಸ್ಥೆಯಾದ "ಶಶಿ ಸುಮೀತ್ ಗ್ರೂಪ್", ನಾನು ನನ್ನ ಕನಸು ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ಹೈದರಾಬಾದ್‍ನ ಅದ್ದೂರಿ ಸೆಟ್‍ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಇಡೀ ಕನ್ನಡ ಟೆಲಿವಿಷನ್‍ನಲ್ಲಿ ಇಂಥಾ ಒಂದು ಸೆಟ್ ಇದೇ ಮೊದಲ ಬಾರಿಗೆ ನೋಡಲು ಸಿಗುತ್ತಿದೆ ಎಂಬುದು ಉದಯ ಟಿವಿಯ ಹೆಮ್ಮೆ. ಈ ಸೆಟ್ ನೋಡುಗರನ್ನ ನಿಬ್ಬೆರಗಾಗಿಸುವುದು ಖಂಡಿತ ಎನ್ನುತ್ತದೆ ತಂಡ.

ಕಿರುತೆರೆಯಲ್ಲಿ ದೊಡ್ಡ ಹೆಸರಾಗಿರುವ ಛಾಯಾಗ್ರಾಹಕ ಮತ್ತು ನಿರ್ದೇಶಕರಾದ ಕುಮಾರ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮ ಡೈಲಾಗ್ ಪಂಚ್‍ಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಇದಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನೂ ವಿಶೇಷವೆಂದರೆ, ಇದಕ್ಕೆ ಸಿನೆಮಾ ಸಾಹಿತಿಯಾದ ಡಾ. ನಾಗೇಂದ್ರ ಪ್ರಸಾದ್ ಸೊಗಸಾಗಿ ಶೀರ್ಷಿಕೆಗೀತೆ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕನ್ನಡ ಸಿನೆಮಾದ ಬಹುಬೇಡಿಕೆಯ ಮ್ಯೂಸಿಕ್ ಡೈರೆಕ್ಟರ್ ಆದ ಶ್ರೀಧರ್ ಸಂಭ್ರಮ್ ಅವರು ಸಂಗೀತ ಸಂಯೋಜನೆ ಮಾಡಿರುವುದು ವಿಶೇಷ. ಹಿರಿತೆರೆಯ ಜನಪ್ರಿಯ ಹಾಡಾದ "ಅಪ್ಪಾ ಐ ಲವ್ ಯೂ ಪಾ" ತರಹವೇ "ನಾನು ನನ್ನ ಕನಸು" ಶೀರ್ಷಿಕೆ ಗೀತೆ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತದೆ ತಂಡ.

ಒಟ್ಟಾರೆ ಕನ್ನಡ ಕಿರುತೆರೆಯಲ್ಲಿ "ನಾನು ನನ್ನ ಕನಸು" ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಕಾತುರವಾಗಿದೆ. ಇದೇ ಆಗಸ್ಟ್ 5 ರಿಂದ, ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ