ಆ್ಯಪ್ನಗರ

KBC ವೇದಿಕೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ! ಅಮಿತಾಭ್‌ ಬಚ್ಚನ್‌ ವಿರುದ್ಧ ಎಫ್‌ಐಆರ್‌

ನಟ ಅಮಿತಾಭ್‌ ಬಚ್ಚನ್‌ ಈಗೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪ ಅವರ ಮೇಲೆ ಎದುರಾಗಿದೆ. ಈ ಸಂಬಂಧ ಎಫ್‌ಐಆರ್‌ ಕೂಡ ದಾಖಲಾಗಿದೆ.

Vijaya Karnataka Web 3 Nov 2020, 3:31 pm
ಕಿರುತೆರೆಯಲ್ಲಿ ಸಖತ್‌ ಜನಪ್ರಿಯತೆ ಗಳಿಸಿರುವ 'ಕೌನ್‌ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಅಭಿಮನ್ಯು ಪವಾರ್‌ ಆರೋಪಿಸಿದ್ದಾರೆ. ಅಲ್ಲದೆ, ಈ ಕಾರ್ಯಕ್ರಮದ ನಿರೂಪಕ ಅಮಿತಾಭ್‌ ಬಚ್ಚನ್‌ ಮತ್ತು ಆಯೋಜಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ಕೂಡ ದಾಖಲಾಗಿದೆ.
Vijaya Karnataka Web ಕೌನ್‌ ಬನೇಗಾ ಕರೋಡ್‌ಪತಿ


ಇತ್ತೀಚೆಗೆ ಪ್ರಸಾರವಾದ ಎಪಿಸೋಡ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್‌ ಮತ್ತು ನಟ ಅನೂಪ್‌ ಸೋನಿ ಭಾಗವಹಿಸಿದ್ದರು. 6.40 ಲಕ್ಷ ರೂ.ಗೆ ಅಮಿತಾಭ್‌ ಒಂದು ಪ್ರಶ್ನೆ ಕೇಳಿದರು. ಅದೇ ಈಗ ವಿವಾದದ ಕೇಂದ್ರ ಬಿಂದು ಆಗಿದೆ. '1927ರ ಡಿಸೆಂಬರ್‌ 25ರಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ತಮ್ಮ ಬೆಂಬಲಿಗರೊಂದಿಗೆ ಯಾವ ಪುಸ್ತಕವನ್ನು ಸುಟ್ಟುಹಾಕಿದರು?' ಎಂದು ಅಮಿತಾಭ್‌ ಪ್ರಶ್ನೆ ಕೇಳಿದ್ದರು. ಅದಕ್ಕೆ A) ವಿಷ್ಣು ಪುರಾಣ B) ಭಗವದ್ಗೀತೆ C) ಋಗ್ವೇದ D) ಮನುಸ್ಮೃತಿ ಎಂದು ಆಯ್ಕೆಗಳನ್ನು ನೀಡಲಾಗಿತ್ತು.

ಅದಕ್ಕೆ ಉತ್ತರ ಮನುಸ್ಮೃತಿ. 'ಪುರಾತನ ಹಿಂದೂ ಗ್ರಂಥವಾದ ಮನುಸ್ಮೃತಿಯು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಅಂಬೇಡ್ಕರ್‌ ಅದನ್ನು ಸುಟ್ಟುಹಾಕಿದರು' ಎಂದು ಅಮಿತಾಭ್‌ ವಿವರಣೆಯನ್ನೂ ನೀಡಿದರು. ಬೇಕಂತಲೇ ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಈ ಪ್ರಶ್ನೆಗೆ ನೀಡಿದ ನಾಲ್ಕೂ ಆಯ್ಕೆಗಳು ಹಿಂದೂ ಗ್ರಂಥಗಳೇ ಆಗಿದ್ದವು ಎಂದು ಅಭಿಮನ್ಯು ಪವಾರ್‌ ದೂರಿನಲ್ಲಿ ಆರೋಪಿಸಿದ್ದಾರೆ.

also read: 'ಕೌನ್‌ ಬನೇಗಾ ಕರೋಡ್‌ಪತಿ'ಯಲ್ಲಿ ಅಮಿತಾಭ್‌ಗೆ ಕೈಕೊಟ್ಟ ಕಂಪ್ಯೂಟರ್‌! ಮುಂದೇನಾಯಿತು?

'ಎಲ್ಲ ಹಿಂದೂ ಗ್ರಂಥಗಳು ಸುಡಲು ಯೋಗ್ಯವಾಗಿವೆ ಎಂಬಂಥ ಸಂದೇಶವನ್ನು ಈ ಪ್ರಶ್ನೆ ರವಾನಿಸುವಂತಿದೆ. ಅಲ್ಲದೆ, ಹಿಂದೂಗಳು ಮತ್ತು ಬೌದ್ಧರ ನಡುವೆ ದ್ವೇಷದ ಭಾವನೆ ಹುಟ್ಟುಹಾಕುವಂತಿದೆ' ಎಂದು ಅಭಿಮನ್ಯು ಪವಾರ್‌ ಕಿಡಿಕಾರಿದ್ದಾರೆ. ಈ ಪ್ರಶ್ನೆಯ ಬಗ್ಗೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಡಪಂಥೀಯ ಅಜೆಂಡಾದಿಂದ ಇಂಥ ಪ್ರಶ್ನೆ ಕೇಳಲಾಗಿದೆ ಎಂದು ಅನೇಕರು ಆರೋಪಿಸುತ್ತಿದ್ದಾರೆ.

also read: ರಾಮಾಯಣದ ಈ ಒಂದು ಪ್ರಶ್ನೆಗೆ ಉತ್ತರಿಸಿ 6.4 ಲಕ್ಷ ರೂ. ಗೆದ್ದ KBC ಸ್ಪರ್ಧಿ! ನಿಮಗೂ ಉತ್ತರ ಗೊತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ