ಆ್ಯಪ್ನಗರ

ಮಗಳು ಜಾನಕಿಯೊಂದಿಗೆ ಬಂದ ಸೀತಾರಾಮ್‌

ಟಿ ಎನ್‌ ಸೀತಾರಾಮ್‌ ಮಗಳು ಜಾನಕಿ ಎಂಬ ಸೀರಿಯಲ್‌ನೊಂದಿಗೆ ಮತ್ತೆ ಬಂದಿದ್ದಾರೆ.

Vijaya Karnataka 6 Jul 2018, 5:00 am
ಹರೀಶ್‌ ಬಸವರಾಜ್‌
Vijaya Karnataka Web MJ 1


ಟಿ ವಿ ಸೀರಿಯಲ್‌ಗಳಿಗೆ ಜನರನ್ನು ಅಂಟಿಕೊಳ್ಳುವಂತೆ ಮಾಡಿದ್ದ ಟಿ ಎನ್‌ ಸೀತಾರಾಮ್‌ ಮಹಾಪರ್ವದ ನಂತರ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಮಗಳು ಜಾನಕಿ ಎಂಬ ಭಾವನಾತ್ಮಕ ಸೀರಿಯಲ್‌ ಮೂಲಕ ವಾಪಸ್ಸಾಗಿದ್ದಾರೆ.

ಲಾಯರ್‌ ಸಿಎಸ್‌ಪಿ, ರಶ್ಮಿಯನ್ನು ಮದುವೆಯಾಗಿ 20 ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದುಕೊಂಡಿರುತ್ತಾರೆ. ಇವರಿಬ್ಬರಿಗೂ ಜಾನಕಿ ಎಂಬ ಮಗಳಿರುತ್ತಾಳೆ, ಸಿಎಸ್‌ಪಿಯವರಿಂದ ವಿಚ್ಛೇದನ ಪಡೆದ ನಂತರ ರಶ್ಮಿ ಚಂದು ಭಾರ್ಗಿ ಎಂಬ ಉದ್ಯಮಿ ಕಮ್‌ ರಾಜಕಾರಣಿ ಜತೆ ಮದುವೆ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಇವರಿಬ್ಬರಿಗೂ ಚಂಚಲಾ ಎಂಬ ಮಗಳಿರುತ್ತಾಳೆ. ಜಾನಕಿ, ಚಂದು ಭಾರ್ಗಿಯೇ ತನ್ನ ಸ್ವಂತ ತಂದೆ ಎಂದುಕೊಂಡಿರುತ್ತಾಳೆ. ಇಂತಹ ಮಗಳಿಗೆ ಸಿಎಸ್‌ಪಿ ತನ್ನ ಸ್ವಂತ ತಂದೆ ಎಂಬುದು ತಿಳಿಯುತ್ತದಾ, ಚಂದು ಅದನ್ನು ಮಗಳಿಗೆ ಹೇಳುತ್ತಾನಾ ಎಂಬುದರ ಸುತ್ತ ಈ ಕಥೆ ನಡೆಯುತ್ತದೆ.

'ನನ್ನ ಹಿಂದಿನ ಸೀರಿಯಲ್‌ಗಳಿಂತ ಈ ಬಾರಿ ಒಂದಷ್ಟು ಅಪ್‌ಡೇಟ್‌ ಆಗಿದ್ದೇನೆ. ಹಿಂದೆ ನನ್ನ ಸೀರಿಯಲ್‌ಗಳಲ್ಲಿ ಕೋರ್ಟ್‌ ಮತ್ತು ಕೇಸಿನ ಸೀನ್‌ಗಳು ಬಹಳಷ್ಟಿರುತ್ತಿದ್ದವು ಈ ಬಾರಿ ಅಂತಹ ಸೀನ್‌ಗಳಿಗಿಂತ, ಅಪ್ಪ -ಮಗಳ ಭಾವನಾತ್ಮಕ ಅಂಶಗಳಿಗೆ ಬೆಲೆ ಕೊಟ್ಟಿದ್ದೇನೆ. ನಾನು ಲಾಯರ್‌ ಸಿಎಸ್‌ಪಿ ಪಾತ್ರದಲ್ಲಿ ಮುಂದುವರೆದಿದ್ದೇನೆ. ಹಿಂದಿನ ಬಾರಿಗಿಂತಲೂ ನನ್ನ ಭಾಗದ ನಟನೆಯ ಜಾಸ್ತಿ ಇದೆ. ಕಥೆ ಹಳೆಯದು ಎನ್ನಿಸಿದರೂ ಪ್ರೆಸೆಂಟೇಶನ್‌ ಹೊಸದಾಗಿರುತ್ತದೆ'ಎನ್ನುತ್ತಾರೆ ನಿರ್ದೇಶಕ ಸೀತಾರಾಮ್‌.

ಈ ಸೀರಿಯಲ್‌ನಲ್ಲಿ ಜಾನಕಿ ಪಾತ್ರವನ್ನು ಚಿಕ್ಕಮಗಳೂರು ಮೂಲದ ಗಾನವಿ ಮಾಡುತ್ತಿದ್ದಾರೆ. ರಂಗಭೂಮಿಯಲ್ಲಿದ್ದ ಗಾನವಿ, ಯೋಗ ಇನ್‌ಸ್ಟ್ರಕ್ಟರ್‌ ಆಗಿಯೂ ಕೆಲಸ ಮಾಡಿದ್ದಾರೆ.

'ಈ ಸೀರಿಯಲ್‌ನಲ್ಲಿ ನನ್ನದು ತುಂಬಾ ಜವಾಬ್ದಾರಿಯುತ ಪಾತ್ರ. ನಾನು ಇಲ್ಲಿ ಸಂಗೀತ, ಸಾಹಿತ್ಯವನ್ನು ಇಷ್ಟಪಡುವ ಹುಡುಗಿ ತುಂಬಾ ಇಷ್ಟವಾದ ಪಾತ್ರ, ಈಗ ಮೂರು ಎಪಿಸೋಡ್‌ಗಳು ಪ್ರಸಾರವಾಗಿವೆ. ಅದರಲ್ಲಿಯೇ ಜನ ಮೆಚ್ಚಿಕೊಂಡಿದ್ದಾರೆ. ಇನ್ನು ಇಲ್ಲಿ ಕಲಿಯುವುದು ಸಾಕಷ್ಟಿದೆ. ಒಳ್ಳೆ ಪಾತ್ರ ಸಿಕ್ಕಿರುವುದಕ್ಕೆ ನನಗೆ ಖುಷಿಯಿದೆ,'ಎನ್ನುವುದು ಗಾನವಿ ಮಾತು.

ಸುಮಾರು ಐದು ವರ್ಷಗಳ ನಂತರ ಟಿ ಎನ್‌ ಸೀತಾರಾಮ್‌ ಕಿರುತೆರೆಗೆ ವಾಪಸ್ಸಾಗಿದ್ದು, ಜನರ ನಿರೀಕ್ಷೆ ಬಹಳಷ್ಟಿದೆ. ಈಗಾಗಲೇ ಮೂರು ಎಪಿಸೋಡ್‌ಗಳು ಜನಪ್ರಿಯವಾಗಿದ್ದು, ಧಾರಾವಾಹಿಯ ಟೈಟಲ್‌ ಟ್ರ್ಯಾಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಟೈಟಲ್‌ ಟ್ರ್ಯಾಕ್‌ನ ಸಾಹಿತ್ಯ ಖ್ಯಾತ ಕವಿ ಎಚ್‌ ಎಸ್‌ ವೆಂಕಟೇಶಮೂರ್ತಿಯವರದ್ದಾದರೆ, ಪ್ರವೀಣ್‌ ಡಿ ರಾವ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಪ್ರಕಾಶ್‌ ಈ ಹಾಡನ್ನು ಹಾಡಿದ್ದಾರೆ. ಮಗಳು ಜಾನಕಿ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗುತ್ತದೆ.

---
ಸೀತಾರಾಮ್‌ ಅವರಂತಹ ದೊಡ್ಡ ಡೈರೆಕ್ಟರ್‌ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇದನ್ನು ನಾನು ದೊಡ್ಡ ಅವಕಾಶ ಎಂದುಕೊಂಡು ಎಷ್ಟಾಗುತ್ತೋ ಅಷ್ಟನ್ನು ಕಲಿಯಲು ಪ್ರಯತ್ನ ಪಡುತ್ತೇನೆ.
-ಗಾನವಿ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ