ಆ್ಯಪ್ನಗರ

ಮೆಡಿಕಲ್‌ ಓದಲು ಸಿನಿಮಾ ಬಿಟ್ಟು ಸೀರಿಯಲ್‌ಗೆ ಬಂದೆ

'ಕಾಲಾಯ ತಸ್ಮೈ ನಮಃ' ಎಂಬ ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ್ದ ಮಧುಬಾಲ ಎಂಬ ಹುಡುಗಿ ಈಗ ಕಿರುತೆರೆಯಲ್ಲಿ ಸಖತ್‌ ಬಿಝಿ ನಟಿ.

Vijaya Karnataka Web 11 Nov 2016, 4:22 am
'ಕಾಲಾಯ ತಸ್ಮೈ ನಮಃ' ಎಂಬ ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ನಟಿಸಿದ್ದ ಮಧುಬಾಲ ಎಂಬ ಹುಡುಗಿ ಈಗ ಕಿರುತೆರೆಯಲ್ಲಿ ಸಖತ್‌ ಬಿಝಿ ನಟಿ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಒಂದು ಸೀರಿಯಲ್‌ ಮುಗಿಸಿರುವ ಮಧುಬಾಲ ಈಗ ಬಂಗಾರಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ತಮ್ಮ ಅಭಿನಯದ ಜರ್ನಿಯ ಬಗ್ಗೆ ಲವಲವಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Vijaya Karnataka Web entry to seerial medical study purpose
ಮೆಡಿಕಲ್‌ ಓದಲು ಸಿನಿಮಾ ಬಿಟ್ಟು ಸೀರಿಯಲ್‌ಗೆ ಬಂದೆ


-ಹರೀಶ್‌ ಬಸವರಾಜ್‌

ಅಷ್ಟು ಚಿಕ್ಕ ವಯಸ್ಸಿಗೆ ಬಣ್ಣದ ಸೆಳೆತಕ್ಕೆ ಸಿಕ್ಕಿದ್ದು ಹೇಗೆ?

ನನಗೆ ಆ್ಯಕ್ಟಿಂಗ್‌ ಬಗ್ಗೆ ಏನೂ ಗೊತ್ತಿರಲಿಲ್ಲ. ಮೈಸೂರಿನವಳಾದ ನಾನು ಬೆಂಗಳೂರಿಗೆ ಓದಲು ಬಂದೆ. ಬೆಂಗಳೂರಿನ ವಿಜಯನಗರದ ಮಾರುತಿ ಮಂದಿರದ ಬಳಿ ನಾನು ಮತ್ತು ನಮ್ಮಮ್ಮ ನಡೆದುಕೊಂಡು ಹೋಗುತ್ತಿದ್ದಾಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ‘ಮದುವೆ ಮನೆ’ ಸಿನಿಮಾದ ಸಹಾಯಕ ನಿರ್ದೇಶಕರೊಬ್ಬರು ಬಂದು, ‘ಗಣೇಶ್‌ ತಂಗಿಯ ಪಾತ್ರಕ್ಕೆ ನಿಮ್ಮ ಮಗಳನ್ನು ಕಳುಹಿಸಿಕೊಡುತ್ತೀರಾ?’ ಎಂದು ನನ್ನ ಅಮ್ಮನನ್ನು ಕೇಳಿದರು. ಆಗ ನಮ್ಮ ತಂದೆಯೊಂದಿಗೆ ಮಾತನಾಡಿ ನಾನು ಸಿನಿಮಾದಲ್ಲಿ ನಟಿಸಿದೆ. ಅದು ನನ್ನ ಮೊದಲ ಸಿನಿಮಾ. ಅಭಿನಯ ನನಗೆ ಅಚಾನಕ್ಕಾಗಿ ಒಲಿದು ಬಂದದ್ದು.

ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದೀರಾ?

‘ಮದುವೆ ಮನೆ’ ಆದ ಮೇಲೆ, ಸಿದ್ಲಿಂಗು, ಹಾಯ್‌ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದೆ. ಆದರೆ ಆಗ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಸಿನಿಮಾ ಆಫರ್‌ಗಳನ್ನು ಕೈ ಬಿಟ್ಟೆ. ಸೀರಿಯಲ್‌ ಕಡೆಗೆ ಬಂದೆ. ಈಗ ಎಜುಕೇಷನ್‌ ಜತೆಗೆ ಸೀರಿಯಲ್‌ ಎರಡನ್ನೂ ಜತೆ ಜತೆಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ.

ಏನು ಓದುತ್ತಿದ್ದೀರಿ?

ಸದ್ಯ ಎಂಬಿಬಿಎಸ್‌ ಮೂರನೇ ವರ್ಷದಲ್ಲಿದ್ದೇನೆ. ಮೆಡಿಕಲ್‌ಗೆ ಸೇರಿಕೊಂಡ ನಂತರ ಸಿನಿಮಾ ಬಿಟ್ಟೆ. ಸಿನಿಮಾ ಮಾಡಿಕೊಂಡು ಓದುವುದು ಕಷ್ಟವಾಗುತ್ತಿತ್ತು.

ವಿದ್ಯಾಭ್ಯಾಸ ಮತ್ತು ನಟನೆ ಎರಡನ್ನೂ ಹೇಗೆ ಬ್ಯಾಲೆನ್ಸ್‌ ಮಾಡುತ್ತೀರಾ?

ನನಗೆ ನನ್ನ ಕಾಲೇಜಿನ ಬೆಂಬಲ ಇದೆ. ಅಸೈನ್‌ಮೆಂಟ್‌ ಸೇರಿದಂತೆ ಎಲ್ಲವನ್ನೂ ಸಲ್ಲಿಸಲು ಸಮಯ ನೀಡುತ್ತಾರೆ. ಪರೀಕ್ಷೆ ಸಮಯದಲ್ಲಿ ನನಗೆ ನೋಟ್ಸ್‌ಗಳನ್ನು ನನ್ನ ಗೆಳತಿಯರು ನೀಡುತ್ತಾರೆ. ಅಲ್ಲದೆ ಕೆಲ ಬಾರಿ ಶೂಟಿಂಗ್‌ ಸೆಟ್‌ಗೆ ನಾನು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತೇನೆ. ಅಲ್ಲೇ ಓದಿಕೊಳ್ಳುತ್ತೇನೆ. ಸಾಕಷ್ಟು ಬಾರಿ ಪರೀಕ್ಷೆ ಸಮಯದಲ್ಲಿ ಸೀರಿಯಲ್‌ನವರಿಗೆ ಹೇಳಿದರೆ ನನಗೆ ಸಮಯ ನೀಡುತ್ತಾರೆ. ಹೀಗಾಗಿ ಇದುವರೆಗೂ ಕಷ್ಟವಾಗಿಲ್ಲ.
ಬಂಗಾರಿಗಿಂತಲೂ ಮುಂಚೆ ಯಾವ್ಯಾವ ಧಾರಾವಾಹಿ ಮಾಡಿದ್ದೀರಾ?
ನನ್ನ ಮೊದಲ ಧಾರಾವಾಹಿ ನಾಗಮಣಿ, ಪರಿಣಿತಾ, ನೀ ಇರಲು ಜೊತೆಯಲಿ, ಜತೆಗೆ ತೆಲುಗಿನಲ್ಲಿ ಒಂದು ಸೀರಿಯಲ್‌ ಸೇರಿದಂತೆ ಎಲ್ಲ ಧಾರಾವಾಹಿಗಳಲ್ಲೂ ಲೀಡ್‌ ರೋಲ್‌ನಲ್ಲಿ ನಟಿಸಿದ್ದೇನೆ. ತೆಲುಗು ಸೀರಿಯಲ್‌ ಸಾವಿರ ಎಪಿಸೋಡ್‌ ಪ್ರಸಾರವಾಗಿತ್ತು.

ಬಂಗಾರಿಯಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ. ಜನರ ಪ್ರತಿಕ್ರಿಯೆ ಹೇಗಿದೆ?

ಟಾಪ್‌ ರೇಟಿಂಗ್‌ನಲ್ಲಿದ್ದ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದ ರಾಮ್‌ ಜಿ ಈ ಸೀರಿಯಲ್‌ ನಿರ್ದೇಶಕರು. ಒಂದೊಳ್ಳೆ ಪಾತ್ರ ನೀಡಿದ್ದಾರೆ. ನಿಜಕ್ಕೂ ಖುಷಿಯಾಗುತ್ತದೆ. ಹೊರಗಡೆ ಹೋದಾಗ ಜನ ಬಂಗಾರಿ ಅಮ್ಮ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ.

ದೊಡ್ಡ ದೊಡ್ಡ ನಟರ ಸಿನಿಮಾದಲ್ಲಿ ಕಾಣಿಸಿಕೊಂಡವರು ನೀವು, ಕಿರುತೆರೆಗೂ ಹಿರಿತೆರೆಗೂ ಏನಾದರೂ ವ್ಯತ್ಯಾಸ ಕಂಡಿತಾ?

ಹಾಗೇನು ಇಲ್ಲ, ಅಲ್ಲಿ ದೊಡ್ಡ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತೇವೆ. ಇಲ್ಲಿ, ಸಣ್ಣ ಪರದೆಯ ಮೇಲೆ ಕಾಣಿಸಿಕೊಳ್ಳುತ್ತೇವೆ ಎಂಬುದನ್ನು ಬಿಟ್ಟರೆ ಬೇರೆ ಏನೂ ವ್ಯತ್ಯಾಸವಿಲ್ಲ.

ಭವಿಷ್ಯದ ಯೋಜನೆಗಳು?

ಸದ್ಯಕ್ಕೆ ಬಂಗಾರಿ ನಡೆಯುತ್ತಿದೆ. ಸಿನಿಮಾದಲ್ಲಿ ನಟಿಸುವುದು ಕಷ್ಟ. ಸೀರಿಯಲ್‌ಗಳಲ್ಲಿ ಒಳ್ಳೊಳ್ಳೆ ಪಾತ್ರ ಸಿಕ್ಕಿದರೆ ನಟಿಸುತ್ತೇನೆ. ಎಂಬಿಬಿಎಸ್‌ ಕಂಪ್ಲೀಟ್‌ ಮಾಡಬೇಕು. ಇವಿಷ್ಟೇ ನನ್ನ ಭವಿಷ್ಯದ ಯೋಜನೆಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ