ಹಾಸ್ಯ ಕಲಾವಿದನಾಗಿ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ನಾಯಕನಾಗೂ ಸೈ ಎನಿಸಿಕೊಂಡವರು. ಕಳೆದ ಕೆಲವು ವರ್ಷಗಳಿಂದ ಕೋಮಲ್ ಕುಮಾರ್ ಚಿತ್ರರಂಗದಿಂದ ದೂರವಿದ್ದರು. ಈಗ 'ಕಾಲಾಯ ನಮಃ' ಚಿತ್ರದ ಮೂಲಕ ಕೋಮಲ್ ಕುಮಾರ್ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.
"ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಅಂದಿದ್ದರು. ಹಾಗಾಗಿ ಐದು ವರ್ಷದಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದೆ. ಈಗ ಕಾಲ ಕೂಡಿ ಬಂದಿದೆ. 'ಕಾಲಾಯ ನಮಃ' ಶುರುವಾಗಿದೆ. ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀಯ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ' ಎಂದು ಕೋಮಲ್ ಕುಮಾರ್ ವಿವರಣೆ ನೀಡಿದರು.