ಆ್ಯಪ್ನಗರ

ಎಸಿಯ ಹಿತಕ್ಕೆ ಕದಿಯಲು ಬಂದ ಮನೆಯಲ್ಲೇ ನಿದ್ದೆಗೆ ಜಾರಿಗೆ ಚೋರ...!

ಇದೊಂದು ವಿಚಿತ್ರ ಘಟನೆ. ಕಳ್ಳನೊಬ್ಬ ಕದಿಯಲು ಬಂದಿದ್ದ ಮನೆಯಲ್ಲಿಯೇ ನಿದ್ದೆಗೆ ಜಾರಿದ್ದಾನೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Vijaya Karnataka Web 19 Sep 2020, 12:54 pm
ಕೆಲಸ ಮಾಡಿ ದಣಿದಾಗ, ದೇಹಕ್ಕೆ ಜಾಸ್ತಿ ಸುಸ್ತಾದಾಗ ಎಲ್ಲರಿಗೂ ನಿದ್ರೆ ಮಂಪರು ಕಾಡುವುದಿದೆ. ಹೀಗಾಗಿ, ಬಹುತೇಕ ಸಲ ಈ ನಿದ್ದೆಯನ್ನು ತಡೆಯಲು ಸಾಧ್ಯವೇ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಬಹುತೇಕರು ಕಿರುನಿದ್ದೆಗೆ ಜಾರುತ್ತಾರೆ. ಅದರಲ್ಲೂ ಎಸಿ ಇದ್ದರಂತೂ ಕೆಲವರು ಬಹುಬೇಗ ನಿದ್ರಾದೇವಿಯ ಮಡಿಲಲ್ಲಿ ಹಾಯಾಗಿ ಮಲಗುತ್ತಾರೆ. ಕೆಲವೊಮ್ಮೆ ಇದೇ ಸಮಸ್ಯೆ ಕಳ್ಳರನ್ನೂ ಕಾಡುವುದಿದೆ...!
Vijaya Karnataka Web Image by TheDigitalWay from Pixabay
| Representative image | Image by TheDigitalWay from Pixabay


ಇದೇ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಉದ್ಯಮಿಯೊಬ್ಬರ ಮನೆ ಛಾವಣಿ ಒಡೆದು ಒಳನುಗ್ಗಿದ್ದ ಕಳ್ಳ ಬಳಿಕ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದ... ಹೀಗಾಗಿ, ಬೆಳಗ್ಗೆ ಮಾಲಿಕರಿಂದ ಬೆತ್ತದ ರುಚಿ ತಿಂದಿದ್ದ ಕಳ್ಳ ಜೈಲು ಸೇರಿದ್ದ. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ಹರಿದಾಡುತ್ತಿದೆ.

Also Read : 32 ವರ್ಷವಾದರೂ 14 ವರ್ಷದ ಬಾಲಕನಂತೆ ಕಾಣುವ ಯುವಕ...!

ಇದು ನಡೆದಿರುವುದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ. ಇಲ್ಲಿನ ಮನೆಯೊಂದರಲ್ಲಿ ಕಳವು ಮಾಡುವುದಕ್ಕೆ 22 ವರ್ಷದ ಬಾಬು ಎಂಬ ಯುವಕ ಸ್ಕೆಚ್ ಹಾಕಿದ್ದ. ತನ್ನ ಈ ಕೃತ್ಯಕ್ಕೆ ಈತ ಗುರುತಿಸಿದ್ದು ಪೆಟ್ರೋಲ್ ಬಂಕ್ ಮಾಲೀಕರ ಮನೆಯನ್ನು...! ಹೀಗಾಗಿ, ತಾನು ಹಾಕಿದ್ದ ಯೋಜನೆಯಂತೆ ಸೆಪ್ಟೆಂಬರ್ 12ರಂದು ಬಾಬು ಪೆಟ್ರೋಲ್ ಬಂಕ್ ಮಾಲೀಕ ಸಟ್ಟಿ ವೆಂಕಟ್ ರೆಡ್ಡಿ ಎಂಬವರ ಮನೆಗೆ ಮುಂಜಾನೆ 4 ಗಂಟೆ ಸುಮಾರಿಗೆ ನುಗ್ಗಿದ್ದ. ಒಂದು ಹಂತದವರೆಗೆ ಈತ ಅಂದುಕೊಂಡಂತೆ ಎಲ್ಲಾ ನಡೆಯುತ್ತಿತ್ತು. ಆದರೆ, ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು.

Also Read : ಪೈರು ನಾಟಿಗೆ ಅದೆಂಥಾ ಐಡಿಯಾ : ಅನ್ನದಾತನ ಉಪಾಯಕ್ಕೆ ನೆಟ್ಟಿಗರು ಫಿದಾ

ಕಳ್ಳ ಬಾಬು ಮನೆ ಮಾಲಿಕ ಸಟ್ಟಿ ವೆಂಕಟ್ ರೆಡ್ಡಿ ಅವರ ಹವಾನಿಯಂತ್ರಿತ ಕೋಣೆಯೊಳಗೆ ಬರುವ ತನಕ ಎಲ್ಲವೂ ಸರಿಯಾಗಿ ಇತ್ತು. ಆದರೆ, ಯಾವಾಗ ಎಸಿ ಕೋಣೆಗೆ ಬಂದನೋ ತಂಗಾಳಿಗೆ ಹಾಗೆಯೇ ನಿದ್ದೆಗೆ ಜಾರಿದ್ದ...!

ಮನೆ ಮಾಲಿಕರ ಬೆಡ್ ಕೆಳಗೆ ಕಿರುನಿದ್ದೆ ಮಾಡಿ ಸಟ್ಟಿ ವೆಂಕಟ್ ರೆಡ್ಡಿ ಏಳುವ ಮೊದಲೇ ಮನೆಯಿಂದ ಹೊರಗೆ ಹೋಗಬೇಕೆಂದು ಬಾಬು ಪ್ಲಾನ್ ಮಾಡಿದ್ದ. ಆದರೆ, ಎಸಿಯ ತಂಗಾಳಿಗೆ ಈತ ಗಾಢ ನಿದ್ದೆಗೆ ಜಾರಿದ್ದನಂತೆ. ಈತ ಅದೆಷ್ಟು ಗಾಢ ನಿದ್ದೆಗೆ ಜಾರಿದ್ದ ಎಂದರೆ ಜೋರಾಗಿ ಗೊರಕೆ ಕೂಡಾ ಹೊಡೆಯುತ್ತಿದ್ದ. ಇದನ್ನು ಕೇಳಿ ಮಾಲಿಕ ವೆಂಕಟ್ ರೆಡ್ಡಿ ಎಚ್ಚರಗೊಂಡು ನೋಡಿದಾಗ ಕಳ್ಳ ನಿದ್ದೆ ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ, ಈತನನ್ನು ಕೋಣೆಯೊಳಗೆ ಕೂಡಿ ಹಾಕಿ ಇವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಬೆಳಗ್ಗೆ ಸುಮಾರು 7.30ಕ್ಕೆ ಮನೆಗೆ ಬಂದ ಪೊಲೀಸರು ಕಳ್ಳನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

Also Read : ಮಾಲಿಕರನ್ನು ಕಂಡ ತಕ್ಷಣ ಬಿಗಿದಪ್ಪಿ ಮುದ್ದಿಸಿದ ಶ್ವಾನ...! : ಇದು ಅದ್ಭುತ ದೃಶ್ಯ

`ತಾನು ದಣಿದಿದ್ದೆ, ಹೀಗಾಗಿ, ಎಸಿ ತಂಗಾಳಿ ನಿದ್ದೆಯನ್ನು ತಡೆಯಲು ನನಗೆ ಸಾಧ್ಯವಾಗಿಲ್ಲ' ಎಂದು ಬಾಬು ಪೊಲೀಸರ ಮುಂದೆ ಹೇಳಿದ್ದಾಗಿ ಗೋಕವರಂ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅರ್ಜುನ್ ಮಾಧ್ಯಮಗಳಿಗೆ ಹೇಳಿದ್ದಾರೆ. ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಬು ಸಾಕಷ್ಟು ಸಾಲ ಮಾಡಿದ್ದ. ಹೀಗಾಗಿ, ತನ್ನ ಆರ್ಥಿಕ ಸಂಕಷ್ಟದಿಂದ ಪಾರಾಗುವ ಸಲುವಾಗಿ ಈತ ದರೋಡೆಗೆ ಸ್ಕೆಚ್ ಹಾಕಿದ್ದ. ಬಾಬು ವೃತ್ತಿಪರ ಕಳ್ಳನಲ್ಲ. ಈ ಹಿಂದೆ ಈತ ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಸದ್ಯ ಕಳ್ಳತನಕ್ಕೆ ಯತ್ನ ನಡೆಸಿದ ಆರೋಪದಲ್ಲಿ ಈತನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ