ಆ್ಯಪ್ನಗರ

ಆನೆಗಳೊಂದಿಗೆ ಯಾವತ್ತೂ ಹೀಗೆ ವರ್ತಿಸಬೇಡಿ : ತಿರುಗಿ ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ!

ಈ ವಿಡಿಯೋ ನೋಡುವಾಗ ಕೆಲವರಿಗೆ `ವ್ಹಾವ್... ಅದೇನು ಸಾಹಸ' ಎಂದೆನಿಸಬಹುದು. ಆದರೆ, ಹೀಗೆ ಮಾಡುವುದು ಬಹಳ ಅಪಾಯ ಅಂತಿದ್ದಾರೆ ಪರಿಣತರು.

Vijaya Karnataka Web 29 Oct 2020, 10:38 am
ಪ್ರಾಣಿಗಳನ್ನು ಕೆಣಕುವುದು ಬಹಳ ಅಪಾಯಕಾರಿ... ಯಾಕೆಂದರೆ, ಅವುಗಳು ತಿರುಗಿ ಬಿದ್ದರೆ ಅದನ್ನು ತಡೆದುಕೊಳ್ಳುವ ಶಕ್ತಿ ಬಹುತೇಕ ಸಂದರ್ಭದಲ್ಲಿ ನಮಗಿರುವುದಿಲ್ಲ. ತಾಳ್ಮೆಗೂ ಒಂದು ಮಿತಿ ಎಂಬುದು ಇರುತ್ತದೆ. ತಾಳ್ಮೆ ಮೀರಿದರೆ ಸಾಧು ಪ್ರಾಣಿಗಳೂ ಆಕ್ರಮಣಕಾರಿಯಾಗುವ ಸಾಧ್ಯತೆಗಳಿರುತ್ತವೆ. ಒಂದೊಮ್ಮೆ ಪ್ರಾಣಿಗಳು ಆಕ್ರಮಣಕಾರಿಯಾದರೆ ಬಹಳ ಅಪಾಯಕಾರಿ. ಕೆಲವು ಪ್ರಾಣಿಗಳನ್ನು ಹೊರತುಪಡಿಸಿ ಬಹುತೇಕ ಸಂದರ್ಭದಲ್ಲಿ ಪ್ರಾಣಿಗಳಿಗೆ ನಾವು ತೊಂದರೆ ಕೊಡದೇ ಇದ್ದರೆ ಅವುಗಳು ಕೂಡಾ ಸುಮ್ಮನಿರುತ್ತವೆ ಎಂಬುದು ಸತ್ಯ. ತಮಗೆ ಅಪಾಯ ಎದುರಾಗುತ್ತದೆ ಎಂದು ಅವುಗಳಿಗೆ ಆತಂಕ ಶುರುವಾದರೆ ಖಂಡಿತಾ ಎಲ್ಲಾ ಪ್ರಾಣಿಗಳು ದಾಳಿ ಮಾಡುತ್ತವೆ. ಹೀಗಾಗಿ, ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು, ಹೇಗೆ ವರ್ತಿಸಬಾರದು ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ.
Vijaya Karnataka Web Image by arun cv from Pixabay
| Representative image | Image by arun cv from Pixabay


ಸುಮ್ಮನಿದ್ದ ಪ್ರಾಣಿಗಳನ್ನು ಕೆಣಕಿ ಅಪಾಯಕ್ಕೆ ಗುರಿಯಾಗಿದ್ದ ಒಂದಷ್ಟು ಜನರ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಈ ಎಲ್ಲಾ ದೃಶ್ಯಗಳು ಭಯ ಹುಟ್ಟಿಸುವಂತಿರುತ್ತದೆ. ಇದು ಗೊತ್ತಿದ್ದರೂ ಕೆಲವೊಂದು ಸಲ ಜನ ಪ್ರಾಣಿಗಳೊಂದಿಗೆ `ಕುಚೇಷ್ಟೆ' ಮಾಡುತ್ತಾರೆ. ಅದು ಸರಿಯಲ್ಲ ಎಂಬುದು ತಜ್ಞರ ಅಭಿಮತ.

ಸದ್ಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆನೆಯ ಎದುರು ಹೋಗಿ ಬೆದರಿಸುವ ಇಬ್ಬರು ಯುವಕರ ವಿಡಿಯೋವಿದು. ಈ ದೃಶ್ಯ ನೋಡಿ ಒಂದಷ್ಟು ಜನ `ಅದ್ಭುತ ಸಾಹಸ' ಎಂದಂದುಕೊಂಡಿರಬಹುದು. ಆದರೆ, ಆನೆಗಳೊಂದಿಗೆ ಯಾವತ್ತೂ ಈ ರೀತಿ ವರ್ತಿಸಬೇಡಿ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಆನೆಗಳು ಬಹುತೇಕ ಸಂದರ್ಭದಲ್ಲಿ ಶಾಂತವಾಗಿರುತ್ತವೆ. ಆದರೆ, ಒಂದೊಮ್ಮೆ ಅವುಗಳು ಆಕ್ರಮಣಕಾರಿಯಾದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದು ಇವರ ಕಿವಿಮಾತು.

Also Read : Fitness Inspiration : 82ರ ವೃದ್ಧೆಯ ಉತ್ಸಾಹ : ಮೊಮ್ಮಕ್ಕಳೊಂದಿಗೆ ಅಜ್ಜಿಯ ಭರ್ಜರಿ ವರ್ಕೌಟ್

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. `ಈ ಎಲ್ಲಾ ಶ್ರೇಯಸ್ಸು ಆನೆಗೆ ಸಲ್ಲಬೇಕು. ಅದರ ಶಕ್ತಿಯನ್ನು ಕಲ್ಪಿಸಿಕೊಳ್ಳಿ. ಅದು ತುಂಬಾ ಶಾಂತವಾಗಿದೆ. ಮೊದಲು ನೀವು ಅವುಗಳಿಗೆ ಕಿರುಕುಳ ನೀಡುತ್ತೀರಿ. ಪ್ರತಿದಾಳಿ ನಡೆಸಿದರೆ ಅವುಗಳನ್ನೇ ದೂಷಿಸುತ್ತೀರಿ. ಈ ಸಾಹಸ ಕ್ಷಣಮಾತ್ರದಲ್ಲಿ ಜೀವವನ್ನು ಕಸಿದುಕೊಳ್ಳಬಹುದು. ವನ್ಯಜೀವಿಗಳೊಂದಿಗೆ ಯಾವತ್ತೂ ಹೀಗೆ ವರ್ತಿಸಬೇಡಿ' ಎಂದು ಕಸ್ವಾನ್ ಬರೆದುಕೊಂಡಿದ್ದಾರೆ.


Also Read : ಪ್ರವಾಹವನ್ನು ದಾಟಿ ಬಂದು ನವಜೀವನಕ್ಕೆ ಕಾಲಿಟ್ಟ ಜೋಡಿ : ದಿಬ್ಬಣದ ಫೋಟೋ ವೈರಲ್

ಮತ್ತೋರ್ವ ಐಎಫ್‌ಎಸ್ ಅಧಿಕಾರಿ ವೈಭವ್ ಸಿಂಗ್ ಕೂಡಾ ಇದೇ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಕೂಡಾ, `ಆನೆಗಳೊಂದಿಗೆ ಯಾವತ್ತೂ ಹೀಗೆ ಮಾಡಬೇಡಿ. ಈ ಗಜ ನಿಜವಾದ ಸಂಭಾವಿತ ಪ್ರಾಣಿ. ಇಲ್ಲದಿದ್ದರೆ ಇವರಿಗೆ ಅಪಾಯ ಎದುರಾಗುತ್ತಿತ್ತು' ಎಂದು ಹೇಳಿಕೊಂಡಿದ್ದಾರೆ.


Also Read : ದೋಣಿಗೆ ಹೆದರಿ ನದಿಯ `ನೀರಿನ ಮೇಲೆ' ಓಡುತ್ತಿದೆ ಕಡವೆ! : ಅಚ್ಚರಿಯ ವಿಡಿಯೋ ವೈರಲ್

ನಿಜಕ್ಕೂ ಇದು ಯೋಚಿಸಬೇಕಾದ ವಿಷಯವೇ. ಪ್ರಾಣಿಗಳಿಗೆ ತೊಂದರೆ ಕೊಡುವುದು ಸರ್ವತಾ ಒಪ್ಪುವಂತಹದಲ್ಲ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ಸಾಮಾನ್ಯ. ಇಂತಹ ಸಂದರ್ಭದಲ್ಲಿ ತಜ್ಞರನ್ನು ಕರೆಸಿ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಬೇಕೇ ವಿನಃ ಸ್ವತಃ ನಾವೇ ಕಾರ್ಯಾಚರಣೆಗೆ ಇಳಿಯುವುದು ಬಹಳ ಅಪಾಯಕಾರಿ. ಹೀಗೆ ಮಾಡಲು ಹೋಗಿ ಕೆಲವು ಸಂದರ್ಭದಲ್ಲಿ ಜೀವಹಾನಿಯಾದ ಉದಾಹರಣೆಗಳೂ ಇವೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆದಿದೆ. ಎಲ್ಲರೂ `ಪ್ರಾಣಿಗಳಿಗೂ ಈ ಭೂಮಿ ಮೇಲೆ ಬದುಕುವ ಅವಕಾಶಗಳಿವೆ. ಅವುಗಳ ಸ್ವಾತಂತ್ರ್ಯವನ್ನೂ ನಾವು ಗೌರವಿಸಬೇಕಾಗುತ್ತದೆ' ಎಂಬರ್ಥದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ