ಆ್ಯಪ್ನಗರ

'ಗಿಣಿರಾಮ' ಧಾರಾವಾಹಿ ನಟ ರಿತ್ವಿಕ್ ಮಠದ‌ ಬಗ್ಗೆ ಅಂದು ಕ್ಯಾಮರಾ ಮ್ಯಾನ್‌ ಹೇಳಿದ್ದ ಭವಿಷ್ಯ ನಿಜವಾಯ್ತು!

ಎಂಎನ್‌ಸಿ ಕಂಪನಿ ಜಾಬ್ ಬಿಟ್ಟು ಧಾರಾವಾಹಿ ಲೋಕಕ್ಕೆ ಬಂದ 'ಗಿಣಿರಾಮ' ಧಾರಾವಾಹಿ ನಟ ರಿತ್ವಿಕ್ ಮಠದ ಅವರಿಗೆ ಆರಂಭದಲ್ಲಿ ಎದುರಾದ ಸಮಸ್ಯೆಯೇನು? ಅವರು ಸವಾಲುಗಳನ್ನು ಹೇಗೆ ಎದುರಿಸಿದರು? ಕ್ಯಾಮರಾ ಮ್ಯಾನ್ ನುಡಿದಿದ್ದ ಯಾವ ಮಾತು ನಿಜವಾಯ್ತು? ಇಲ್ಲಿ ಮಾಹಿತಿ

Vijaya Karnataka Web 21 Aug 2020, 9:35 pm
(ಸಂದರ್ಶಕರು-ಪದ್ಮಶ್ರೀ ಭಟ್)
Vijaya Karnataka Web ginirama kannada serial hero ritvvikk mathad family background real life story
'ಗಿಣಿರಾಮ' ಧಾರಾವಾಹಿ ನಟ ರಿತ್ವಿಕ್ ಮಠದ‌ ಬಗ್ಗೆ ಅಂದು ಕ್ಯಾಮರಾ ಮ್ಯಾನ್‌ ಹೇಳಿದ್ದ ಭವಿಷ್ಯ ನಿಜವಾಯ್ತು!


ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ಶ್ಯಾಮ್ ಪಾತ್ರಕ್ಕೆ ಬಣ್ಣ ಹಚ್ಚಿದವರು ರಿತ್ವಿಕ್ ಮಠದ.. ದಾವಣಗೆರೆಯ ಈ ಹುಡುಗ ಬೆಳೆದದ್ದು ಬೆಳಗಾವಿಯಲ್ಲಿ. ತನ್ನ ಕುಳ್ಳಿ ದೋಸ್ತ್ ಮೇಘನಾ ಬಿಟ್ಟರೆ ಶ್ಯಾಮ್‌ಗೆ ಬೇರೆ ಪ್ರಪಂಚವಿರಲಿಲ್ಲ. ಎಲ್ಲರನ್ನು ಪ್ರೀತಿಸುತ್ತ, ತನ್ನ ಸ್ನೇಹಿತೆ ಖುಷಿಗೋಸ್ಕರ ಬದುಕಿದ್ದ ಶ್ಯಾಮ್‌ಗೆ ಕಪಟ-ಸುಳ್ಳು-ಸ್ವಾರ್ಥ ಯಾವುದು ಇರಲಿಲ್ಲ. ಈ ಪಾತ್ರ ನೋಡಿದವರಿಗೆ ತಮಗೂ ಇಂತಹ ಮಗನೋ, ಅಳಿಯನೋ, ಗಂಡನೋ ಇರಬೇಕು ಎಂದೆನಿಸುವುದಂತೂ ಸುಳ್ಳಲ್ಲ. ಈಗ ಈ ಪಾತ್ರಕ್ಕೆ ತುಂಬ ವಿಭಿನ್ನವಾದ ಪೋಷಾಕನ್ನು ರಿತ್ವಿಕ್ ಮಠದ 'ಗಿಣಿರಾಮ' ಧಾರಾವಾಹಿಯಲ್ಲಿ ತೊಟ್ಟಿದ್ದಾರೆ. ಇಲ್ಲಿ ಉತ್ತರ ಕರ್ನಾಟಕ ಭಾಷೆ ಮಾತನಾಡುವ ರಿತ್ವಿಕ್ ಮಠದ ರಗಡ್, ಟಪ್ ಹುಡುಗ ಆಗಿ ಕಾಣಿಸಿಕೊಳ್ಳುತ್ತಾರೆ. 'ಅನುರೂಪ' ಮತ್ತು 'ಗಿಣಿರಾಮ' ಧಾರಾವಾಹಿಯಲ್ಲಿ ರಿತ್ವಿಕ್ ಮಠದ ನಿಭಾಯಿಸಿಯದ ಪಾತ್ರಗಳು ನಿಜಕ್ಕೂ ತುಂಬ ವಿಭಿನ್ನವಾಗಿವೆ.

ಧಾರಾವಾಹಿಗೆ ಬಂದಿದ್ದು ಹೇಗೆ, 'ಗಿಣಿರಾಮ'ದಲ್ಲಿ ಹೇಗೆ ಅವಕಾಶ ಸಿಕ್ಕಿತು? ಎಂಎನ್‌ಸಿ ಕಂಪನಿ ಬಿಡಲು ಕಾರಣ ಏನಾಗಿತ್ತು? ಮುಂತಾದ ವಿಚಾರಗಳ ಬಗ್ಗೆ ರಿತ್ವಿಕ್ ಮಠದ 'ವಿಜಯ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಟನೆ ಬಗ್ಗೆ ಹೇಗೆ ಆಸಕ್ತಿ ಮೂಡಿತು? ನಟನೆಯ ಆರಂಭದ ದಿನಗಳು ಹೇಗಿದ್ದವು?

ಆರನೇ ಕ್ಲಾಸ್‌ನಲ್ಲಿದ್ದಾಗಲೇ ನನಗೆ ನಟ ಆಗಬೇಕು ಅಂತ ಅನಿಸಿತು. ಒಮ್ಮೆ 'ನಿಸರ್ಗ ದೇವತೆ' ನಾಟಕ ನೋಡಿದಾಗ ಥ್ರಿಲ್ ಆಗಿ ನಾನು ಕಲಾವಿದ ಆಗಬೇಕು ಅಂತ ಅನಿಸಿತು. ಅದು ನನ್ನ ಮನಸ್ಸಲ್ಲಿ ಅಚ್ಚಾಗಿ ಉಳಿದಿತ್ತು. ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡಿ ಬಿಟ್ಟುಬಂದವನು ನಾನು. ಕಂಪೆನಿಯಲ್ಲಿ ಕೆಲಸ ಮಾಡುವಾಗ ನನಗೆ ಎಲ್ಲ ಸಿಗುತ್ತಿದ್ದರೂ ತೃಪ್ತಿ ಮಾತ್ರ ಇರಲಿಲ್ಲ. 25ನೇ ವರ್ಷಕ್ಕೆ ನಟನಾ ಕ್ಷೇತ್ರಕ್ಕೆ ಬಂದೆ. 'ಯುವ ಸಾಮ್ರಾಟ್', 'ಶಂಭು ಮಹಾದೇವ' ಮುಂತಾದ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿದೆ. ಆಮೇಲೆ 'ಅನುರೂಪ' ಧಾರಾವಾಹಿಯಲ್ಲಿ ಆಡಿಶನ್ ನೀಡಿ, ಆಯ್ಕೆಯಾದೆ. 'ಅನುರೂಪ' ಆದ್ಮೇಲೆ 'ಆ ಎರಡು ವರ್ಷಗಳು', 'ಗಿಫ್ಟ್ ಬಾಕ್ಸ್' ಸಿನಿಮಾ ಮಾಡಿದೆ. 'ನಮ್ಮ ಉತ್ಸವ' ಸಿನಿಮಾದಲ್ಲಿ ನಟಿಸಿದ್ದೇನೆ. ಈ ಚಿತ್ರದ ಕೆಲಸಗಳು ನಡೆಯುತ್ತಿವೆ.

Also Read-ಮತ್ತೆ ಹೆಸರು ಬದಲಾಯಿಸಿಕೊಂಡ 'ಗಟ್ಟಿಮೇಳ' ಧಾರಾವಾಹಿ ನಟ ರಕ್ಷ್: ಕಾರಣ?

'ಗಿಣಿರಾಮ'ದಲ್ಲಿ ಹೇಗೆ ಅವಕಾಶ ಸಿಕ್ಕಿತು?

'ಶಂಭು ಮಹಾದೇವ' ಸಿನಿಮಾದ ಕ್ಯಾಮರಾ ಮ್ಯಾನ್ ಪವನ್ ಅವರು ಆ ಚಿತ್ರದ ಶೂಟಿಂಗ್‌ನಲ್ಲಿ ನನ್ನ ಬಳಿ ಬಂದು ನೀವು ನೋಡೋಕೆ ಚೆನ್ನಾಗಿದ್ದೀರಾ? ಯಾಕೆ ಸಣ್ಣ ಪುಟ್ಟ ಪಾತ್ರ ಮಾಡ್ತೀರಾ? ಅಂತ ಕೇಳಿದ್ರು. ನನಗೆ ಗಾಡ್ ಫಾದರ್ ಯಾರೂ ಇಲ್ಲ ಅಂತ ಹೇಳಿದೆ. ಆಮೇಲೆ ಅವರು 'ಅನುರೂಪ' ಧಾರಾವಾಹಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನನ್ನ ನಟನೆ ನೋಡಿಕೊಂಡು ಬಂದಿದ್ದರು. ಆಮೇಲೆ ಅವರು ಒಂದು ದಿನ 'ಗಿಣಿರಾಮ' ಧಾರಾವಾಹಿಗೆ ಆಡಿಶನ್ ನೀಡುವಂತೆ ಹೇಳಿದರು. ಆಮೇಲೆ ವಾಹಿನಿ ಕಡೆಯಿಂದಲೂ ಓಕೆ ಆಗಿ ಈಗ 'ಗಿಣಿರಾಮ' ಸೀರಿಯಲ್‌ನಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದೇನೆ.

Also Read-'ಗಟ್ಟಿಮೇಳ' ಧಾರಾವಾಹಿಯಲ್ಲಿ ಇನ್ಮುಂದೆ ಸಾಹಿತ್ಯಾ ಪಾತ್ರ ಇರೋದಿಲ್ಲ; ಯಾಕೆ?

'ಗಿಣಿರಾಮ' ಧಾರಾವಾಹಿಯಲ್ಲಿ ತುಂಬ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಿರಿ..ಹೇಗನಿಸುತ್ತಿದೆ?

ವಿಭಿನ್ನವಾದ ಪಾತ್ರ ಎಂದು ಧಾರಾವಾಹಿ ಒಪ್ಪಿದೆ. 'ಅನುರೂಪ' ಧಾರಾವಾಹಿಯಲ್ಲಿ ಶ್ಯಾಮ್ ಪಾತ್ರಧಾರಿಯಾಗಿ ಜನರು ನನ್ನನ್ನು ನೋಡಿ ಗುರುತಿಸಿದ್ದಾರೆ. ಶ್ಯಾಮ್ ತುಂಬ ಮುಗ್ಧವಾದ ಹುಡುಗ. ಜನರನ್ನು ರೀಚ್ ಆಗಬೇಕು ಅಂತ ಅಂದರೆ ಮಾಸ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಭಾವನೆ. ನಾನು ಯಾವ ಪಾತ್ರ ಮಾಡಬೇಕು ಎಂದುಕೊಂಡಿದ್ದೇನೋ ಆ ಪಾತ್ರವು 'ಗಿಣಿರಾಮ'ದಲ್ಲಿದೆ. ಹೀಗಾಗಿ ತುಂಬ ಖುಷಿಯಿಂದ ನಟಿಸುತ್ತಿದ್ದೇನೆ. ಸೀನ್ ಪೇಪರ್‌ ಕೈಗೆ ಬಂದುಕೂಡಲೇ ನಾನು ಯಾವಾಗ ಕ್ಯಾಮರಾ ಮುಂದೆ ಬಂದು ನಟಿಸ್ತೀನಿ, ಯಾವಾಗ ಡೈಲಾಗ್ ಹೇಳ್ತೀನಿ ಅಂತ ಕಾಯುತ್ತಿರುತ್ತೇನೆ. ನನಗೆ ಈ ಪಾತ್ರದಲ್ಲಿ ತುಂಬ ಥ್ರಿಲ್ ಇದೆ.

​ಅಭಿನಯ ರಂಗದಲ್ಲಿ ಮುಂದೆ ಅವಕಾಶಗಳು ಸಿಕ್ಕೇ ಸಿಗುತ್ತವೆ ಅಂತ ಹೇಳಲಾಗೋದಿಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಾನು ತುಂಬ ಕಷ್ಟ ನೋಡಿದ್ದೇನೆ. ಹೀಗಾಗಿ ಮುಂದೆ ಇನ್ನಷ್ಟು ಕಷ್ಟಗಳು ಬರುತ್ತವೆ ಎಂದು ಅನಿಸುತ್ತಿಲ್ಲ. ಮುಂದಿನ ಬಗ್ಗೆ ನಾನು ಅಷ್ಟಾಗಿ ಯೋಚನೆ ಮಾಡೋದಿಲ್ಲ. ಆದರೆ ನಾನು ಅಂದುಕೊಂಡದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ನಂಬಿಕೆಯಿದೆ.

ಒಂದು ಧಾರಾವಾಹಿ ಮಾಡಿದ ನಂತರ ಮತ್ತೆ ಸಿನಿಮಾದಲ್ಲಿಯೇ ನಟಿಸಬೇಕು ಎಂಬ ಹಠ ಈಗಿನ ಕಲಾವಿದರಿಗೆ ಇದೆ. ನಿಮಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆಯೇ?

ನನಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಿದೆ. ಪಾತ್ರಗಳು ನನಗೆ ತುಂಬ ಮುಖ್ಯ. ನಟಿಸೋದು ನನಗೆ ಇಷ್ಟ. ಖಾಲಿ ಕೂತುಕೊಳ್ಳೋದು ನನ್ನ ಕೈಲಿ ಆಗಲ್ಲ. 'ಅನುರೂಪ' ಧಾರಾವಾಹಿ ಆದ್ಮೇಲೆ ಸೀರಿಯಲ್ ಆಫರ್ ಬಂತು. ಅದರಲ್ಲಿ ಹೀರೋ ಶ್ರೀಮಂತ ಆಗಿರ್ತಾನೆ ಅನ್ನೋ ತರ ಕಥೆಗಳು ಬರುತ್ತಿದ್ದವು. ಈ ಪ್ಯಾಟರ್ನ್ ಕಥೆಯಲ್ಲಿ ನಟಿಸಲು ಇಷ್ಟವಿರಲಿಲ್ಲ. 'ಗಿಣಿರಾಮ' ಡಿಫರೆಂಟ್ ಆಗಿದ್ದಕ್ಕೆ ಒಪ್ಪಿಕೊಂಡೆ. ಸಿನಿಮಾದಲ್ಲಿಯೂ ನಟಿಸಿದ್ದೇನೆ. ಆದರೆ ಜನರು ನಮ್ಮನ್ನು ಗುರುತಿಸಿ ನೆನಪಿಟ್ಟುಕೊಳ್ಳೋದು ಧಾರಾವಾಹಿ ಮೂಲಕ. ಒಂದು ಸಿನಿಮಾ ಹಿಟ್ ಆದ್ಮೇಲೆ ಜನರು ಕೆಲ ದಿನ ನೆನಪಿಟ್ಟುಕೊಳ್ಳಬಹುದು. ಈಗ ನಾನು ಒಂದೆರೆಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಧಾರಾವಾಹಿ ಬಿಟ್ಟು ಸಿನಿಮಾ ಮಾಡುವ ಯೋಚನೆ ಈಗಂತೂ ಇಲ್ಲ.

​ನೀವು ಚೆನ್ನಾಗಿದ್ದರೂ ಕೂಡ ಲೀಡ್ ಪಾತ್ರ ಮೊದ ಮೊದಲು ಸಿಕ್ಕಿರಲಿಲ್ಲ. ಆಗ ನಾನು ಹೀರೋ ಆಗಬೇಕಿತ್ತು ಎಂದು ಅನಿಸಿದೆಯಾ?

ಹೌದು. ಆದರೆ ನನ್ನಲ್ಲಿ ಲೋಪಗಳಿವೆ, ನಾನು ಇನ್ನಷ್ಟು ಕಲಿಯಬೇಕು, ಆಗ ನನಗೆ ಒಳ್ಳೆಯ ಪಾತ್ರಗಳು ಸಿಗುತ್ತವೆ ಎಂದುಕೊಂಡಿದ್ದೆ.

ಧಾರಾವಾಹಿಗಳು ಮುಕ್ತಾಯವಾಗುತ್ತಿರುವ ಟೈಮ್‌ನಲ್ಲಿ ನಿಮ್ಮ ಹೊಸ ಧಾರಾವಾಹಿ ಶುರುವಾಗಿದೆ. ಈ ನಿಟ್ಟಿನಲ್ಲಿ ನೀವು ಅದೃಷ್ಟವಂತರು ಎಂದು ಭಾವಿಸುತ್ತೀರಾ?

ನಾನು ಅದೃಷ್ಟವಂತ. ಲಾಕ್‌ಡೌನ್ ಘೋಷಣೆಯಾದಮೇಲೆ 30 ಧಾರಾವಾಹಿಗಳು ಮುಕ್ತಾಯವಾಗಿವೆ. ಕಳೆದ ಫೆಬ್ರವರಿಯಲ್ಲಿ ಈ ಧಾರಾವಾಹಿ ಕೆಲಸ ಆರಂಭವಾಗಿತ್ತು. ಲಾಕ್‌ಡೌನ್ ನಂತರ ಕೂಡ ನಮ್ಮ ಸೀರಿಯಲ್ ಕೆಲಸ ಮುಂದುವರೆಯುತ್ತಿದೆ. 'ಗಿಣಿರಾಮ' ತಂಡ ತುಂಬಾ ಚೆನ್ನಾಗಿದೆ. ನನಗೆ ಈ ಧಾರಾವಾಹಿಯ ಭಾಗವಾಗಿರೋದಕ್ಕೆ ತುಂಬ ಖುಷಿಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ