ಆ್ಯಪ್ನಗರ

ಗೆಳೆಯನ 2 ಕೋಟಿ ರೂ ಮೌಲ್ಯದ ಲ್ಯಾಂಬೋರ್ಗಿನಿ ತಂದು ಗೋಡೆಗೆ ಗುದ್ದಿದ ಭೂಪ!

ಒಂದು ನಿರ್ಲಕ್ಷ್ಯ ಇಲ್ಲಿ ಇಬ್ಬರ ಬದುಕಿನ ಖುಷಿಯನ್ನೇ ನುಂಗಿದೆ. ಸ್ನೇಹಿತನ ಕಾರನ್ನು ತಂದು ಒಬ್ಬ ಗೋಡೆಗೆ ಗುದ್ದಿದರೆ, ಕಾರು ಕೊಟ್ಟ ತಪ್ಪಿಗೆ ಇನ್ನೊಬ್ಬ ಪರಿತಪಿಸುತ್ತಿದ್ದಾನೆ.

Vijaya Karnataka Web 13 Aug 2020, 10:47 am
ಕೆಲವೊಮ್ಮೆ ಎಷ್ಟೇ ಸ್ನೇಹಿತರಾಗಿದ್ದರೂ ಕೆಲವರು ಅಷ್ಟು ಸುಲಭವಾಗಿ ತಮ್ಮ ದುಬಾರಿ ವಾಹನಗಳನ್ನು ಮತ್ತೊಬ್ಬರಿಗೆ ನೀಡುವುದೇ ಇಲ್ಲ. ಹೀಗೆ ಸ್ನೇಹಿತನ ಬಳಿ ವಾಹನ ಕೇಳಿದಾಗ ಆತ ತಕ್ಷಣ ಕೊಡದೇ ಇದ್ದಾಗ ಖಂಡಿತಾ ಬೇಜಾರಾಗಬಹುದು. ಆದರೆ, ವಾಹನ ಕೊಡದ ಸ್ನೇಹಿತನ ಸ್ಥಾನದಲ್ಲಿ ನಿಂತು ನೋಡಿದಾಗ ಆತ ಮಾಡಿದ್ದು ಖಂಡಿತಾ ಸರಿ ಎಂದೆನಿಸುತ್ತದೆ. ಯಾಕೆಂದರೆ, ವಾಹನಕ್ಕೆ ಯಾವುದೇ ತೊಂದರೆಯಾಗಬಾರದು ಅಥವಾ ತನ್ನ ವಾಹನದಿಂದ ಕೊಂಡೊಯ್ದ ಸ್ನೇಹಿತನಿಗೆ ತೊಂದರೆಯಾಗಬಾರದು ಎಂಬ ಬಲವಾದ ಕಾರಣ ಆತನಿಗಿರುತ್ತದೆ. ಹಾಗಂತ, ಎಲ್ಲರೂ ಇದೇ ರೀತಿ ಯೋಚಿಸುತ್ತಾರೆ ಎಂದಲ್ಲ. ಕೆಲವರು ಸ್ನೇಹದ ನಂಬಿಕೆಯಲ್ಲಿ ಎಷ್ಟೇ ದುಬಾರಿಯಾದರೂ ವಾಹನ ಕೊಡುವುದು ಕೂಡಾ ಇದೆ. ಹೀಗೆ ಸ್ನೇಹಿತರಿಂದ ವಾಹನ ಕೊಂಡೊಯ್ದವರು ಜಾಗರೂಕತೆಯಿಂದ ಅದನ್ನು ಮರಳಿಸಿದ್ದೂ ಇದೆ. ಆದರೆ, ಒಂದಷ್ಟು ಸಂದರ್ಭದಲ್ಲಿ ಹೀಗೆ ಸ್ನೇಹದ ನೆಪದಲ್ಲಿ ವಾಹನವನ್ನು ಕೊಟ್ಟಾಗ ಕೆಲವೊಮ್ಮೆ ಅನಾಹುತ ಸಂಭವಿಸಿದ್ದ ಉದಾಹರಣೆಗಳು ಹಲವಿವೆ. ಈಗ ಕೂಡಾ ಆಗಿದ್ದು ಅದೇ...! ಇಲ್ಲೊಬ್ಬ ಸ್ನೇಹಿತ ತನ್ನ ಆಪ್ತನ ದುಬಾರಿ ಬೆಲೆಯ ಕಾರನ್ನು ಕೊಂಡೊಯ್ದು ಅವಾಂತರ ಮಾಡಿಕೊಂಡಿದ್ದಾನೆ.
Vijaya Karnataka Web Image  by  Toby Parsons from Pixabay
| Representative image | Image by Toby Parsons from Pixabay


Also Read : 114 ದಿನ ದೂರ ದೂರ, ಪತಿಯ ಆರೈಕೆಗೆ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದ ಪತ್ನಿ! : ಇದು ಅಪೂರ್ವ ಪ್ರೀತಿಯ ಕತೆ

ಇದು ಸ್ಪೇನ್‌ನ ಹುಯೆಲ್ವಾ ಎಂಬಲ್ಲಿ ನಡೆದಿರುವ ಘಟನೆ. ಇಲ್ಲೊಬ್ಬ ಯುವಕ ತನ್ನ ಸ್ನೇಹಿತನ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಪಡೆದು ಡ್ರೈವ್ ಮಾಡುತ್ತಿದ್ದ. ಸುಮಾರು ಎರಡು ಕೋಟಿ ಮೌಲ್ಯದ ಕಾರದು. ಅಗತ್ಯ ಬೇಕಿತ್ತು ಎಂದು ಕೇಳಿಕೊಂಡು ಈತ ಈ ಕಾರನ್ನು ಪಡೆದಿದ್ದ. ಹೀಗೆ ತನ್ನ ಆಪ್ತನಿಗೆ ಕಾರನ್ನು ಕೊಟ್ಟ ಪಾಪದ ಆ ಗೆಳೆಯನಿಗೆ ತಾನೊಂದು ಅಪಾಯವನ್ನು ಆಹ್ವಾನಿಸುತ್ತಿದ್ದೇನೆ ಎಂಬ ಸಣ್ಣ ಸುಳಿವು ಕೂಡಾ ಆಗ ಇರಲಿಲ್ಲ. ಯಾಕೆಂದರೆ, ಕಾರು ಸಿಕ್ಕ ಖುಷಿಯಲ್ಲಿ ಆ ಗೆಳೆಯ ಬಲು ವೇಗವಾಗಿ ಕಾರು ಚಲಾಯಿಸಲು ಶುರು ಮಾಡಿದ್ದ. ಶೋಕಿಯೋ, ಖುಷಿಯೋ ಗೊತ್ತಿಲ್ಲ. ಈತನ ವೇಗ ಬಳಿಕ ಆತನಿಗೇ ಮುಳುವಾಗಿದೆ. ವೇಗವಾಗಿ ಸಾಗುತ್ತಿದ್ದ ಈ ಕಾರು ಗೋಡೆಯೊಂದಕ್ಕೆ ಗುದ್ದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Also Read : ಪ್ರಪೋಸ್ ಮಾಡಲು ರೆಡಿಯಾಗಿದಾಗಲೇ ಸಮುದ್ರಕ್ಕೆ ಬಿತ್ತು ನಿಶ್ಚಿತಾರ್ಥದ ಉಂಗುರ! : ಮುಂದೇನಾಯ್ತು ಗೊತ್ತಾ?

ಯುವಕನ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ, ಕಾರು ಸಂಪೂರ್ಣ ನಜ್ಜುಗುಜ್ಜಾದರೂ ಆತ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದ. ಹೀಗಾಗಿ, ಭಯದಿಂದ ಸ್ಥಳದಿಂದ ಕಾಲ್ಕಿತ್ತಿದ್ದ ಈತ ಆಸ್ಪತ್ರೆಯತ್ತ ಓಡಿದ್ದ. ಇಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ. ವೇಗ ಮತ್ತು ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.


Also Read : ವಿದ್ಯುತ್ ಕಂಬವೇರಿ ತಂತಿಗಳನ್ನು ದುರಸ್ತಿ ಮಾಡುವ ಸಾಧಕಿ : ಇದು ಸ್ಫೂರ್ತಿದಾಯಕ ಕತೆ

ಅಪಘಾತ ಸಂಭವಿಸುವುದು ಅನಿರೀಕ್ಷಿತ ಎಂಬುದು ನಿಜ. ಆದರೆ, ಸ್ನೇಹಿತನಿಂದ ತಂದಿದ್ದ ಕಾರು ಎಂಬ ಜವಾಬ್ದಾರಿಯಿಂದ ಈತ ವಾಹನ ಚಲಾಯಿಸಿದ್ದರೆ ಈ ಅಪಘಾತ ಸಂಭವಿಸದೇ ಇರುವ ಸಾಧ್ಯತೆ ಹೆಚ್ಚಿತ್ತು. ಸ್ನೇಹಿತರಿಂದ ಪ್ರೀತಿಯಿಂದ ಪಡೆದ ವಾಹನಗಳು ಅಷ್ಟೇ ಜಾಗರೂಕತೆಯಿಂದ ಮರಳಿಸುವ ಜವಾಬ್ದಾರಿಯುಳ್ಳ ಗೆಳೆಯರ ನಡುವೆ ಇಂತಹ ಕೆಲವರು ಇದ್ದಾರೆ ಎಂಬುದು ಕೂಡಾ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ