ಆ್ಯಪ್ನಗರ

ಮಿನಾಕ್ಷಮ್ಮನ ಜನಪ್ರಿಯತೆಗೆ ಫಿದಾ ಆದ ಪವಿತ್ರಾ ಲೋಕೇಶ್‌

ದಕ್ಷಿಣ ಭಾರತದ ಖ್ಯಾತ ನಟಿ ಪವಿತ್ರಾ ಲೊಕೇಶ್‌ ನಟನೆಯ 'ಅರಮನೆ ಗಿಳಿ' ಸೀರಿಯಲ್‌ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Vijaya Karnataka 22 May 2019, 7:52 pm
* ಹರೀಶ್‌ ಬಸವರಾಜ್‌
Vijaya Karnataka Web pavitra


ಬಹಳ ವರ್ಷಗಳ ನಂತರ ಕನ್ನಡ ಕಿರುತೆರೆಗೆ 'ಅರಮನೆ ಗಿಳಿ' ಸೀರಿಯಲ್‌ ಮೂಲಕ ಮರಳಿದ ಪವಿತ್ರಾ ಲೊಕೇಶ್‌ ಅವರಿಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸೋಮವಾರದಿಂದ ಪ್ರಸಾರ ಆರಂಭಿಸಿರುವ ಈ ಸೀರಿಯಲ್‌ಗೆ ಈಗಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಸ್ಟಾರ್‌ ಸುವರ್ಣ ವಾಹಿನಿಯ ಹಿಟ್‌ ಸೀರಿಯಲ್‌ಗಳ ಸಾಲಿಗೆ 'ಅರಮನೆ ಗಿಳಿ' ಸಹ ಸೇರಿಕೊಳ್ಳುತ್ತಿದ್ದು, ಸ್ಟಾರ್‌ ಸುವರ್ಣ ಫೇಸ್‌ ಬುಕ್‌ ಪೇಜ್‌ ಸೇರಿದಂತೆ ಸಾಕಷ್ಟು ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಚಾನೆಲ್‌ ವತಿಯಿಂದ ಸಂತಸ ವ್ಯಕ್ತವಾಗಿದೆ.

'ಪವಿತ್ರಾ ಲೊಕೇಶ್‌ ಬಹಳ ವರ್ಷಗಳ ನಂತರ ಕಿರುತೆರೆಗೆ ಬಂದರೂ, ರಾಜ್ಯದ ಪ್ರತಿ ಮನೆಯಲ್ಲಿಯೂ ಅವರನ್ನು ಇಷ್ಟಪಡುವ ವೀಕ್ಷಕರಿದ್ದಾರೆ ಎಂಬುದು ನಮಗೆ ಎರಡೇ ದಿನಗಳಲ್ಲಿ ಗೊತ್ತಾಗಿದೆ. ಸಾಕಷ್ಟು ಜನ ಅವರ ಅಭಿನಯವನ್ನು ಮೆಚ್ಚಿಕೊಂಡು ನನಗೆ ಕಾಲ್‌ ಮಾಡಿದ್ದಾರೆ. ಇದರ ಜತೆಗೆ ಮೀರಾ ಪಾತ್ರಧಾರಿ ನಮ್ಮ ಗಿಳಿ ವರ್ಷಿಕಾ ಅವರ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ' ಎಂದು ಧಾರಾವಾಹಿ ನಿರ್ದೇಶಕ ನಾಗೇಶ್‌ ಕೃಷ್ಣ ತಿಳಿಸಿದ್ದಾರೆ.

'ಅರಮನೆ ಗಿಳಿ' ಒಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಧಾರಾವಾಹಿ. ಮೀನಾಕ್ಷಮ್ಮ ಎಂದರೆ ಊರಿಗೆ ಊರೇ ಗೌರವ ಕೊಡುತ್ತದೆ. ಇಂತಹ ಮೀನಾಕ್ಷಮ್ಮನಿಗೆ ಒಬ್ಬನೇ ಮಗ ಅರ್ಜುನ್‌. ಅಪಘಾತದಲ್ಲಿ ಕಾಲಿನ ಶಕ್ತಿಯನ್ನು ಕಳೆದುಕೊಂಡಿರುವ ಆತನ ಪರಿಸ್ಥಿತಿ ಕಂಡು ತಾಯಿಗೆ ದುಃಖವಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಈ ಮನೆಯ ಏಳ್ಗೆಗಾಗಿ ತನ್ನೆಲ್ಲ ಕನಸುಗಳನ್ನು ಕಟ್ಟಿಟ್ಟು ಮೀನಾಕ್ಷಮ್ಮನವರ ಬದುಕಿಗೆ ಬರುವ ಮೀರಾಳ ಕಥೆಯೇ ಈ 'ಅರಮನೆ ಗಿಳಿ'.

'ನಾನು ಬಹಳ ವರ್ಷಗಳ ನಂತರ ಕಿರುತೆರೆಗೆ ಬಂದಿದ್ದೇನೆ. ಜನ ಅದ್ಭುತವಾಗಿ ರಿಸೀವ್‌ ಮಾಡಿಕೊಂಡಿದ್ದಾರೆ. ಈ ಸೀರಿಯಲ್‌ನ ಪಾತ್ರವೇ ನನ್ನನ್ನು ಕಿರುತೆರೆಗೆ ಮತ್ತೆ ಕರೆತಂದಿದೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿರುತ್ತೇವೆ. ಆದರೆ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರೆ ಮನೆ ಮನೆಗೂ ರೀಚ್‌ ಆಗುತ್ತೇವೆ. 'ಅರಮನೆ ಗಿಳಿ' ಕೂಡ ಅಂತಹದ್ದೇ ಒಂದು ಅನುಭವ ನೀಡಿದೆ. ಬರೀ ಪ್ರೋಮೋ ಬರುತ್ತಿರುವಾಗಲೇ ಸಂಪರ್ಕ ಬಿಟ್ಟು ಹೋಗಿದ್ದ ಎಷ್ಟೋ ಜನ ಮತ್ತೆ ಕರೆ ಮಾಡಿ ಅಭಿನಂದನೆ ಹೇಳಿದ್ದಾರೆ. ಈಗ ಎರಡು ದಿನ ನೋಡಿ ಖುಷಿ ಪಟ್ಟಿದ್ದಾರೆ'ಎನ್ನುತ್ತಾರೆ ನಟಿ ಪವಿತ್ರಾ ಲೊಕೇಶ್‌.

'ಅರಮನೆ ಗಿಳಿ' ಧಾರಾವಾಹಿಯಲ್ಲಿ ಸಿಂಧು ಕಲ್ಯಾಣ್‌, ಮಧುಸಾಗರ್‌ , ಪ್ರಕಾಶ್‌ಅರಸ್‌, ಗಿರೀಶ್‌ಜತ್ತಿ, ಪಲ್ಲವಿ ಶೆಟ್ಟಿ, ರೂಪ ಶಂಕರ್‌ ನಟಿಸುತ್ತಿದ್ದಾರೆ. ಸೋಮವಾರದಿಂದ ಶನಿವಾರದವೆರೆಗೆ ಪ್ರತಿ ರಾತ್ರಿ 9ಗಂಟೆಗೆ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗಲಿದೆ.

----

ಮೊದಲ ದಿನವೇ ನನ್ನ ವಾಟ್ಸ್‌ಅಪ್‌ ತುಂಬಿ ಹೋಗಿತ್ತು. ಜನ ನನ್ನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇಡೀ ತಂಡಕ್ಕೆ ನಾನು ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ಮೀನಾಕ್ಷಮ್ಮನ ಪಾತ್ರ ಬಹಳ ಚೆನ್ನಾಗಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಇನ್ನೂ ಇಷ್ಟವಾಗುತ್ತದೆ.

-ಪವಿತ್ರಾ ಲೊಕೇಶ್‌,ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ