ಆ್ಯಪ್ನಗರ

ಸುಧಾ ಮೂರ್ತಿ ಪಾದಕ್ಕೆ ನಮಸ್ಕರಿಸಿದ ಅಮಿತಾಭ್ ಬಚ್ಚನ್‌!

'ಕೌನ್‌ ಬನೇಗಾ ಕರೋಡ್‌ಪತಿ' ಸೀಸನ್‌ 11ರ ಕೊನೇ ಸಂಚಿಕೆಯಲ್ಲಿ ಕನ್ನಡತಿ, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಭಾಗವಹಿಸಿದ್ದಾರೆ. ಶೋನಲ್ಲಿ ಅವರ ಕಾಲಿಗೆ ಅಮಿತಾಭ್ ಬಚ್ಚನ್ ನಮಸ್ಕರಿಸಿರುವುದು ವಿಶೇಷವಾಗಿದೆ.

Vijaya Karnataka Web 24 Nov 2019, 4:31 pm
ನಟ ಅಮಿತಾಭ್ ಬಚ್ಚನ್‌ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಜನಪ್ರಿಯ ಶೋ 'ಕೌನ್‌ ಬನೇಗಾ ಕರೋಡ್‌ಪತಿ' ಸೀಸನ್‌ 11 ಕೊನೇ ಹಂತ ತಲುಪಿದೆ. ಕೊನೆಯ ಎಪಿಸೋಡ್‌ ನವೆಂಬರ್‌ 29ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಆ ಸಂಚಿಕೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಸುಧಾ ಮೂರ್ತಿ ಹಾಟ್ ಸೀಟ್‌ನಲ್ಲಿ ಕೂರಲಿದ್ದಾರೆ. ಅದರ ಪ್ರೋಮೋವೊಂದು ರಿಲೀಸ್ ಆಗಿದ್ದು, ಎಲ್ಲರ ಮನಗೆದ್ದಿದೆ.
Vijaya Karnataka Web ಅಮಿತಾಭ್ ಬಚ್ಚನ್


ಸುಧಾ ಮೂರ್ತಿ ಅವರು ಶೋಗೆ ಆಗಮಿಸುತ್ತಿದ್ದಂತೆಯೇ ಅಮಿತಾಭ್‌ ಅವರು ಸೀದಾ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ವಿಶೇಷವೆಂದರೆ, ಅವರು ಸುಧಾ ಮೂರ್ತಿ ಅವರಿಗಿಂತ ಹಿರಿಯರು. ಆದರೂ, ಸುಧಾ ಅವರ ಮಾಡಿರುವ ಸಾಮಾಜಿಕ ಕಾರ್ಯಗಳಿಗೆ ಗೌರವ ನೀಡುವ ಸಲುವಾಗಿ ಕಾಲಿಗೆ ಮುಗಿದಿರುವುದು ವಿಶೇಷ.

ಈ ಹಿಂದೆ ಅನೇಕ ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಗುರುಗಳ ಕಾಲಿಗೆ ಬಿದ್ದು ಸುಧಾ ಮೂರ್ತಿ ಅವರು ಆಶೀರ್ವಾದ ಪಡೆದುಕೊಂಡಿದ್ದರು. 'ವೀಕೆಂಡ್ ವಿತ್‌ ರಮೇಶ್‌' ಕಾರ್ಯಕ್ರಮದಲ್ಲಿ ಅವರು ಬಂದಾಗಲೂ ಶಿಕ್ಷಣ ಕಲಿಸಿದ ಗುರುಗಳ ಕಾಲಿಗೆ ವಂದಿಸಿದ್ದರು. ಆದರೆ, ಕಾರ್ಯಕ್ರಮವೊಂದರಲ್ಲಿ ಅವರ ಕಾಲಿಗೆ ಅಮಿತಾಭ್ ನಮಸ್ಕರಿಸಿರುವುದು ವಿಶೇಷ.

ಈ ಶೋನಲ್ಲಿ ಇನ್ಫೋಸಿಸ್‌ ಫೌಂಡೇಶನ್ ಮೂಲಕ ಸುಧಾ ಮೂರ್ತಿ ಅವರು ಮಾಡಿರುವ ಅನೇಕ ಜನಪರ ಕಾರ್ಯಕ್ರಮಗಳ ಬಗ್ಗೆ ಬಚ್ಚನ್ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕೆಲವು ದಿನಗಳ ಹಿಂದೆಯೇ ಈ ಶೋನಲ್ಲಿ ಭಾಗವಹಿಸಿದ್ದರ ಕುರಿತು ಸುಧಾ ಮೂರ್ತಿ ಮಾಹಿತಿ ಹಂಚಿಕೊಂಡಿದ್ದಾರೆ. 'ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್‌ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ. ಸೋಲು, ಗೆಲುವು ದೊಡ್ಡದಲ್ಲ, ನಾವು ಮಾಡುವ ಕೆಲಸದ ಮೂಲಕ ಜನರನ್ನು ತಲುಪುವುದು ನಮ್ಮ ಉದ್ದೇಶ ಮುಖ್ಯ' ಎಂದಿದ್ದರು.

ಅಮಿತಾಭ್ ಕೂಡ ಸುಧಾ ಅವರ ಸಂಚಿಕೆ ಕುರಿತು, 'ಸುಧಾ ಮೂರ್ತಿ ಅವರನ್ನು ಭೇಟಿಯಾಗಿದ್ದು ಹೆಮ್ಮೆ ಹಾಗೂ ನನ್ನ ಸೌಭಾಗ್ಯ. ಅವರ ಪ್ರತಿಷ್ಠಾನದಿಂದ ಮಾಡುತ್ತಿರುವ ಕೆಲಸ ಕಾರ್ಯಗಳು, ದುರ್ಬಲರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಸಹಕಾರ ಶ್ಲಾಘನೀಯ. ಅವರೊಂದಿಗೆ ಕಳೆದ ಕ್ಷಣಗಳು ಮರೆಯಲಾಗದ ಅನುಭವ. ಅವರಿಂದ ಕಲಿಯುವುದು ಬಹಳಷ್ಟಿದೆ' ಎಂದು ಮನದಾಳ ಹಂಚಿಕೊಂಡಿದ್ದರು. ಸಂಚಿಕೆಯಲ್ಲಿ ದೇವದಾಸಿಯರು ನೇಯ್ದ ಚಾದರವೊಂದನ್ನು ಸುಧಾ ಮೂರ್ತಿ ಅವರು ಬಚ್ಚನ್‌ಗೆ ಗಿಫ್ಟ್ ಆಗಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ