ಕನ್ನಡದ ಸಿನಿಮಾಗಳು ಬೇರೆ ಭಾಷೆಯಲ್ಲಿ ರಿಮೇಕ್ ಆಗುತ್ತವೆ, ಪ್ಯಾನ್ ಇಂಡಿಯಾ ಕೂಡ ಈಗ ಹೆಚ್ಚು ಚಾಲ್ತಿಯಲ್ಲಿದೆ. ಬೆಳ್ಳಿತೆರೆಯಂತೆ ಕಿರುತೆರೆಯಲ್ಲೂ ಕೂಡ ರಿಮೇಕ್ ಪದ್ಧತಿ ಇದೆ. ಕನ್ನಡ ಕಲಾವಿದರಿಗೆ ಪರಭಾಷೆಯಲ್ಲಿ ಉತ್ತಮ ಅವಕಾಶಗಳಿವೆ. ಹೀಗಾಗಿ ಇಲ್ಲಿನ ನಟ-ನಟಿಯರು ಬೇರೆ ಬೇರೆ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿ ಮಾಡುವಾಗ ಹೊಸ ಹೊಸ ಮುಖಗಳು ಬೇಕು ಎಂದು ಹೇಳುತ್ತಾರೆ. ಹೀಗೆ ಹೊಸಬರಿಗೆ ಅವಕಾಶ ಕೊಡೋದು ಒಳ್ಳೆಯದೇ. ಆದರೆ ಹಳೆಯ ನಟ-ನಟಿಯರು ಪಾಡು ಏನಾಗಬೇಕು, ಅಲ್ಲವೇ?
ಲಾಕ್ಡೌನ್ ಟೈಮ್ನಲ್ಲಿ ಬೇರೆ ಬೇರೆ ಭಾಷೆಯಲ್ಲಿ ತೊಡಗಿಸಿಕೊಂಡವರಿಗೆ ಅಷ್ಟಾಗಿ ತೊಂದರೆಯಾಗಿಲ್ಲ. ಕನ್ನಡವೊಂದನ್ನೇ ನಂಬಿಕೊಂಡು ಇಲ್ಲಿಯೇ ಇರುವ ಕಲಾವಿದರ ಧಾರಾವಾಹಿಗಳು ಬಂದ್ ಆಗಿವೆ. ಹೀಗಾಗಿ ಅವರು ಅವಕಾಶವಿಲ್ಲದೆ ಒದ್ದಾಡುತ್ತಿದ್ದಾರೆ.
ಬೇರೆ ಭಾಷೆಗಳಲ್ಲಿ ಕನ್ನಡ ಕಲಾವಿದರು ಯಾಕೆ ನಟಿಸುತ್ತಿದ್ದಾರೆ?
ಕೊರೊನಾ ವೈರಸ್ ಬರುವುದಕ್ಕೂ ಮುನ್ನ ಸರಿಸುಮಾರು 10 ವರ್ಷಗಳಿಂದ ಕನ್ನಡ ಕಲಾವಿದರು ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ನಟಿಸುತ್ತಿದ್ದಾರೆ. ಕೆಲವರು ಹಲವು ವರ್ಷಗಳಿಂದ ಕನ್ನಡದ ಜೊತೆ ಜೊತೆಗೆ ಬೇರೆ ಬೇರೆ ಭಾಷೆಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಇದರಿಂದಾಗಿ ಕಲಾವಿದರು ಕನ್ನಡದಲ್ಲಿ ಅವಕಾಶ ಇಲ್ಲದಿದ್ದಾಗ ಬೇರೆ ಭಾಷೆಯಲ್ಲಿ ನಟಿಸುವ ಅವಕಾಶ ಸಿಗುತ್ತದೆ, ಹೀಗಾಗಿ ಇದರಿಂದ ಖಾಲಿ ಕೂತುಕೊಳ್ಳುವ ಸಮಸ್ಯೆ ಬರುವುದೇ ಇಲ್ಲ. ಪ್ರಸ್ತುತ ತೆಲುಗಿ ಭಾಷೆಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುವ ನಟಿಯರಲ್ಲಿ 95%ರಷ್ಟು ಕನ್ನಡದವರಿದ್ದಾರೆ. ಕನ್ನಡ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ, ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡವರು ತೆಲುಗಿನಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.
Also read-ಸಾಲು ಸಾಲು ಕನ್ನಡ ಧಾರಾವಾಹಿ ನಟ-ನಟಿಯರು ತೆಲುಗು, ತಮಿಳು ಭಾಷೆಗಳಿಗೆ ಹಾರುತ್ತಿರೋದೇಕೆ?
ಡಬ್ಬಿಂಗ್ ಸೀರಿಯಲ್ಗಳಿಂದ ವಾಹಿನಿಯವರಿಗೆ ಎಷ್ಟು ಲಾಭವಾಗುತ್ತದೆ?
'ಒಂದು ಹೊಸ ಶೋ ಆರಂಭ ಮಾಡುವುದಕ್ಕೆ ಎಷ್ಟು ಹಣ ಖರ್ಚು ಮಾಡುತ್ತೆವೇಯೋ ಅದರಲ್ಲಿ ಡಬ್ಬಿಂಗ್ ಸೀರಿಯಲ್ ಪ್ರಸಾರ ಮಾಡಿದರೆ 60-70% ಹಣ ಉಳಿಯುತ್ತದೆ. ಹೀಗಾಗಿ ದುಡ್ಡು ಉಳಿತಾಯ ಮಾಡುವ ಬ್ಯುಸಿನೆಸ್ ಸ್ಟ್ರಾಟಜಿಯಾಗಿ ಡಬ್ಬಿಂಗ್ ಸೀರಿಯಲ್ ಮೊರೆ ಹೋಗಲಾಗಿದೆ. ಇದು ಅವರ ಕೆಲಸ. ಆದರೆ ಉಳಿದವರಿಗೆ ಸಮಸ್ಯೆಯಾಗುತ್ತದೆ' ಎಂದು 'ಸೀತಾ ವಲ್ಲಭ' ಧಾರಾವಾಹಿ ನಟಿ ಸುಪ್ರೀತಾ ಸತ್ಯನಾರಾಯಣ್ ಹೇಳಿದ್ದಾರೆ.
ಸುಪ್ರೀತಾ ತೆಲುಗಿನ 'ಸಾವಿತ್ರಮ್ಮಗರಿ ಅಬ್ಬಾಯಿ' ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅವರು ಕರ್ನಾಟಕದಿಂದ ಹೈದರಾಬಾದ್ಗೆ ಹೋಗಬೇಕಾಗಿ ಬರುತ್ತದೆ. 'ಕನ್ನಡ ಧಾರಾವಾಹಿ ಸೆಟ್ನಲ್ಲಿ 20 ರಿಂದ 25 ಜನರು ಕೆಲಸ ಮಾಡುತ್ತಾರೆ. ಆದರೆ ತೆಲುಗಿನ ಕಿರುತೆರೆಯಲ್ಲಿ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಸಮಯ ತುಂಬ ರಿಸ್ಕಿ ಆಗಿದೆ. ಹೀಗಾಗಿ ನಾನು ನನ್ನ ಕನ್ನಡದ 'ಸೀತಾ ವಲ್ಲಭ' ಧಾರಾವಾಹಿ ಮೇಲೆ ಗಮನಹರಿಸುವುದು ಒಳ್ಳೆಯದು ಎಂದು ಭಾವಿಸುತ್ತೇನೆ' ಎಂದು ಸುಪ್ರೀತಾ ಹೇಳಿದ್ದಾರೆ.
Also read-ಒಂದೇ ಸಲ 'ಯಜಮಾನಿ' ಧಾರಾವಾಹಿಯಿಂದ ಹೊರನಡೆದಿದ್ದೇಕೆ ಹೀರೋ, ಹೀರೋಯಿನ್?
ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಚಂದು ಹೇಳೋದೇನು?
'ಭಾಷೆ ಒಂದು ತಡೆ. ಆದರೆ ಕಲಾವಿದರು ನಟನಾ ಕೌಶಲವನ್ನು ಚಾಲ್ತಿಯಲ್ಲಿಡಲು ಏನಾದರೊಂದು ಮಾರ್ಗಗಳನ್ನು ಕಂಡುಹಿಡಿದುಕೊಳ್ಳಲೇಬೇಕು. ಹೀಗಾಗಿ ನಾವು ಇಲ್ಲಿಯೇ ಅವಕಾಶ ಸಿಗುತ್ತದೆ ಎಂದು ಕಾಯದೆ ಬೇರೆ ಬೇರೆ ಕಡೆಗೆ ನಟಿಸಲು ಅವಕಾಶ ಇದೆಯಾ ಎಂದು ಹುಡುಕಬೇಕು' ಎಂದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಖ್ಯಾತಿಯ ನಟ ಚಂದು ಗೌಡ ಹೇಳಿದ್ದಾರೆ. ಹೈದರಾಬಾದ್ನಲ್ಲಿ ಇವರು 'ತ್ರಿನಯನಿ' ಧಾರಾವಾಹಿ ಶೂಟಿಂಗ್ನಲ್ಲಿ ಬ್ಯುಸಿಯಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದಲ್ಲಿ ಚಂದು ನಟಿಸಿದ್ದಾರೆ. ಈ ಹಿಂದೆ ಚಂದು ಗೌಡ ಅವರು 'ಸಂಕಷ್ಟಕರ ಗಣಪತಿ', 'ಅಟೆಂಪ್ಟ್ ಟು ಮರ್ಡರ್' ಸಿನಿಮಾಗಳಲ್ಲಿ ನಟಿಸಿದ್ದರು. 'ಶ್ರೀ', 'ಕುಷ್ಕ ಕುಷ್ಕ', 'ಕೃಷ್ಣ ಟಾಕೀಸ್' ಸಿನಿಮಾಗಳಲ್ಲಿಯೂ ಚಂದು ನಟಿಸುತ್ತಿದ್ದಾರೆ. ಚಂದು ಗೌಡ ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೂ ಮುನ್ನ ಅವರು 'ಗೃಹಲಕ್ಷ್ಮೀ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಮತ್ತು ತೆಲುಗು ಧಾರಾವಾಹಿ ಸಂಭಾವನೆ ಬಗ್ಗೆ ರಶ್ಮಿ ಪ್ರಭಾಕರ್ ಹೇಳಿದ್ದೇನು?
ರಶ್ಮಿ ಪ್ರಭಾಕರ್ ಹೇಳುವಂತೆ ಪರಭಾಷೆಯಲ್ಲಿ ನಟಿಸುತ್ತಿರೋದು ಸಂಭಾವನೆಗಾಗಿಯೂ ಆಗಿರುತ್ತದೆ ಎಂಬುದನ್ನು ಕೂಡ ನೆನಪಿಡಬೇಕು. ಮನೆಯ ಜವಾಬ್ದಾರಿ ನಿಭಾಯಿಸಲು ಕಲಾವಿದರಿಗೆ ಸಂಭಾವನೆ ಅಗತ್ಯವಾಗಿದೆ. 'ಹೈದಾರಾಬಾದ್, ಚೆನ್ನೈ, ಕೇರಳದಲ್ಲಿ 10 ದಿನ ಕೆಲಸ ಮಾಡುವುದು ಒಂದೇ, ಕನ್ನಡದಲ್ಲಿ 20 ದಿನ ಕೆಲಸ ಮಾಡುವುದು ಕೂಡ ಒಂದೇ. ತೆಲುಗು ಲೀಡ್ ಪಾತ್ರಗಳು ಬೇರೆ ಧಾರಾವಾಹಿಯಲ್ಲಿಯೂ ಕೂಡ ನಟಿಸಬಹುದು. ಆದರೆ ಕನ್ನಡದಲ್ಲಿ ಈ ಅವಕಾಶ ಇಲ್ಲ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಒಂದು ಧಾರಾವಾಹಿಯಲ್ಲಿ ನಟಿಸಿದ ನಂತರ ಇನ್ನೊಂದು ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಲು ಅವಕಾಶ ಸಿಗುವುದು ತುಂಬ ಕಷ್ಟ. ತೆಲುಗು ಕಿರುತೆರೆಯಲ್ಲಿ ಕಲಾವಿದರು ಒಂದಾದ ನಂತರ ಇನ್ನೊಂದು ಧಾರಾವಾಹಿ ಮಾಡುತ್ತಿದ್ದಾರೆ' ಎಂದು 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್ ಹೇಳಿದ್ದಾರೆ.
ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಚಂದನ್ ಹೇಳೋದೇನು?
ನಟ ಚಂದನ್ ಕುಮಾರ್ ತೆಲುಗಿನ 'ಸಾವಿತ್ರಮ್ಮಗರಿ ಅಬ್ಬಾಯಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬೇರೆ ಭಾಷೆಯಲ್ಲಿ ನಟಿಸುವುದು ಅವರವರ ಜೀವನೋಪಾಯಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆ. 'ನನಗೆ ಕನ್ನಡದಲ್ಲಿ ಯಾವುದೇ ಪ್ರಾಜೆಕ್ಟ್ಗಳಿಲ್ಲದಿದ್ದಾಗ, ತೆಲುಗಿನಲ್ಲಿಯೂ ಯಾವುದೇ ಆಪ್ಶನ್ ಇಲ್ಲದಿದ್ದಾಗ ಹೇಗೆ' ಎಂದು ಚಂದನ್ ಕೇಳಿದ್ದಾರೆ. 'ರಾಧಾ ಕಲ್ಯಾಣ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿಯೂ ಚಂದನ್ ನಟಿಸಿದ್ದರು. ಡಾನ್ಸಿಂಗ್ ಶೋನಲ್ಲಿಯೂ ಚಂದು ಕಾಣಿಸಿಕೊಂಡಿದ್ದರು. 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಚಂದನ್ ಅಭಿನಯಿಸುತ್ತಿದ್ದಾರೆ. ಚಂದನ್ ಕುಮಾರ್ ಅವರಿಗೆ ಸಿನಿಮಾ ಕಡೆಗೆ ಒಲವಿದ್ದು, 'ಪ್ರೇಮ ಬರಹ' ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಹೊಸ ಸಿನಿಮಾಕ್ಕೆ ಅವರು ನಿರ್ದೇಶಕ ಕೂಡ ಮಾಡಲಿದ್ದಾರೆ.
ಯಾವ ಅವಕಾಶ ಬಂದರೂ ನಾನು ಸ್ವೀಕರಿಸುತ್ತೇನೆ: ತೇಜಸ್ ಗೌಡ
ನಟ ತೇಜಸ್ ಗೌಡ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಲಾಕ್ಡೌನ್ ಕಾರಣಕ್ಕೆ ಈ ಸೀರಿಯಲ್ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ ನಟ ತೇಜಸ್ ಗೌಡ ಈಗ ತೆಲುಗಿನ 'ಮಾತೇ ಮಂತ್ರಮು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ತೇಜಸ್ 'ಪ್ರಸ್ತುತ ಇರುವ ಸಂದರ್ಭದಲ್ಲಿ, ನಾನು ನನ್ನ ದಾರಿಯಲ್ಲಿ ಯಾವ ಅವಕಾಶಗಳು ಬಂದರೂ ಕೂಡ ನಾನು ಸ್ವೀಕರಿಸುತ್ತೇನೆ' ಎಂದು ಹೇಳಿದ್ದಾರೆ. 'ರಾಧಾ ರಮಣ' ಧಾರಾವಾಹಿಯ ನಟಿ ದೀಪಿಕಾ, 'ಪದ್ಮಾವತಿ' ಧಾರಾವಾಹಿ ದೀಪ್ತಿ ಮನ್ನೆ, ರಚಿತಾ ಮಹಾಲಕ್ಷ್ಮೀ, ಪ್ರೀತಿ ಶ್ರೀನಿವಾಸ್, 'ರಾಧಾ ಕಲ್ಯಾಣ' ಖ್ಯಾತಿಯ ಚೈತ್ರಾ ರೈ ಮುಂತಾದವರು ಪರಭಾಷೆಯಲ್ಲಿ ನಟಿಸುತ್ತಿದ್ದಾರೆ.