ಆ್ಯಪ್ನಗರ

ಭಾರೀ ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು 2 ಕಿಮೀ ಸಾಗಿದ ಯೋಧರು : ಹೃದಯಸ್ಪರ್ಶಿ ವಿಡಿಯೋ ವೈರಲ್

ಯೋಧರ ಹೃದಯವಂತಿಕೆಯ ಕಾರ್ಯ ಈಗ ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 8 Jan 2021, 12:49 pm
ಯೋಧರು ಎಂದರೆ ನಮ್ಮ ಹೆಮ್ಮೆ. ಯೋಧರು ಎಂದರೆ ನಮ್ಮ ರಕ್ಷಕರು. ಯೋಧರು ಎಂದರೆ ನಮ್ಮ ಸ್ಫೂರ್ತಿ. ತನ್ನ ಕುಟುಂಬ, ಮನೆಯನ್ನು ಬಿಟ್ಟು ಗಡಿಯಲ್ಲಿ ದೇಶ ಸೇವೆ ಮಾಡುವ ಈ ವೀರರ ಕಾರ್ಯವನ್ನು ಎಷ್ಟು ಕೊಂಡಾಡಿದರೂ ಅದು ಕಡಿಮೆಯೇ. ಇಂತಹ ನಮ್ಮ ವೀರರ ಹೃದಯವಂತಿಕೆಯ ಕಾರ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಸದ್ಯ ಅಂತಹದ್ದೇ ಮತ್ತೊಂದು ಹೃದಯಸ್ಪರ್ಶಿ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ.
Vijaya Karnataka Web indian army
| Screengrab from video | Courtesy : @proudhampur/Twitter


ಇದು ಭಾರೀ ಹಿಮದ ನಡುವೆ ಯೋಧರು ಗರ್ಭಿಣಿಯನ್ನು ಆಸ್ಪತ್ರೆಗೆ ಹೊತ್ತು ಸಾಗುವ ದೃಶ್ಯ. ಕಾಶ್ಮೀರ ಕಣಿವೆಯಲ್ಲಿ ಈಗ ಭಾರೀ ಹಿಮಪಾತವಾಗುತ್ತಿದೆ. ಪರಿಣಾಮ ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಜನರ ಈ ಕಷ್ಟಕ್ಕೆ ಸೈನಿಕರು ಸ್ಪಂದಿಸುತ್ತಿದ್ದು ಸಕಾಲದಲ್ಲಿ ನೆರವಾಗುತ್ತಿದ್ದಾರೆ. ಅಂತೆಯೇ, ಕುಪ್ವಾರಾದಲ್ಲಿ ತುಂಬು ಗರ್ಭಿಣಿಯನ್ನು ಸೈನಿಕರು ಭಾರೀ ಹಿಮದ ನಡುವೆ ಸುಮಾರು ಎರಡು ಕಿಮೀ ಹೊತ್ತು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರು ಕರಲ್ಪುರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.


Also Read : ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ವಿಮಾನದ ಎಲ್ಲಾ ಸೀಟುಗಳನ್ನು ಬುಕ್ ಮಾಡಿದ ವ್ಯಕ್ತಿ!

ಮಂಗಳವಾರ ಕುಪ್ವಾರಾದ ಕರಲ್ಪುರದಲ್ಲಿರುವ ಭಾರತೀಯ ಸೇನೆಯ ಕಂಪೆನಿ ಆಪರೇಟಿಂಗ್ ಬೇಸ್ (ಸಿಒಬಿ)ಗೆ ಫರ್ಕಿಯನ್ ಗ್ರಾಮದ ನಿವಾಸಿ ಮಂಜೂರ್ ಅಹ್ಮದ್ ಶೇಖ್ ಅವರಿಂದ ಕರೆಯೊಂದು ಬಂದಿತ್ತು. `ತನ್ನ ಪತ್ನಿ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿದೆ' ಎಂದು ಶೇಖ್ ಮನವಿ ಮಾಡಿದ್ದರು.

Also Read : ಕಳ್ಳನಿಗೆ ಕಾಡಿದ `ಹಿಮ'! : ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ `ಸಿಕ್ಕಿಬಿದ್ದ' ಚೋರ! : ಇಲ್ಲಿದೆ ವಿಡಿಯೋ

ಶೇಖ್ ಕರೆ ಮಾಡಿದಾಗ ನಿರಂತರ ಹಿಮಪಾತವಾಗುತ್ತಿತ್ತು. ಈ ಹಿಮಪಾತ, ಪ್ರತಿಕೂಲ ಹವಾಮಾನದಿಂದಾಗಿ ವಾಹನ ಸಂಚಾರವೇ ಸಾಧ್ಯವಿರಲಿಲ್ಲ. ಈ ವೇಳೆ, ನಮ್ಮ ಹೆಮ್ಮೆಯ ಸೈನ್ಯ ಈ ಕುಟುಂಬದ ನೆರವಿಗೆ ಬಂದಿತ್ತು. ತಕ್ಷಣ ಇವರ ಮನೆಗೆ ಕೆಲವು ವೈದ್ಯಕೀಯ ಉಪಕರಣಗಳೊಂದಿಗೆ ಆಗಮಿಸಿದ ಸೈನಿಕರು ಬಳಿಕ ಈ ತುಂಬು ಗರ್ಭಿಣಿಯನ್ನು ಭಾರೀ ಹಿಮದ ನಡುವೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಸೈನಿಕರ ಮಾನವೀಯ ಸೇವೆಗೆ ಇವರ ಕುಟುಂಬ ಮತ್ತು ಸ್ಥಳೀಯಾಡಳಿತ ಧನ್ಯವಾದವನ್ನು ಅರ್ಪಿಸಿದೆ.


Also Read : ತನ್ನಂತೆ ಎರಡು ಕಾಲು ಇಲ್ಲದ ಮರಿಗೆ ನಡೆಯಲು ಕಲಿಸುವ ಶ್ವಾನ : ಅದ್ಭುತ ದೃಶ್ಯವಿದು

ತನಗೆ ಮಗ ಜನಿಸಿದ ಬಳಿಕ ಸಹಾಯ ಕೇಳಿದ್ದ ಶೇಖ್ ಅವರು ಕಂಪನಿ ಆಪರೇಷನ್ ಬೇಸ್‌ಗೆ ಬಂದು ಎಲ್ಲಾ ಸೈನಿಕರಿಗೂ ಸಿಹಿ ಹಂಚಿದ್ದರು. ಸದ್ಯ ಸೈನಿಕರ ಈ ಮಾನವೀಯ ಕಾರ್ಯದ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡಾ ನಮ್ಮ ಯೋಧರ ಗುಣಗಾನ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ