ಆ್ಯಪ್ನಗರ

ತಾಳಿದವನು ಬಾಳಿಯಾನು : ಈ ಸಣ್ಣ ವಿಡಿಯೋದಲ್ಲಿದೆ ಬಹುದೊಡ್ಡ ಜೀವನ ಸಂದೇಶ

ಇದು ಸಣ್ಣ ವಿಡಿಯೋ. ಆದರೆ, ಇದರ ಹಿಂದಿರುವ ಸಂದೇಶ ಮಾತ್ರ ಬಲು ದೊಡ್ಡದು. ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯಂತಿದೆ ಈ ವಿಡಿಯೋ.

Vijaya Karnataka Web 27 Oct 2020, 4:12 pm
ಅವಸರವೇ ಅಪಾಯಕ್ಕೆ ಕಾರಣ... ತಾಳಿದವನು ಬಾಳಿಯಾನು... ನಿಧಾನವೇ ಪ್ರಧಾನ... ಇವೆಲ್ಲಾ ಬರೀ ಪದಗಳ ಸಾಲಲ್ಲ... ಜೀವನ ಪಾಠ. ಹಿರಿಯರು ಕಟ್ಟಿಕೊಟ್ಟ ಇಂತಹ ಒಂದೊಂದು ಮಾತೂ ಒಂದೊಂದು ಅನರ್ಘ್ಯ ರತ್ನದಂತೆ. ಬಹುತೇಕ ಎಲ್ಲರಿಗೂ ಮೊಲ ಮತ್ತು ಆಮೆಯ ಸ್ಫರ್ಧೆಯ ಕತೆ ಗೊತ್ತಿದೆ. ಇದು ಬರೀ ಕತೆಯಲ್ಲ, ಜೀವನಕ್ಕೊಂದು ದಾರಿ. ನಿಧಾನವಾಗಿ ಸಾಗುವ ಜೊತೆಗೆ ಎಂತಹ ಸವಾಲನ್ನೂ ಸ್ವೀಕರಿಸುವ ಛಲ ಇರಬೇಕು ಮತ್ತು ಆ ಗುರಿಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನ ನಮ್ಮದಾಗಿರಬೇಕು ಎಂಬುದನ್ನು ಸಾರಿದ ಕತೆ ಇದು.
Vijaya Karnataka Web race
| Screengrab from viral video | Courtesy : Twitter


ಮೊಲ ಮತ್ತು ಆಮೆಯ ಕತೆಯಂತಹ ಸ್ಪರ್ಧೆಯ ದೃಶ್ಯವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿಧಾನವೇ ಪ್ರಧಾನ ಎಂಬುದನ್ನು ಸಾರುವ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.

Also Read : ಅಪ್ಪನ ಫೇಸ್‌ಮಾಸ್ಕ್‌ ಎಳೆದು ಖುಷಿಪಡುವ ಮುದ್ದು ಕಂದ : ಈ ನಗುವಿನಲ್ಲಿದೆ ಅದೇನೋ ಶಕ್ತಿ

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಧಾ ರಾಮನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇದು. ಪುಟ್ಟ ಮಕ್ಕಳ ನಡುವೆ ನಡೆಯುವ ಸ್ಪರ್ಧೆಯೊಂದರ ದೃಶ್ಯವಿದು. ಚಮಚದಲ್ಲಿ ಲಿಂಬೆ ಹಣ್ಣನ್ನು ಇಟ್ಟು ಬಾಯಿಯಲ್ಲಿ ಹಿಡಿದು ಸಮತೋಲನ ಕಾಯ್ದುಕೊಂಡು ನಡೆದುಕೊಂಡು ಹೋಗುವ ಸ್ಪರ್ಧೆಯದು. ಈ ಸ್ಪರ್ಧೆಯಲ್ಲಿ ಚಮಚದಲ್ಲಿದ್ದ ಲಿಂಬೆ ಹಣ್ಣನ್ನು ಬೀಳಿಸದೆ ಯಾರು ಬೇಗ ಗುರಿ ಮುಟ್ಟುತ್ತಾರೋ ಅವರೇ ಗೆದ್ದವರು.

Also Read : ಕೊತ ಕೊತ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುವ ಮಹಿಳೆ! : ವೈರಲ್ ವಿಡಿಯೋ ಕಂಡು ನೆಟ್ಟಿಗರು ಶಾಕ್

ಅಂತೆಯೇ ಈ ದೃಶ್ಯದಲ್ಲಿ ಸಹಜವೆಂಬಂತೆ ಉತ್ಸಾಹಿ ಮಕ್ಕಳು ಬಾಯಿಯಲ್ಲಿ ಹಿಡಿದ ಚಮಚದಲ್ಲಿದ್ದ ಲಿಂಬೆ ಹಣ್ಣನ್ನು ಬ್ಯಾಲೆನ್ಸ್‌ ಮಾಡಿ ವೇಗವಾಗಿ ಸಾಗಿದ್ದರು. ಈ ಅವಸರ ಸಹಜ ಕೂಡಾ. ಆದರೆ, ಒಬ್ಬ ಪುಟ್ಟ ಬಾಲಕ ಮಾತ್ರ ನಿಧಾನವಾಗಿ ಮುಂದೆ ಸಾಗುತ್ತಿದ್ದ. ಬಹುಶಃ ಆರಂಭದಲ್ಲಿ ಎಲ್ಲರೂ ಈತ ಸೋಲಬಹುದು ಎಂದು ಅಂದುಕೊಂಡಿದ್ದಾರೋ ಏನೋ. ಆದರೆ, ಅಂತ್ಯದಲ್ಲಿ ಗೆಲ್ಲುವುದು ಈ ಬಾಲಕನೇ... ಯಾಕೆಂದರೆ, ವೇಗವಾಗಿ ಹೋದ ಮಕ್ಕಳೆಲ್ಲಾ ಅರ್ಧ ದಾರಿಯಲ್ಲಿಯೇ ಚಮಚದಲ್ಲಿದ್ದ ಲಿಂಬೆ ಹಣ್ಣನ್ನು ನೆಲಕ್ಕೆ ಬೀಳಿಸಿದ್ದರು...!


Also Read : ಯುನಿಫಾರ್ಮ್‌ನಲ್ಲಿ ಪೊಲೀಸ್ ಇಲಾಖೆಯ ಮುದ್ದು ಶ್ವಾನ : ನೆಟ್ಟಿಗರಿಂದ ಭಾರೀ ಮೆಚ್ಚುಗೆ

ಈ ಬಾಲಕ ಅದೆಷ್ಟು ಶಾಂತಚಿತ್ತನಾಗಿದ್ದ ಮತ್ತು ತನ್ನ ಗುರಿಯತ್ತ ಅದೆಷ್ಟು ನಿಖರವಾಗಿ ಸಾಗುತ್ತಿದ್ದ ಎಂದರೆ ಈತ ಗೆಲ್ಲುತ್ತಾನೆ ಎಂದು ಗೊತ್ತಾಗದ ತಕ್ಷಣ ಅಲ್ಲಿದ್ದವರು ಹರ್ಷದಿಂದ ಹುರಿದುಂಬಿಸುತ್ತಿದ್ದಾಗಲೂ ಈತ ತನ್ನ ವೇಗವನ್ನು ಹೆಚ್ಚಿಸಲಿಲ್ಲ. ಬದಲಾಗಿ, ನಿಧಾನವಾಗಿ ಸಾಗಿ ಗುರಿ ಮುಟ್ಟಿದ್ದ.

ಬಾಲಕನ ಈ ಶಾಂತತೆ, ನಿಖರ ಲೆಕ್ಕಾಚಾರ ಎಲ್ಲರಿಗೂ ಇಷ್ಟವಾಗಿದೆ. ತಾನು ಗೆಲ್ಲಬೇಕು ಎಂಬ ಉತ್ಕಟ ಬಯಕೆ ಇದ್ದರೂ ಈತ ಅವಸರ ಮಾಡಲಿಲ್ಲ. ಯೋಚಿಸದೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಬಾಲಕನ ನಡೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ