ವಾರದಲ್ಲಿ 5 ರಿಂದ 6 ದಿನ ಧಾರಾವಾಹಿಗಳು ಪ್ರಸಾರವಾಗುತ್ತವೆ. ಗ್ರಾಮೀಣ ಮತ್ತು ನಗರ ಭಾಗದ ಕೆಲವು ಜನರು ಈ ಸೀರಿಯಲ್ಗಳನ್ನು ತಮ್ಮ ಜೀವನದ ಭಾಗವೆಂಬಂತೆ ನಿತ್ಯ ವೀಕ್ಷಣೆ ಮಾಡುತ್ತಾರೆ. ಸಿನಿಮಾ ಸ್ಟಾರ್ಗಳಿಗಿಂತ ಹೆಚ್ಚಾಗಿ ಕಿರುತೆರೆ ಮಂದಿಯನ್ನು ಪ್ರೀತಿಸೋದುಂಟು, ಮನೆ ಮಕ್ಕಳಂತೆ ಕಾಣೋದುಂಟು. ಆದರೆ ಕೊರೊನಾ ಕಾಟದಿಂದ ಧಾರಾವಾಹಿ ಪ್ರಿಯರಿಗೆ ಶಾಕ್ ಕಾದಿದೆ, ಏಪ್ರಿಲ್ ನಂತರದಲ್ಲಿ ಹಲವು ಧಾರಾವಾಹಿಗಳು ರೀ-ಟೆಲಿಕಾಸ್ಟ್ ಆಗುತ್ತವೆ. ಅದರ ಜೊತೆಗೆ ಕಲಾವಿದರು ಪಾಡೇನು? ಒಂದು ಧಾರಾವಾಹಿಯ ಒಂದು ದೃಶ್ಯದ ಎಪಿಸೋಡ್ನಲ್ಲಿ ಒಬ್ಬರನ್ನೋ, ಇಬ್ಬರನ್ನೋ, ಮೂವರನ್ನೋ ತೆರೆಮೇಲೆ ನೋಡುತ್ತೇವೆ. ಆದರೆ ಈ ಎಪಿಸೋಡ್ ಚಿತ್ರೀಕರಣದ ಹಿಂದೆ ನಿರ್ದೇಶಕ, ನಿರ್ಮಾಪಕ, ಕ್ಯಾಮರಾಮ್ಯಾನ್, ಲೈಟ್ ಬಾಯ್, ಮೇಕಪ್ಮ್ಯಾನ್, ಅಡುಗೆಯವರು ಸೇರಿದಂತೆ ಹಲವರ ಪರಿಶ್ರಮ ಇರುತ್ತದೆ. ಒಂದು ಧಾರಾವಾಹಿ ಶೂಟಿಂಗ್ ಬಂದ್ ಆದರೆ ಇವರೆಲ್ಲರ ಹೊಟ್ಟೆ ಮೇಲೆ ಬರೆ ಎಳೆದಂತಾಗುತ್ತದೆ. ಈ ಬಗ್ಗೆ ನಟಿ ರಂಜನಿ ರಾಘವನ್, ನಿರ್ದೇಶಕರಾದ ಆರೂರು ಜಗದೀಶ್, ರಘುಚರಣ್ ತಿಪಟೂರು 'ವಿಜಯ ಕರ್ನಾಟಕ'ದ ಜೊತೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ.
ಇವತ್ತು ದುಡಿದರಷ್ಟೇ ಊಟ ಎನ್ನುವವರೂ ಕೂಡ ಇದ್ದಾರೆ: ರಂಜನಿ ರಾಘವನ್
"ಒಂದೊಂದು ಪ್ರೊಡಕ್ಷನ್ ಹೌಸ್ ಒಂದೊಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ಕಲಾವಿದರಿಗೆ ದೊಡ್ಡ ರೀತಿಯಲ್ಲಿ ತೊಂದರೆ ಆಗುತ್ತದೆ ಎಂದು ನನಗೆ ವೈಯಕ್ತಿಕವಾಗಿ ಅನಿಸಲ್ಲ. ಈ ಕೆಲಸವೊಂದನ್ನೇ ನಂಬಿಕೊಂಡವರು ಕಡಿಮೆ ಎನ್ನಬಹುದು, ಏಕೆಂದರೆ ಕಲಾವಿದರ ಜೀವನವೂ ನಡೆಯಬೇಕಲ್ಲ. ಆದರೆ ಈಗ ಇರುವ ಸ್ಥಿತಿ ಮುಂದುವರಿದರೆ ತಂತ್ರಜ್ಞರಿಗೆ ದೊಡ್ಡ ತೊಂದರೆಯಾಗಬಹುದು. ಇವತ್ತು ದುಡಿದರಷ್ಟೇ ಊಟ ಎನ್ನುವವರೂ ಕೂಡ ಇದ್ದಾರೆ. ಇದು ಕೇವಲ ಧಾರಾವಾಹಿ, ಸಿನಿಮಾ ತಂಡಕ್ಕೆ ಒಂದೇ ಅಲ್ಲ, ಬೇರೆ ರಂಗದ ದಿನಕೂಲಿ ಇದ್ದವರಿಗೆ ಬಹಳ ತೊಂದರೆಯಾಗತ್ತೆ. ಆದಷ್ಟು ಬೇಗ ಕೊರೊನಾ ವೈರಸ್ ಹಾವಳಿ ಕಡಿಮೆಯಾದರೆ ಸಾಕು. ಆರೋಗ್ಯ ಮೊದಲು ಮುಖ್ಯ. ನನ್ನ ನಟನೆಯ 'ಠಕ್ಕರ್' ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ" ಎಂದು ಹೇಳಿದ್ದಾರೆ ನಟಿ ರಂಜನಿ ರಾಘವನ್
ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ ಸಿನಿಮಾ ಕಲಾವಿದರು! ಇವರಲ್ಲಿ ನಿಮಗ್ಯಾರು ಇಷ್ಟ?
ದಿನಗೂಲಿ ಕೆಲಸ ಮಾಡುವವರ ಸ್ಥಿತಿ ಚಿಂತಾಜನಕ: ನಿರ್ದೇಶಕ ಆರೂರು ಜಗದೀಶ್
ಕಲಾವಿದರು, ತಂತ್ರಜ್ಞರು, ನಿರ್ದೇಶಕರು ದಿನಗೂಲಿ ಆಧಾರದ ಮೇಲೆ ಕೆಲಸ ಮಾಡೋದುಂಟು. ಏಪ್ರಿಲ್ನಲ್ಲೂ ಕೂಡ ಈ ಪರಿಸ್ಥಿತಿ ಮುಂದುವರಿದರೆ ಕಷ್ಟ, ಕಲಾವಿದರು ಕೆಲಸ ಇಲ್ಲದೆ ಮನೆಯಲ್ಲಿ ಇರಬೇಕಾಗುತ್ತದೆ. ಬಾಟಾ ವ್ಯವಸ್ಥೆಯ ಮೇಲೆ ಕೆಲಸ ಮಾಡೋದುಂಟು. ಟೆಲಿಕಾಸ್ಟ್ ಬಂದ್ ಆದ್ರೂ ಕೂಡ ನಿರ್ಮಾಪಕರಿಗೆ ತೊಂದರೆಯಾಗತ್ತೆ, ಚಾನೆಲ್ ಕಡೆಯಿಂದ ಕೂಡ ಅವರಿಗೆ ಹಣ ಸಿಗಲ್ಲ. ತಿಂಗಳ ಸಂಬಳ ಎಂದು ನಿಗದಿಯಾಗಿದ್ದರೆ, ನಿರ್ಮಾಪಕರು ಆ ಹಣವನ್ನು ನೀಡಲೇಬೇಕು. ಈ ಹಿಂದೆ ಬೆಂಗಳೂರಿನಲ್ಲಿ 10 ರೂಪಾಯಿ ಇದ್ದರೆ ಬದುಕಬಹುದಿತ್ತು, ಇವತ್ತು 100 ರೂಪಾಯಿ ಸಾಕಾಗೋದಿಲ್ಲ. ಇಂದಿನ ಖರ್ಚು-ವೆಚ್ಚ ಎಲ್ಲವೂ ದುಬಾರಿಯಾಗಿದೆ. ದಿನಗೂಲಿ ಕೆಲಸ ಮಾಡುವವರ ಸ್ಥಿತಿ ಚಿಂತಾಜನಕವಾಗುತ್ತದೆ. ಏಪ್ರಿಲ್ನಲ್ಲಿ ಎಪಿಸೋಡ್ ಟೆಲಿಕಾಸ್ಟ್ ಮಾಡಲು ನಮ್ಮ ಹತ್ತಿರ ಬ್ಯಾಂಕಿಂಗ್ ಇಲ್ಲ. ಏಪ್ರಿಲ್ನಲ್ಲಿ ಶೂಟ್ ಆಗೋದಿಲ್ಲ ಎಂದಾದರೆ ಈ ಹಿಂದೆ ಟೆಲಿಕಾಸ್ಟ್ ಆದ ಎಪಿಸೋಡ್ಗಳನ್ನು ಮತ್ತೆ ಟೆಲಿಕಾಸ್ಟ್ ಮಾಡಬೇಕಾದ ಪರಿಸ್ಥಿತಿ ಬರುತ್ತದೆ" ಎಂದು ಹೇಳುತ್ತಾರೆ ನಿರ್ದೇಶಕ ಆರೂರು ಜಗದೀಶ್. 'ಅಶ್ವಿನಿ ನಕ್ಷತ್ರ, ಜೋಡಿಹಕ್ಕಿ' ಮುಂತಾದ ಹಿಟ್ ಧಾರಾವಾಹಿಗಳನ್ನು ನೀಡಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
'ಜೊತೆ ಜೊತೆಯಲಿ' ಧಾರಾವಾಹಿಯನ್ನು ಹಿಂದಿಕ್ಕಿ 'ಗಟ್ಟಿಮೇಳ' ಧಾರಾವಾಹಿ ಹಲವು ವಾರಗಳಿಂದ ಟಿಆರ್ಪಿಯಲ್ಲಿ ಟಾಪ್! ಕಾರಣ?
ಕೆಲಸ ಇರೋದಿಲ್ಲ ಅನ್ನೋದೇ ಬೇಸರ: ನಿರ್ದೇಶಕ ರಘು ಚರಣ್
" 'ಮಾಂಗಲ್ಯಂ ತಂತು ನಾನೇನ' ಧಾರಾವಾಹಿ 500 ಸಂಚಿಕೆಗಳನ್ನು ಪೂರೈಸುತ್ತಿದೆ. ಇದರ ಖುಷಿಯನ್ನು ಆಚರಣೆ ಮಾಡಲಾಗುತ್ತಿಲ್ಲ. ನಮ್ಮ ಕಲಾವಿದರನ್ನು ಊರಿಗೆ ಕಳಿಸಿಕೊಟ್ಟಿದ್ದೇವೆ. ಮಾರ್ಚ್ 31ರವರೆಗೆ ಎಪಿಸೋಡ್ ಪ್ರಸಾರ ಮಾಡಬಹುದು. ಇದು ಕೇವಲ ನಮ್ಮ ಸಮಸ್ಯೆ ಒಂದೇ ಅಲ್ಲ, ಎಲ್ಲರಿಗೂ ತೊಂದರೆಯಾಗುತ್ತಿರೋದನ್ನೇ ನಾವು ಕೂಡ ಅನುಭವಿಸಬೇಕು. ಎಪಿಸೋಡ್ಗಳನ್ನು ರೀ-ಟೆಲಿಕಾಸ್ಟ್ ಮಾಡಿದರೆ ಪ್ರೊಡಕ್ಷನ್ ಹೌಸ್ಗಳಿಗೆ ಯಾವುದೇ ರೀತಿಯ ಹಣ ಸಿಗೋದಿಲ್ಲ. ಕೊರೊನಾ ವೈರಸ್ ನಿರ್ನಾಮ ಆಗೋವರೆಗೂ ನಾವು ಸೀರಿಯಲ್ ಶೂಟಿಂಗ್ ಮಾಡೋದಿಕ್ಕೆ ಆಗೋದಿಲ್ಲ. ಕೆಲಸ ಇರೋದಿಲ್ಲ ಅನ್ನೋದೇ ಬೇಸರ" ಎಂದು ಹೇಳುತ್ತಾರೆ ನಿರ್ದೇಶಕ ರಘು ಚರಣ್ ತಿಪಟೂರು. ಈಗಾಗಲೇ ರಘು ಚರಣ್ 'ಜೊತೆ ಜೊತೆಯಲಿ', 'ಮಿಲನ' ಮುಂತಾದ ಹಲವಾರು ಹಿಟ್ ಧಾರಾವಾಹಿಗಳನ್ನು ನೀಡಿದ್ದಾರೆ.
ರಿಯಲ್ ಲೈಫಲ್ಲಿ ಸಿಕ್ಕಾಪಟ್ಟೆ ಮಾಡರ್ನ್ ಆಗಿದ್ದಾರೆ 'ಮಂಗಳಗೌರಿ ಮದುವೆ' ಧಾರಾವಾಹಿ ನಟಿ ಕಾವ್ಯಶ್ರೀ ಗೌಡ!