ಆ್ಯಪ್ನಗರ

ಪ್ಯಾಟೆಗೆ ಬಂದರು ಹನ್ನೆರಡು ಹಳ್ಳಿಗಳ ಹೈದರು

ಈಗಾಗಲೇ ಹಲವು ಆವೃತ್ತಿಗಳನ್ನು ಪೂರೈಸಿರುವ 'ಹಳ್ಳಿ ಹೈದ ಪ್ಯಾಟೆಗ್‌ ಬಂದ ಷೋ, ಕೆಲ ಬದಲಾವಣೆಗಳೊಂದಿಗೆ ಮತ್ತೆ ಸಿದ್ಧವಾಗಿದೆ. ಬದಲಾದ ಹಳ್ಳಿಗಳ ಹನ್ನೆರಡು ಪ್ರತಿಭೆಗಳನ್ನು ಹೊಸ ಆವೃತ್ತಿಗಾಗಿ ಆಯ್ಕೆ ಮಾಡಿಕೊಂಡಿದೆ ಸ್ಟಾರ್‌ ಸುವರ್ಣ ವಾಹಿನಿ.

Vijaya Karnataka 24 Sep 2018, 3:17 pm
* ಶರಣು ಹುಲ್ಲೂರು
Vijaya Karnataka Web halli-haida


ರಾಜ್ಯದ ಹತ್ತು ವಿಭಿನ್ನ ಹಳ್ಳಿಗಳಿಂದ 12 ಹಳ್ಳಿ ಹೈದರನ್ನು ನಗರಕ್ಕೆ ಕರೆತರುತ್ತಿದೆ ಸ್ಟಾರ್‌ ಸುವರ್ಣ ವಾಹಿನಿ. ಈ ಮೂಲಕ 'ಪ್ಯಾಟೆ ಹುಡ್ಗಿ ಹಳ್ಳಿ ಲೈಫ್‌' ನಂತರ 'ಹಳ್ಳಿ ಹೈದ ಪ್ಯಾಟೆಗ್‌ ಬಂದ' ರಿಯಾಲಿಟಿ ಷೋ ಪ್ರಾರಂಭವಾಗಿದ್ದು , ಕಳೆದರಡು ಸೀಸನ್‌ಗಳಿಗಿಂತ ಈ ಆವೃತ್ತಿ ವಿಭಿನ್ನವಾಗಿದೆ ಎಂದು ವಾಹಿನಿ ಹೇಳಿದೆ.

ಇಂದಿನಿಂದಲೇ (ಸೆ.24) ಈ ರಿಯಾಲಿಟಿ ಷೋ ಪ್ರಸಾರವಾಗುತ್ತಿದ್ದು, ಸೆ.23ರಂದು ಉದ್ಘಾಟನಾ ಕಾರ್ಯಕ್ರಮವೂ ನಡೆಯಿತು. ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ರಿಂದ 10 ಗಂಟೆಗೆ ಈ ಷೋ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಹಳ್ಳಿಗಳ ಬದಲಾವಣೆ ಜತೆಗೆ ಅಲ್ಲಿನ ಜನರ ಬದುಕು ಬದಲಾಗಿದೆ. ಸೊಪ್ಪು ಮಾರುವವನು ಇಂದು 4ಜಿ ಫೋನ್‌ ಬಳಸುತ್ತಿದ್ದಾನೆ. ಕುರಿ ಕಾಯುವವನ ಕೈಯಲ್ಲಿ ಕಂಪ್ಯೂಟರ್‌ ಇದೆ. ಆಧುನೀಕರಣ ಗ್ಲೋಬಲ್‌ ಹಳ್ಳಿಗರನ್ನಾಗಿಸಿದ್ದರೂ, ಹಳ್ಳಿಗಳಲ್ಲಿ ಮುಗ್ಧತೆ ಹಾಗೇ ಉಳಿದುಕೊಂಡಿದೆ. ಹಳ್ಳಿತನ ಮತ್ತು ಪ್ರೀತಿ ಸಂಬಂಧಗಳನ್ನು ಅದು ಉಸಿರಾಗಿಸಿಕೊಂಡಿದೆ. ಇವೆಲ್ಲವುಗಳ ಆಧಾರದಲ್ಲಿ ಹಳ್ಳಿ ಹೈದ ಪ್ಯಾಟೆಗ್‌ ಬಂದ ಷೋ ಡಿಸೈನ್‌ ಆಗಿದೆ.

ಈ ಷೋಗೆ ಆಯ್ಕೆಯಾದ 12 ಸ್ಪರ್ಧಾಳುಗಳು ಕೂಡ ಒಬ್ಬರಿಗಿಂತ ಒಬ್ಬರು ವಿಶೇಷವಾಗಿದ್ದಾರೆ. ನಾಟಕವನ್ನೇ ಉಸಿರಾಗಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಮನೋಜ, ದಕ್ಷಿಣ ಕನ್ನಡ ಜಿಲ್ಲೆಯ ಬದುಕನ್ನು ಬಿಂಬಿಸುವ ಶ್ರೀರಾಮ್‌, ಹಸುಗಳನ್ನೇ ಬಂಧುಗಳನ್ನಾಗಿ ಮಾಡಿಕೊಂಡಿರೋ ಮಂಜ, ಬೆಸ್ತರ ಹುಡುಗ ರಮೇಶ, ಸಿದ್ಧಿ ಜನಾಂಗದ ಹೈದ ಸಂತೋಷ್‌ ಸಿದ್ಧಿ, ಡೈರೆಕ್ಟರ್‌ ಆಗುವ ಕನಸಲ್ಲಿ ಕಥೆಗಳನ್ನು ಕಟ್ಟೋ ಬೀಜಮಾರ್ನಹಳ್ಳಿ ಪ್ರಮೋದ್‌, ಉತ್ತರ ಕರ್ನಾಟಕದ ಕುಸ್ತಿಪಟು ಅಮಗೊಂಡ, ಬಂಡೆ ಹೊಡೆಯೊದನ್ನೇ ಬದುಕನ್ನಾಗಿಸಿರುವ ನಾಗರಾಜ, ರೈತ ಹುಡುಗ ದೇವೇಂದ್ರ, ಸಹಜ ಮಿಮಿಕ್ರಿಯ ಹಳ್ಳಿ ಪ್ರತಿಭೆ ಶಿವಾನಂದ.. ಹೀಗೆ ನಾನಾ ಭಾಗದ ಹಳ್ಳಿ ಪ್ರತಿಭೆಗಳು ಈ ಬಾರಿ ವೇದಿಕೆ ಏರಿದ್ದಾರೆ.

ಈ ರಿಯಾಲಿಟಿ ಷೋನಲ್ಲಿ ಮತ್ತಷ್ಟು ವಿಶೇಷಗಳಿವೆ. ಪ್ರತಿದಿನ ಎಲ್ಲಾ ಹೈದರು ಟಾಸ್ಕ್‌ ಮೂಲಕ ಹಣ ಗಳಿಸುತ್ತಾರೆ. ಈ ಹೈದರ ಕನಸಿಗೆ ಬೆಂಗಾವಲಾಗಿ 12 ಸಿಟಿ ಹುಡುಗಿಯರೂ ಇರುತ್ತಾರೆ. ಹಾಗಂತ ಇವರು ಹಳ್ಳಿ ಹೈದರಿಗೆ ನಗರದ ಬದುಕನ್ನು ಕಲಿಸುವುದಿಲ್ಲ. ಅವರ ಹಳ್ಳಿತನ ಸನ್ಮಾನಿಸುವುದು ಮತ್ತು ನಗರದ ತಾಂತ್ರಿಕ ಬದುಕಿನ ಮಧ್ಯೆ ಮಾನವೀಯ ಮೌಲ್ಯಗಳನ್ನೂ ನೆನಪಿಸುವುದು ಈ ಷೋ ಉದ್ದೇಶವಂತೆ. ಹಾಗಾಗಿಯೇ ಹಳ್ಳಿ ಹೈದರು ನಮ್ಮ ಸೂಪರ್‌ ಸ್ಟಾರ್ಸ್‌ ಎನ್ನುತ್ತಿದೆ ಸ್ಟಾರ್‌ ಸುವರ್ಣ ವಾಹಿನಿ. ಈಗಾಗಲೇ ವರ್ಣರಂಜಿತ ವೇದಿಕೆ ರೆಡಿಯಾಗಿದ್ದು, ಹಳ್ಳಿ ಹೈದರನ್ನು ನಟಿಯರಾದ ಮಾಲಾಶ್ರೀ, ಹರಿಪ್ರಿಯಾ ಮತ್ತು ಐಂದ್ರಿತಾ ರೇ ಬರ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ