ಆ್ಯಪ್ನಗರ

'ಕನ್ನಡ ಕೋಗಿಲೆ' ಶೋನಲ್ಲಿ ಮಿಂಚುತ್ತಿರುವ ಮರಿ ಕೋಗಿಲೆ ರೇವತಿ

ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ರಾಯರ ಮಠದಲ್ಲಿ ನಡೆದ ದಾಸವಾಣಿ ಕಾರ್ಯಕ್ರಮ, ಕಲ್ಯಾಣ ನಗರದ ರಾಮಕೃಷ್ಣ ಆಶ್ರಮ, ವಿದ್ಯಾನಗರದ ರಾಯರಮಠ, ಧಾರವಾಡದಲ್ಲಿ ನಡೆದ ತುಳಜಾಭವಾನಿ ಉತ್ಸವದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾಳೆ. ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಫ್ರೆಂಡ್ಸ್‌ ಕ್ಲಬ್‌ ನವರು ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಪ್ರತಿಭೋತ್ಸವದಲ್ಲಿ ಸಾವಿರಾರು ಜನರ ಎದುರು ಹಾಡಿ ಪ್ರತಿಭೆ ಮೆರೆದಿದ್ದಾಳೆ.

Vijaya Karnataka 20 Apr 2019, 3:12 pm
* ಸುನೀಲ ಘಂಟೀಯವರ
Vijaya Karnataka Web revathi


ಖಾಸಗಿ ವಾಹಿನಿಯೊಂದರ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ರೇವತಿ ಅನಿಲಕುಮಾರ ಎನ್ನುವ ಎಂಟು ವರ್ಷದ ಬಾಲಕಿ ಆಯ್ಕೆಯಾಗಿದ್ದು, ತನ್ನ ಹಾಡಿನ ಮೋಡಿ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾಳೆ. ಇವಳ ನೇರ ಮಾತುಗಳು ಗಮನ ಸೆಳೆಯುತ್ತಿವೆ. ಹುಬ್ಬಳ್ಳಿ ಶ್ರೀ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಈ ಬಾಲೆಗೆ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ. ತಾಯಿ ಜ್ಯೋತಿ, ತಂದೆ ಅನಿಲಕುಮಾರ ಹವ್ಯಾಸಿ ಗಾಯಕರು. ಇವರು ನಿತ್ಯ ಮನೆಯಲ್ಲಿ ಹಾಡುವುದನ್ನು ಕೇಳಿ ರೇವತಿಗೂ ಗಾಯನದಲ್ಲಿ ಆಸೆ ಮೂಡಿತು. ಇನ್ನೇನು ತಡ, ಇವರೊಂದಿಗೆ ಸೇರಿ ರೇವತಿ ಹಾಡಲು ಶುರುಮಾಡಿಯೇ ಬಿಟ್ಟಳು. ತಂದೆ, ತಾಯಿ, ಅಕ್ಕ ಇವಳಿಗೆ ಮನೆಯಲ್ಲಿಯೇ ಮೊದಲ ಗುರುಗಳಾದರು.

ಮೊದಲು ಯಾವುದೇ ಸಂಗೀತ ತರಬೇತಿ ಪಡೆಯದೇ ಮೊಬೈಲ್‌ನಲ್ಲಿ ಹಾಡುಗಳನ್ನು ಕೇಳುತ್ತ ಭಕ್ತಿಗೀತೆ, ಭಾವಗೀತೆ, ಜಾನಪದ ಸೇರಿದಂತೆ 50ರಿಂದ 60 ಹಾಡುಗಳನ್ನು ನಿರರ್ಗಳವಾಗಿ ಹಾಡಲಾರಂಭಿಸಿದಳು. ಇವಳಿಗೆ ಸಂಗೀತದಲ್ಲಿರುವ ಆಸಕ್ತಿ ಕಂಡು ಪಾಲಕರು ಕಳೆದ 6 ತಿಂಗಳುಗಳ ಹಿಂದೆ ಸಂಗೀತ ಅಭ್ಯಾಸಕ್ಕೆ ಸೇರಿಸಿದ್ದಾರೆ.

ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ರಾಯರ ಮಠದಲ್ಲಿ ನಡೆದ ದಾಸವಾಣಿ ಕಾರ್ಯಕ್ರಮ, ಕಲ್ಯಾಣ ನಗರದ ರಾಮಕೃಷ್ಣ ಆಶ್ರಮ, ವಿದ್ಯಾನಗರದ ರಾಯರಮಠ, ಧಾರವಾಡದಲ್ಲಿ ನಡೆದ ತುಳಜಾಭವಾನಿ ಉತ್ಸವದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾಳೆ. ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಫ್ರೆಂಡ್ಸ್‌ ಕ್ಲಬ್‌ ನವರು ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಪ್ರತಿಭೋತ್ಸವದಲ್ಲಿ ಸಾವಿರಾರು ಜನರ ಎದುರು ಹಾಡಿ ಪ್ರತಿಭೆ ಮೆರೆದಿದ್ದಾಳೆ.

ಶಾಲೆಯಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಯಶಸ್ಸು ಗಳಿಸಿ ಹಲವಾರು ಟ್ರೋಫಿ ಗೆದ್ದಿದ್ದಾಳೆ. ಕೇವಲ ಸಂಗೀತ ಮಾತ್ರವಲ್ಲದೇ ಶಿಕ್ಷಣದಲ್ಲೂ ಯಾವಾಗಲೂ ಪ್ರಥಮ ಸ್ಥಾನ ಇವಳದ್ದೇ. ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಬಿದ್ದರೂ ಸಹಿಸದ ಇವಳು ಹೆಚ್ಚು ಹೆಚ್ಚು ಓದಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆಯದೇ ಬಿಡುವುದೇ ಇಲ್ಲ.

ಸಂಗೀತ ಅಭ್ಯಾಸಕ್ಕೆ ಸೇರಿ ಕೇವಲ ಆರು ತಿಂಗಳಲ್ಲಿ ರಾಗ, ತಾಳ ಮನನ ಮಾಡಿಕೊಂಡು ಕನ್ನಡ ಕೋಗಿಲೆ ಎಂಬ ದೊಡ್ಡ ವೇದಿಕೆ ಏರಿದ್ದಾಳೆ. ಈ ಕಾರ್ಯಕ್ರಮದ ಮೂರು ಸುತ್ತುಗಳಲ್ಲಿ ಅದ್ಭುತವಾಗಿ ಹಾಡಿ ನಿರ್ಣಾಯಕರ ಮನ ಗೆಲ್ಲುವ ಮೂಲಕ ನಾಲ್ಕನೇ ಸುತ್ತಿಗೆ ಕಾಲಿಟ್ಟಿದ್ದಾಳೆ. ಇವಳ ಗಾಯನ ಕೇಳಿ ಸೃಜನ ಲೋಕೇಶ್‌ ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ ಅವಕಾಶ ನೀಡಿದ್ದಾರೆ. ಈ ಪುಟ್ಟ ಬಾಲಕಿಯ ಸಂಗೀತ ಪಯಣ ಹೀಗೆ ಉತ್ತುಂಗಕ್ಕೆ ಸಾಗಲಿ ಎನ್ನುವುದೇ ಹುಬ್ಬಳ್ಳಿಗರ ಆಶಯ.

"ರೇವತಿ ಬಹಳ ಪ್ರತಿಭಾವಂತ ಬಾಲಕಿ. ಹೇಳಿದ ಎಲ್ಲ ವಿಷಯಗಳನ್ನು ಬೇಗ ಗ್ರಹಿಸಿಕೊಳ್ಳುತ್ತಾಳೆ. ಯಾವುದೇ ಸ್ವರ, ತಾಳಗಳ ಬಗ್ಗೆ ಒಂದೆರಡು ಬಾರಿ ಕೇಳಿದರೂ ಸಾಕು ಅವುಗಳನ್ನು ನಿರರ್ಗಳವಾಗಿ ಹಾಡುತ್ತಾಳೆ. ಈ ಪ್ರತಿಭೆ ಅವಳ ತಾಯಿಯಿಂದ ಬಂದ ಬಳುವಳಿ."

- ಆನಂದ ದೇಸಾಯಿ, ಸಂಗೀತ ಶಿಕ್ಷಕರು

"ಗಾಯನ ಎಂದರೆ ನನಗೆ ಬಹಳ ಇಷ್ಟ. ಎಲ್ಲರಿಗಿಂತಲೂ ಚೆನ್ನಾಗಿ ಹಾಡಬೇಕೆಂದು ಪ್ರಯತ್ನಿಸುತ್ತೇನೆ. ನನ್ನ ಈ ಪ್ರಯತ್ನಕ್ಕೆ ತಂದೆ ತಾಯಿಯೇ ಪ್ರೇರಣೆ."

- ರೇವತಿ ಅನೀಲಕುಮಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ