ಆ್ಯಪ್ನಗರ

ಕೊರೊನಾ ವಾರಿಯರ್‌ಗಳ `ನಗುಮುಖ'ದ ಸೇವೆ : ಹೃದಯ ವೈಶಾಲ್ಯತೆಗೆ ಸೆಲ್ಯೂಟ್

ಕೋವಿಡ್ 19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ `ನಗುಮುಖ'ದ ಸೇವೆ ಮೂಲಕವೇ ಗಮನ ಸೆಳೆದಿದ್ದಾರೆ. ಇವರ ಈ ಹೃದಯವೈಶಾಲ್ಯತೆಗೆ ಎಲ್ಲರೂ ಸೆಲ್ಯೂಟ್ ಎಂದಿದ್ದಾರೆ.

Vijaya Karnataka Web 15 Jun 2020, 8:33 pm
ರಕ್ಕಸ ಕೊರೊನಾ ವೈರಸ್‌ ಈ ಜಗತ್ತಿನ ನೆಮ್ಮದಿಯನ್ನೇ ನುಂಗಿ ಹಾಕಿದೆ. ಯಾವಾಗ ಏನಾಗುತ್ತದೋ ಎಂಬ ಭಯದಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಆದರೆ, ಈ ದುರಿತದ ಸಂದರ್ಭದಲ್ಲೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಹಲವಾರು ಕೊರೊನಾ ವಾರಿಯರ್‌ಗಳು ರಾತ್ರಿ ಹಗಲೆನ್ನದೆ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದಾರೆ. ಈ ಮೂಲಕ ಜನರ ಪಾಲಿಗೆ ಇವರೇ ಆಶಾಕಿರಣವಾಗಿದ್ದಾರೆ.
Vijaya Karnataka Web Healthcare Workers
| Image Credit : Devansh Yadav/Twitter


Also Read : ಕಂದನಿಗಾಗಿ ಓಡೋಡಿ ಬರುವ ತಾಯಿ ಕರಡಿ : ಮನಸ್ಸಿಗೆ ಹಿತ ನೀಡುತ್ತದೆ ಈ ವಿಡಿಯೋ

ತಮ್ಮ ವೈಯಕ್ತಿಕ ಜೀವನ, ರಜೆ ಎಲ್ಲವನ್ನೂ ಮರೆತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇವರೆಲ್ಲಾ ನಗುನಗುತ್ತಾ, ರೋಗಿಗಳಿಗೆ ಧೈರ್ಯ ತುಂಬುತ್ತಲೇ ಸೇವೆಯೊದಗಿಸುತ್ತಿದ್ದರೂ ಸುರಕ್ಷತಾ ದಿರಿಸಿನ ಕಾರಣದಿಂದ ಯಾವಾಗಲೂ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯ ಮುಖ ನೋಡುವ ಅವಕಾಶ ರೋಗಿಗಳಿಗೆ ಇರುವುದಿಲ್ಲ. ಹೀಗಾಗಿ, ಇಲ್ಲೊಂದು ವೈದ್ಯರ ತಂಡ ತಮ್ಮ ಫೋಟೋವನ್ನು ಎದೆಗಂಟಿಸಿಕೊಂಡು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರ ಈ ಪ್ರಯತ್ನ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Also Read : ಬ್ರಿಟಿಷರ ಕಾಲದ ಈ ಪ್ರಖ್ಯಾತ ಥಿಯೇಟರ್‌ ಬಗ್ಗೆ ಜನರಿಗೆ ಈಗಲೂ ಇದೆ 'ಭಯ'!

ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ವೈದ್ಯರು ತಮ್ಮ ಪಿಪಿಇ ಸೂಟ್‌ಗಳಲ್ಲಿ ತಮ್ಮ ಫೋಟೋಗಳನ್ನು ಅಂಟಿಸುವ ಮೂಲಕ ಇನ್ನಷ್ಟು ಖುಷಿಯ ಸೇವೆಯೊದಗಿಸುತ್ತಿದ್ದಾರೆ. ವೈದ್ಯರು ಹೀಗೆ ಮಾಡುತ್ತಿರುವುದರಿಂದ ಕೊರೊನಾ ಸೋಂಕಿತರಿಗೆ ತಮಗಾಗಿ ಕರ್ತವ್ಯ ನಿರ್ವಹಿಸುವ ವೈದ್ಯರು ಯಾರು ಎಂದು ಗೊತ್ತಾಗುವುದರೊಂದಿಗೆ ಇವರ ನಗುಮುಖದ ಸೇವೆ ಮನಸ್ಸಿಗೆ ಇನ್ನಷ್ಟು ಸಮಾಧಾನ ಮತ್ತು ಧೈರ್ಯ ತರುವಂತಿದೆ. ಸದ್ಯ ಟ್ವಿಟ್ಟರ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ವೈದ್ಯರ ಈ ಫೋಟೋಗಳು ವೈರಲ್ ಆಗುತ್ತಿವೆ. ಚಾಂಗ್ಲಾಂಗ್‌ನ ಜಿಲ್ಲಾಧಿಕಾರಿ ದೇವಾನ್ಶ್ ಯಾದವ್ ಅವರು ಕೂಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.

Also Read : ಚಕ್ರವ್ಯೂಹದಂತಿರುವ ಈ ಕಾಡಿನೊಳಗೆ ಹೋದರೆ ಜೀವಂತವಾಗಿ ಮರಳುವುದು ತುಂಬಾ ಕಷ್ಟವಂತೆ!

ಈ ಹಿಂದೆ ಸ್ಯಾನ್ ಡಿಯಾಗೋದ ಸ್ಕ್ರಿಪ್ಪ್ಸ್ ಮರ್ಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ರಾಬರ್ಟೊ ಮಾರ್ಟಿನೆಜ್ ಎಂಬವರು ತನ್ನ ರೋಗಿಗಳಿಗೆ ಧೈರ್ಯ ತುಂಬಲೆಂದೇ ಈ ರೀತಿಯ ಪ್ರಯತ್ನ ಮಾಡಿದ್ದರು. ಇವರು ಕೂಡಾ ತಮ್ಮ ದಿರಿಸಿ ಮೇಲೆ ತನ್ನದೇ ಫೋಟೋ ಹಾಕಿದ್ದರು. ಇವರ ಈ ಪ್ರಯತ್ನವೂ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಚಾಂಗ್ಲಾಂಗ್ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ವೈದ್ಯರು ಕೂಡಾ ಇದೇ ರೀತಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ನಿಜಕ್ಕೂ ವೈದ್ಯಕೀಯ ತಂಡದ ಈ ಪ್ರಯತ್ನವನ್ನು ಮೆಚ್ಚಲೇಬೇಕು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ