ಆ್ಯಪ್ನಗರ

ಗದ್ದೆಯಲ್ಲಿ ಕೊನೆಗೂ ಸಿಕ್ಕಿತು 20 ವರ್ಷದ ಹಿಂದೆ ಕಳೆದು ಹೋಗಿದ್ದ ಚಿನ್ನದ ಕಿವಿಯೋಲೆ...!

ವೃದ್ಧೆಯೊಬ್ಬರು 20 ವರ್ಷದ ಹಿಂದೆ ಕಳೆದುಕೊಂಡಿದ್ದ ಚಿನ್ನದ ಕಿವಿಯೋಲೆಯನ್ನು ಮರಳಿ ಪಡೆದಿದ್ದಾರೆ. ಮಣ್ಣಿನಡಿ ಸೇರಿದ್ದ ಈ ಆಭರಣ ಉದ್ಯೋಗ ಖಾತರಿ ಕೆಲಸದ ಅವಧಿಯಲ್ಲಿ ಸಿಕ್ಕಿದೆ...!

Vijaya Karnataka Web 21 Aug 2020, 9:26 am
ಇದು ನಿಜಕ್ಕೂ ಖುಷಿಯ ಸನ್ನಿವೇಶ. ಕಳೆದು ಹೋಗಿದ್ದ ಬಂಗಾರ 20 ವರ್ಷಗಳ ಬಳಿಕ ಸಿಗುತ್ತದೆ ಎಂದರೆ ಖಂಡಿತಾ ಆ ಖುಷಿಯನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಸದ್ಯ ವೃದ್ಧೆಯೊಬ್ಬರು ಇಂತಹ ಸಡಗರದಲ್ಲಿದ್ದಾರೆ. ಮನೆಯ ಎದುರಿನ ಗದ್ದೆಯಲ್ಲಿ 2000ನೇ ಇಸವಿಯಲ್ಲಿ ಇವರು ಕಳೆದುಕೊಂಡಿದ್ದ ಬಂಗಾರದ ಕಿವಿಯೋಲೆ ಕೊನೆಗೂ ಇವರ ಕೈಸೇರಿದೆ...
Vijaya Karnataka Web Image by Mian Shahzad Raza from Pixabay
| Representative image | Image by Mian Shahzad Raza from Pixabay


Also Read : ಅಪೂರ್ವ ಪ್ರೀತಿ : 71 ವರ್ಷದ ಮನದನ್ನೆಯೊಂದಿಗೆ ಪ್ರೀತಿಯ ಪ್ರಸ್ತಾಪವಿಟ್ಟ 76 ವರ್ಷದ ಪ್ರಿಯತಮ

ಈ ಘಟನೆ ನಡೆದಿರುವುದು ಕರ್ನಾಟಕದ ಗಡಿ, ಕೇರಳದ ಕಾಸರಗೋಡು ಜಿಲ್ಲೆಯ ಬೇಡಡ್ಕಾ ಪಂಚಾಯತ್‌ ವ್ಯಾಪ್ತಿಯ ಎಡಂಪೂರಡಿಯಲ್ಲಿ. ನಾರಾಯಣಿ ಎಂಬ ಮಹಿಳೆ 20 ವರ್ಷಗಳ ಹಿಂದೆ ತನ್ನ ಮನೆಯ ಹೊರಗಿನ ಭತ್ತದ ಗದ್ದೆಯಲ್ಲಿ ತನ್ನ ಈ ಕಿವಿಯೋಲೆಯನ್ನು ಕಳೆದುಕೊಂಡಿದ್ದರು. ಆಗ ಇವರು ತನ್ನ ಆಭರಣಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ತಾನು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಖರೀದಿಸಿದ್ದ ಈ ಕಿವಿಯೋಲೆ ಅಂದು ಎಷ್ಟು ಹುಡುಕಿದರೂ ಸಿಗಲೇ ಇಲ್ಲ.

Also Read : ಇಲ್ಲಿನ ಎರಡು ಪಾರ್ಕ್‌ಗಳಲ್ಲಿ ನಿರ್ಮಾಣವಾಗಿವೆ ಪಾರದರ್ಶಕ ಸಾರ್ವಜನಿಕ ಶೌಚಾಲಯ...!

ಆದರೆ, ಇತ್ತೀಚೆಗೆ ಅಂದರೆ ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಇದೇ ಹೊಲದಲ್ಲಿ ಕೇರಳದ ಸುಭಿಕ್ಷಾ ಯೋಜನೆಯ ಭಾಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯಡಿ ಕೆಲಸ ಮಾಡುತ್ತಿರುವಾಗ ಮಹಿಳೆಯೊಬ್ಬರು ಈ ಕಿವಿಯೋಲೆಯನ್ನು ಪತ್ತೆ ಮಾಡಿದ್ದರು. ಗದ್ದೆ ಉಳುಮೆ ಮಾಡುತ್ತಿದ್ದಾಗ ಮಹಿಳೆಗೆ ಈ ಕಿವಿಯೋಲೆ ಸಿಕ್ಕಿತ್ತು. ಮಣ್ಣಿನಲ್ಲಿ ಮುಚ್ಚಿದ್ದ ಈ ಕಿವಿಯೋಲೆಯ ಮಣ್ಣನ್ನು ಸ್ವಲ್ಪ ತೆಗೆದು ನೋಡಿದಾಗ ಇದು ಚಿನ್ನದ ಆಭರಣ ಎಂಬುದು ಗೊತ್ತಾಗಿತ್ತು. ಈ ಮಹಿಳೆಯ ಜೊತೆ ನಾರಾಯಣಿ ಅವರ ಪುತ್ರಿ ಮಾಲಿನಿ ಕೂಡಾ ಕೆಲಸ ಮಾಡುತ್ತಿದ್ದರು. ಈ ಕಿವಿಯೋಲೆ ಕಂಡ ಮಾಲಿನಿ ಇದು ತನ್ನ ತಾಯಿಯ ಆಭರಣ ಎಂದು ಗುರುತಿಸಿದ್ದರು. ನೆರೆಮನೆಯವರೂ ಇದು ನಾರಾಯಣಿಯವರ ಆಭರಣವೇ ಎಂದು ದೃಢಪಡಿಸಿದ್ದರು. ಯಾಕೆಂದರೆ, ಈ ಕಿವಿಯೋಲೆ ಕಳೆದು ಹೋಗಿದ್ದ ಸಂದರ್ಭದಲ್ಲಿ ವಾರಗಳ ಕಾಲ ಈ ಗದ್ದೆಯಲ್ಲಿ ನೆರೆಮನೆಯವರೂ ಹುಡುಕಾಟ ನಡೆಸಿದ್ದರು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಪದ್ಮವತಿ ತಿಳಿಸಿದ್ದಾರೆ.

Also Read : ಸಾಕ್ಷಾತ್ ಶ್ರೀಕೃಷ್ಣನೇ ಕಣ್ಣೆದುರು ಇರುವಂತೆ ಕಾಣುವ ಚಿತ್ರ : ಕರಣ್ ಆಚಾರ್ಯರ ಮತ್ತೊಂದು ಕಲಾಕೃತಿ ವೈರಲ್

ಇದು ಈಗಿನ ಆಭರಣವಲ್ಲ. ನಾರಾಯಣಿ ಅವರು ಸುಮಾರು 60-70 ವರ್ಷಗಳ ಹಿಂದೆ ಸುಮಾರು 24 ಕೆಜಿ ಅಕ್ಕಿಗೆ ಈ ಕಿವಿಯೋಲೆ ಖರೀದಿಸಿದ್ದರಂತೆ. ಆದರೆ, 2000ನೇ ಇಸವಿಯಲ್ಲಿ ಈ ಕಿವಿಯೋಲೆಯನ್ನು ಕಳೆದುಕೊಂಡು ಇವರು ನೊಂದಿದ್ದರು. ಇದೀಗ ಈ ಆಭರಣವನ್ನು ಚೆನ್ನಾಗಿ ತೊಳೆದು ಕಾರ್ಮಿಕರು ಮತ್ತೆ ನಾರಾಯಣಿ ಅವರಿಗೇ ಒಪ್ಪಿಸಿದ್ದಾರೆ. ತಮ್ಮ ಅಮೂಲ್ಯ ಆಭರಣವನ್ನು ಕಂಡು ನಾರಾಯಣಿ ಅವರ ಖುಷಿಗೂ ಪಾರವೇ ಇರಲಿಲ್ಲ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ