ಆ್ಯಪ್ನಗರ

ಒಂದು ಪಕ್ಷಿಗಾಗಿ 40 ದಿನ ಕತ್ತಲೆಯಲ್ಲಿತ್ತು ಹಳ್ಳಿ! : ಇದು ಹೃದಯಸ್ಪರ್ಶಿ ಕತೆ

ಹಳ್ಳಿಯೊಂದು ಪಕ್ಷಿಯ ಒಂದು ಕುಟುಂಬಕ್ಕಾಗಿ 40 ದಿನ ಕತ್ತಲೆಯಲ್ಲಿ ಕಳೆದಿದೆ. ವಿದ್ಯುತ್ ದೀಪ ಹಾಕಿದರೆ ಈ ಹಕ್ಕಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಜನ ಇಂತಹ ನಿರ್ಧಾರಕ್ಕೆ ಬಂದಿದ್ದರು!

Vijaya Karnataka Web 26 Jul 2020, 10:10 am
ಇದು ಮಾನವೀಯತೆಯ ಹೃದಯಸ್ಪರ್ಶಿ ಕತೆ. ಈ ಕತೆ ಎಲ್ಲರಿಗೂ ಮಾದರಿ ಮತ್ತು ಸ್ಫೂರ್ತಿ. ಈ ಕತೆ ಕೇಳಿದರೆ ಎಂತಹವರ ಹೃದಯವೂ ತುಂಬಿ ಬರುತ್ತದೆ.
Vijaya Karnataka Web Image by Suresh Babu Guddanti from Pixabay
| Representative image | Image by Suresh Babu Guddanti from Pixabay


ತಮಿಳುನಾಡಿನ ಹಳ್ಳಿಯೊಂದು ಸುಮಾರು 40 ದಿನಗಳಿಂದ ಕತ್ತಲೆಯಲ್ಲಿತ್ತು...! ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಈ ಊರಿನಲ್ಲಿ ಬೀದಿ ದೀಪಗಳು ಉರಿದೇ ಇಲ್ಲ...! ಅರೇ ಹಳ್ಳಿ ಎಂದ ಮೇಲೆ ಕರೆಂಟ್ ಸಮಸ್ಯೆ ಇದ್ದದ್ದೇ, ಇದರಲ್ಲಿ ಹೊಸದೇನಿದೆ ಎಂದು ನೀವು ಹೇಳಬಹುದು. ಆದರೆ, ಇಂಟ್ರೆಸ್ಟಿಂಗ್ ವಿಷಯ ಏನೆಂದರೆ ಇಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ. ಲೋಡ್‌ ಶೆಡ್ಡಿಂಗ್ ಕೂಡಾ ಇರಲಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಬೀದಿ ದೀಪ ಹಾಕದೇ ಇರುವ ಈ ನಿರ್ಧಾರಕ್ಕೆ ಬಂದಿದ್ದರು. ಇದರ ಹಿಂದಿನ ಕಾರಣ ಕೇಳಿದರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡುತ್ತದೆ, ಮನಸ್ಸು ಹಿತವಾಗುತ್ತದೆ. ಯಾಕೆಂದರೆ, ಒಂದು ಪಕ್ಷಿಗಾಗಿ ಊರಿನ ಜನರು ಇಂತಹ ನಿರ್ಧಾರ ಕೈಗೊಂಡಿದ್ದರು...!

Also Read : ಮಗಳನ್ನು ಸೈಕಲ್‌ನಲ್ಲಿ 4000 ಕಿ.ಮೀ ದೂರ ಪ್ರವಾಸ ಕರೆದೊಯ್ದ ತಂದೆ : ಇದು ಹೃದಯಸ್ಪರ್ಶಿ ಕತೆ

| Representative image | Image by Bishnu Sarangi from Pixabay


ತಮಿಳುನಾಡಿನ ಶಿವಗಂಗ ಜಿಲ್ಲೆಯ ಪೊಥಕುಡಿ ಎಂಬ ಪುಟ್ಟ ಹಳ್ಳಿಯ ಜನರ ಹೃದಯಸ್ಪರ್ಶಿ ಕತೆ ಇದು. ಈ ಜನರು ಒಂದು ತಿಂಗಳಿಗೂ ಹೆಚ್ಚು ಕಾಲ ಬೀದಿ ದೀಪವನ್ನು ಹಾಕಿಯೇ ಇಲ್ಲ. ಯಾಕೆಂದರೆ, `ಇಂಡಿಯನ್ ರಾಬಿನ್' ಎಂಬ ಪುಟ್ಟ ಹಕ್ಕಿ ಹಳ್ಳಿಯ ಮುಖ್ಯ ಸ್ವಿಚ್‌ಬೋರ್ಡ್‌ನಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿತ್ತು. ಹೀಗಾಗಿ, ಪಕ್ಷಿ ಮತ್ತು ಅದರ ಕುಟುಂಬವನ್ನು ಉಳಿಸಲು ಈ ಜನರು ಕತ್ತಲೆಯಲ್ಲಿ ಇರುವ ನಿರ್ಧಾರಕ್ಕೆ ಬಂದಿದ್ದರು. ಹಳ್ಳಿಗಳ ದೀಪಗಳನ್ನು ಸ್ವಿಚ್ ಆಫ್ ಮಾಡುವ ಹಿಂದಿನ ಸಂಪೂರ್ಣ ಆಲೋಚನೆ ರೂವಾರಿ ಎ ಕರುಪ್ಪುರಾಜ ಎಂಬ 20 ವರ್ಷದ ಕಾಲೇಜು ವಿದ್ಯಾರ್ಥಿ.

Also Read : ನೀರುಕುದುರೆಗಳು ಬಾಯ್ತೆದು ಕದನಕ್ಕೆ ನಿಂತರೆ ನೋಡುವುದಕ್ಕೇ ಭಯವಾಗುತ್ತದೆ...!

ಇಲ್ಲಿದೆ ಹಕ್ಕಿಯ ಗೂಡಿನ ವೈರಲ್ ಫೋಟೋ :


ಕರುಪ್ಪುರಾಜ ಮನೆಯ ಪಕ್ಕವೇ ಹಳ್ಳಿಯ ಬೀದಿ ದೀಪದ ಸಾಮಾನ್ಯ ಸ್ವೀಚ್ ಬೋರ್ಡ್ ಇದೆ. ಈ ಸ್ವೀಚ್‌ ಬೋರ್ಡಿನಲ್ಲಿ ಹಕ್ಕಿ ಗೂಡು ಕಟ್ಟುತ್ತಿದ್ದನ್ನು ಕರುಪ್ಪುರಾಜ ಗಮನಿಸಿದ್ದರು. `ಲಾಕ್‌ಡೌನ್ ಪ್ರಾರಂಭವಾದಾಗ ಹಕ್ಕಿ ಒಣಹುಲ್ಲು ಮತ್ತು ಎಲೆಗಳಿಂದ ಪೆಟ್ಟಿಗೆಯನ್ನು ತುಂಬುತ್ತಿರುವುದನ್ನು ನಾನು ನೋಡಿದೆ. ಬಳಿಕ ನಾನು ಅದನ್ನು ನೋಡಿದಾಗ, ಮೂರು ಸಣ್ಣ ಮೊಟ್ಟೆಗಳು ಇದ್ದವು' ಎಂದು ಹೇಳಿದ್ದಾರೆ.

Also Read : ಮೊಲವನ್ನು ಬೆನ್ನಟ್ಟುವ ಶ್ವಾನಗಳು!: ಹಾಲಿವುಡ್ ಫಿಲಂ ಸೀನ್‌ನಷ್ಟೇ ಅದ್ಭುತವಾಗಿದೆ ಡ್ರೋನ್ ದೃಶ್ಯ!

ಹೀಗೆ ಹಕ್ಕಿಯ ಗೂಡನ್ನು ಕಂಡ ಕರಪ್ಪುರಾಜ ಈ ಪಕ್ಷಿಯ ಸಂಸಾರವನ್ನು ಉಳಿಸುವ ನಿರ್ಧಾರಕ್ಕೆ ಬಂದಿದ್ದರು. ಅಲ್ಲದೆ, ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದ ಇವರು ಹಳ್ಳಿಯ ಯುವಕರಲ್ಲಿ ವಿಷಯ ತಿಳಿಸಿದರು. ವಾಟ್ಸಾಪ್ ಗ್ರೂಪ್ ಮಾಡಿ ಪಕ್ಷಿಯ ಕುಟುಂಬ ರಕ್ಷಣೆಯ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಗ್ರೂಪ್‌ನಲ್ಲಿದ್ದ 35 ಸದಸ್ಯರು ಸಮ್ಮತಿ ಸೂಚಿಸಿದ್ದರು. ಮೊಟ್ಟೆಯಿಂದ ಮರಿಗಳು ಹೊರಬರುವ ತನಕ ಜಾಗರೂಕತೆಯಿಂದ ಹಕ್ಕಿ ಗೂಡನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಇವರೆಲ್ಲಾ ನಿರ್ಧರಿಸಿದ್ದರು. ಮುಂದೆ ಇದ್ದದ್ದು ಊರಿನ ಜನರ ಮನವೊಲಿಸುವ ಕಾರ್ಯ. ಈ ಹಳ್ಳಿಯಲ್ಲಿ ಸುಮಾರು 100 ಜನರಿದ್ದಾರೆ. ಹೀಗಾಗಿ, ಎಲ್ಲರ ಮನವೊಲಿಕೆಗೆ ಈ ಯುವಕರು ಮುಂದಡಿ ಇಟ್ಟಿದ್ದರು. ಇದಕ್ಕೆ ಬೆಂಬಲವಾಗಿ ನಿಂತ ಪಂಚಾಯತ್ ಅಧ್ಯಕ್ಷೆ ಎಚ್ ಕಲೀಶ್ವರಿ ಊರಿನ ಎಲ್ಲರೂ ಬೀದಿ ದೀಪ ಹಾಕದೇ ಇರುವ ನಿಯಮವನ್ನು ಪಾಲಿಸಬೇಕು ಎಂದು ಜನರಿಗೆ ತಿಳಿ ಹೇಳಿದ್ದರು. ಇದಕ್ಕೆ ಜನ ಕೂಡಾ ಸಮ್ಮತಿಸಿದ್ದರು. ಹೀಗಾಗಿ, ಹಕ್ಕಿಯ ಕುಟುಂಬ ನಿಶ್ಚಿಂತೆಯಿಂದ ಇತ್ತು.

ಸದ್ಯ ಈ ಹಳ್ಳಿ ಜನರ ಈ ಹೃದಯವಂತಿಕೆಗೆ ಇಡೀ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ಈ ಹಳ್ಳಿಯ ಮುಗ್ಧ ಜನರ ಪ್ರಯತ್ನವನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ