ಆ್ಯಪ್ನಗರ

ಶತ್ರುಗಳಿಗೂ ಬರದಿರಲಿ ಇಂತಹ ಕಷ್ಟ! : ಮಕ್ಕಳಿಗಾಗಿ 150 ರೂಪಾಯಿಗೆ ತನ್ನ ತಲೆಕೂದಲು ಮಾರಿದ ತಾಯಿ!

ಇದೊಂದು ನೋವಿನ ಕತೆ... ಈ ಕತೆ ಕೇಳಿದರೆ ಹೃದಯ ಭಾರವಾಗುತ್ತದೆ... ಖಂಡಿತಾ ಇಂತಹ ಕಷ್ಟ ಶತ್ರುಗಳಿಗೂ ಬರುವುದು ಬೇಡ...

Vijaya Karnataka Web 11 Jan 2020, 1:19 pm
ಸೇಲಂ : ಅವರದ್ದು ಮೂವರು ಮಕ್ಕಳಿದ್ದ ಕುಟುಂಬ... ಕಷ್ಟದ ನಡುವೆಯೇ ಜೀವನ ಹೇಗೋ ಸಾಗುತ್ತಿತ್ತು. ಆದರೆ, ಏಳು ತಿಂಗಳ ಹಿಂದೆ ಈ ಮನೆಯ ಯಜಮಾನ ಆತ್ಮಹತ್ಯೆಗೆ ಶರಣಾಗಿದ್ದ... ಸುಮಾರು ಎರಡೂವರೆ ಲಕ್ಷದಷ್ಟು ಸಾಲ ಮಾಡಿಕೊಂಡಿದ್ದ ಈತ ಸಾಲ ತೀರಿಸಲಾರದೆ ಸಾವಿನ ಮನೆ ಸೇರಿದ್ದ. ಅಲ್ಲಿಂದ ಶುರುವಾಗಿತ್ತು ವಿಧವೆಯಾದ ತಾಯಿ ಮತ್ತು ಮೂವರು ಮಕ್ಕಳಿಗೆ ಕಷ್ಟ. ಒಪ್ಪೊತ್ತಿನ ಊಟಕ್ಕೂ ಇವರು ಪರದಾಡಬೇಕಾಗಿತ್ತು. ಅವರಿವರಲ್ಲಿ ಕಾಡಿ ಬೇಡಿ ಏಳು ತಿಂಗಳ ಜೀವನ ಸಾಗಿತ್ತು. ಆದರೆ, ಪ್ರತಿದಿನ ಮರುದಿನ ಏನು ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿತ್ತು...
Vijaya Karnataka Web widow mother
ಮಕ್ಕಳೊಂದಿಗೆ ತಾಯಿ ಪ್ರೇಮ | Image Courtesy : Times of India


Also Read : ಅಬ್ಬಾ... ಇದು ಕರುಳುಹಿಂಡುವ ದೃಶ್ಯ...! : ಶ್ವಾನದ ಮಾಲಿಕರೇ ಎಚ್ಚರ...!

ಪರಿಸ್ಥಿತಿ ಹೀಗಿರುವಾಗ ಒಂದು ದಿನ ತಮಿಳುನಾಡಿನ ಪೊನ್ನಂಪೇಟೆಯ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವಿಗ್ ತಯಾರಿಸಲು ತಲೆಕೂದಲು ಖರೀದಿಸುತ್ತೇನೆ ಎಂದು ಹೇಳಿಕೊಂಡಿದ್ದ. ಇದನ್ನು ಕೇಳಿ ಈ ಪ್ರೇಮ ಎಂಬ ಈ ಮಹಿಳೆಯ ಮನಸ್ಸಿನಲ್ಲೊಂದು ಯೋಚನೆ ಹೊಳೆದಿತ್ತು. ಅದು ತನ್ನ ತಲೆಕೂದಲನ್ನು ಮಾರುವುದು...! ಹೀಗೆ ಆ ವ್ಯಕ್ತಿಯನ್ನು ಭೇಟಿಯಾದ ಪ್ರೇಮ ತನ್ನ ತಲೆಕೂದಲನ್ನು 150 ರೂಪಾಯಿಗೆ ಮಾರಿ ಬಂದಿದ್ದರು. ಈ ದುಡ್ಡಿನಲ್ಲಿ 100 ರೂಪಾಯಿಗೆ ಮಕ್ಕಳಿಗೆ ಊಟ ತಂದುಕೊಟ್ಟಿದ್ದರು. ಬಾಕಿ ಉಳಿದಿತ್ತು 50 ರೂಪಾಯಿ. ಈ 50 ರೂಪಾಯಿಯನ್ನು ಅದೊಂದು ಕಾರಣಕ್ಕೆ ವ್ಯಯಿಸಲು ನಿರ್ಧರಿಸಿದ್ದರು ಪ್ರೇಮ... ಇದು ಪ್ರೇಮ ಬಲು ನೋವಿನಿಂದಲೇ ತೆಗೆದುಕೊಂಡಿದ್ದ ನಿರ್ಧಾರ.

Also Read : ಮೂಳೆ ಮಜ್ಜೆ ಕಸಿ ಬಳಿಕ ಬದಲಾಯಿತು ವ್ಯಕ್ತಿಯ ಡಿಎನ್‌ಎ...!

ಬಾಕಿ ಉಳಿದ 50 ರೂಪಾಯಿಯನ್ನು ಹಿಡಿದುಕೊಂಡು ಪ್ರೇಮ ಹೋಗಿದ್ದು, ಕೀಟನಾಶಕ ಮಾರುವ ಮಳಿಗೆಗೆ...! ಹೌದು, ಪ್ರೇಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು...! ಆದರೆ, ಅಂದು ಈ ಅಂಗಡಿಯಾತನಿಗೆ ಸ್ವಲ್ಪ ಅನುಮಾನ ಬಂದಿತ್ತು. ಹೀಗಾಗಿ, ಆತ ಕ್ರಿಮಿನಾಶಕ ನೀಡಿರಲಿಲ್ಲ. ಇತ್ತ, ವಿಷ ಸಿಗದೆ ಮನೆಗೆ ಬಂದ ಪ್ರೇಮ ವಿಷದ ಕಾಯಿ ತಿಂದು ಸಾಯಲು ಪ್ರಯತ್ನಪಟ್ಟಿದ್ದರು. ಅದೃಷ್ಟವಶಾತ್ ಇದೇ ವೇಳೆ ಇವರ ಸಹೋದರಿ ಇಲ್ಲಿಗೆ ಬಂದಿದ್ದರಿಂದ ಇವರನ್ನು ಸಾಯುವುದರಿಂದ ತಪ್ಪಿಸಿದ್ದರು...

Also Read : ಡಿಫ್ರೆಂಟ್ ಸ್ಟೈಲ್‌ನಲ್ಲಿ ಎಟಿಎಂ ದರೋಡೆಗೆ ಬಂದು ಬರಿಗೈಯಲ್ಲಿ ಮರಳಿದರು...! : ಇಲ್ಲಿದೆ ವಿಡಿಯೋ

ಈ ಇಡೀ ಘಟನೆಯನ್ನು ಗ್ರಾಫಿಕ್ ಡಿಸೈನರ್ ಜಿ ಬಾಲ ಎಂಬವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಅಲ್ಲದೆ, ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಕತೆಯನ್ನು ಕೇಳಿ ಎಲ್ಲರೂ ನೊಂದಿದ್ದರು. ಜೊತೆಗೆ, ಪ್ರೇಮ ಅವರ ಕಷ್ಟಕ್ಕೆ ನೆಟ್ಟಿಗರು ಅಕ್ಷರಶಃ ಕಣ್ಣೀರಿಟ್ಟಿದ್ದರು. ಅಷ್ಟೇ ಅಲ್ಲ, ಹಣ ಸಹಾಯಕ್ಕೂ ಮುಂದಾಗಿದ್ದರು. ಜಿ ಬಾಲ ಸೇರಿ ಎಲ್ಲರೂ ಒಟ್ಟು ಒಂದೂವರೆ ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಪ್ರೇಮ ಅವರಿಗೆ ಕೊಟ್ಟಿದ್ದಾರೆ. ಇದಲ್ಲದೆ, ಒಬ್ಬರು ತಮಗೆ ಗೊತ್ತಿರುವವರ ಇಟ್ಟಿಗೆ ಕಾರ್ಖಾನೆಯಲ್ಲಿ ಪ್ರೇಮ ಅವರಿಗೆ ಕೆಲಸ ತೆಗೆಸಿಕೊಟ್ಟಿದ್ದಾರೆ. ಬರೀ ಇಷ್ಟೇ ಅಲ್ಲ ಸೇಲಂ ಜಿಲ್ಲಾಡಳಿತವೂ ಇವರ ಕಷ್ಟಕ್ಕೆ ಸ್ಪಂದಿಸಿದ್ದು, ಇಪ್ಪತ್ತೈದು ಸಾವಿರ ಹಣ ಮತ್ತು ರೇಷನ್ ಕಾರ್ಡನ್ನು ಮಂಜೂರು ಮಾಡಿದೆ.

ಎಲ್ಲರ ಈ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿರುವ ಪ್ರೇಮ ಇನ್ನೆಂದೂ ಸಾಯುವ ನಿರ್ಧಾರ ಮಾಡುವುದಿಲ್ಲ ಎಂದಿದ್ದಾರೆ. ಜೊತೆಗೆ, ತನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಕನಸು ಕಾಣುತ್ತಿದ್ದಾರೆ. ಸದ್ಯ ಪ್ರೇಮ ಅವರ ಜೀವನಕ್ಕೊಂದು ಭದ್ರತೆ ಸಿಕ್ಕಿದೆ. ಎರಡು ಬಾರಿ ಸಾಯಲು ಯತ್ನಿಸಿ ಬದುಕಿದವರು ಇನ್ನು ಮುಂದಾದರೂ ಬದುಕಿನ ಖುಷಿ ಅನುಭವಿಸಲಿ ಎಂಬ ಹಾರೈಕೆ ಎಲ್ಲರದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ