ಆ್ಯಪ್ನಗರ

'ಇಷ್ಟ ದೇವತೆ' ಮೂಲಕ ಕಿರುತೆರೆಗೆ ಮರಳಿದ ರಂಜನಿ ರಾಘವನ್

ವಿಶಿಷ್ಟ ಸೀರಿಯಲ್‌ಗಳ ಮೂಲಕ ಮನೆ ಮಾತಾಗಿರುವ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಹೊಸ ಧಾರಾವಾಹಿ ಆರಂಭವಾಗುತ್ತಿದೆ.

Vijaya Karnataka 26 May 2019, 8:00 am
* ಹರೀಶ್‌ ಬಸವರಾಜ್‌
Vijaya Karnataka Web ista-devate


ಈಗಾಗಲೇ ಸಾಕಷ್ಟು ಹೊಸ ರೀತಿಯ ಸೀರಿಯಲ್‌ಗಳ ಮೂಲಕ ಜನರಿಗೆ ಹತ್ತಿರವಾಗಿರುವ ಕಲರ್ಸ್‌ ಕನ್ನಡದಲ್ಲಿ ಈಗ ಇಷ್ಟದೇವತೆ ಎಂಬ ಹೊಸ ಸೀರಿಯಲ್‌ ಸೋಮವಾರದಿಂದ ಆರಂಭವಾಗಲಿದೆ.

ಪುಟ್ಟ ಗೌರಿ ಮದುವೆ ಸೀರಿಯಲ್‌ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ರಂಜಿನಿ ರಾಘವನ್‌ ಈ ಇಷ್ಟದೇವತೆ ಸೀರಿಯಲ್‌ಗೆ ಕಥೆ ಮತ್ತು ಚಿತ್ರಕಥೆ ಬರೆದು ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. 'ಮಗಳ ಕಣ್ಣಲ್ಲಿ ನೃತ್ಯದ ಕನಸಿಟ್ಟು ತಂದೆ ಮರಣ ಹೊಂದುತ್ತಾರೆ. ಈ ಕನಸನ್ನು ನಾಯಕಿಯ ತಾಯಿ ಪೋಷಿಸುತ್ತಾರೆ. ತನ್ನ ಪೋಷಕರ ಕನಸನ್ನು ನನಸು ಮಾಡಲು ಮಗಳು ವೈದೇಹಿ ಭರತನಾಟ್ಯವನ್ನು ತನ್ನ ಬದುಕಾಗಿಸಿಕೊಳ್ಳುತ್ತಾಳೆ.

ಇದು ನಾಯಕಿಯ ಕಥೆಯಾದರೆ, ಅತ್ತ ತನ್ನ ತಂದೆಯ ಸಾವಿನಿಂದಾಗಿ, ಅವರು ಕಟ್ಟಿ ಬೆಳೆಸಿದ ಫುಡ್‌ ಇಂಡಸ್ಟ್ರಿಯನ್ನು ಮುನ್ನೆಡೆಸುವ ಜವಾಬ್ದಾರಿ ಹೊರುವ ನಾಯಕ ಶ್ರೀರಾಮ್‌. ನಾಯಕಿ ವೈದೇಹಿ ವಾಸ್ತವವಾದಿ, ನಾಯಕ ಶ್ರೀರಾಮ್‌ ಪರಮ ಭಕ್ತ. ಇವರು ಹೇಗೆ ಒಂದಾಗುತ್ತಾರೆ, ಜತೆಗೆ ನಾಯಕ ಶ್ರೀರಾಮ್‌ಗೆ ನಾಯಕಿ ವೈದೇಹಿ ಹೇಗೆ ಇಷ್ಟದ ದೇವತೆಯಾಗುತ್ತಾಳೆ, ಜತೆಗೆ ವೈದೇಹಿ ಕಂಡಿದ್ದ ನೃತ್ಯದ ಕನಸು ಏನಾಗುತ್ತದೆ ಎಂಬುದೇ ಸೀರಿಯಲ್‌ನ ಕಥೆ'ಎನ್ನುತ್ತಾರೆ ಈ ಧಾರಾವಾಹಿಯ ಕ್ರಿಯೇಟಿವ್‌ ಡೈರೆಕ್ಟರ್‌ ರಂಜಿನಿ ರಾಘವನ್‌.

ಬಹಳ ವರ್ಷಗಳ ನಂತರ ಈ ಸೀರಿಯಲ್‌ಗಾಗಿ ಗಾಯಕ ರಾಜೇಶ್‌ ಕೃಷ್ಣನ್‌ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ. ಹಿರಿಯ ನಟಿ ಭವ್ಯಾ, ನಾಯಕಿಯ ತಾಯಿಯಾಗಿ ನಟಿಸುತ್ತಿದ್ದಾರೆ. ಇರುವುದೆಲ್ಲ ಬಿಟ್ಟು ಸಿನಿಮಾ ಖ್ಯಾತಿಯ ನಟ ಶ್ರೀ ಮಹಾದೇವ್‌ ನಾಯಕರಾದರೆ, ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ರಾಶಿ ಇಷ್ಟದೇವತೆಯ ನಾಯಕಿಯಾಗಿದ್ದಾರೆ.

ಲೈಮ್‌ಲೈಟ್‌ ಪ್ರೊಡಕ್ಷನ್ಸ್‌ ಮತ್ತು ಕತೆ ಸ್ಟುಡಿಯೋ ಸಹಯೋಗದಲ್ಲಿ ಮೂಡಿಬರುತ್ತಿರುವ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವುದು ಪೃಥ್ವಿರಾಜ್‌ ಮ ಕುಲಕರ್ಣಿ. ಈ ಸೀರಿಯಲ್‌ ಇದೇ ಮೇ 27 ಅಂದರೆ ಸೋಮವಾರದಿಂದ ಕಲರ್ಸ್‌ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ದೈವಭಕ್ತ ನಾಯಕ, ವಾಸ್ತವವಾದಿ ನಾಯಕಿ. ಜೊತೆಯಲ್ಲಿದ್ದುಕೊಂಡೇ ಇಬ್ಬರೂ ನಡೆಸುವ ಪರಸ್ಪರರ ಹುಡುಕಾಟ, ಅನೂಹ್ಯ ತಿರುವುಗಳು ಮತ್ತು ರೋಚಕ ಸನ್ನಿವೇಶಗಳು ಇಷ್ಟದೇವತೆಯಲ್ಲಿದೆ. ಈ ಅಂಶಗಳು ಯುವ ಜನರಿಂದ ಹಿಡಿದು ಎಲ್ಲರಿಗೂ ಇಷ್ಟವಾಗುತ್ತದೆ.

ಪರಮೇಶ್ವರ ಗುಂಡ್ಕಲ್‌, ಬಿಸ್ನೆಸ್‌ ಹೆಡ್‌ ಕಲರ್ಸ್‌ ಕನ್ನಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ