ಹೊಸದಿಲ್ಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿತ್ತು. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 74ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗಿದ್ದು, ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಗಮನಸೆಳೆದವು. ಅದರಲ್ಲೂ ಕರ್ನಾಟಕದ ಸ್ತಬ್ಧಚಿತ್ರ ಎಲ್ಲರ ಗಮನಸೆಳೆಯಿತು. ರಾಜ್ಯದ ಮೂವರು ಮಹಿಳಾ ಸಾಧಕಿಯರ ಅಸಾಧಾರಣ ಸಾಧನೆಗಳು ದಿಲ್ಲಿಯ ಕರ್ತವ್ಯ ಪಥದಲ್ಲಿ ಅನಾವರಣ ಆದವು.
ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಲಕ್ಕಿ ಹಾಗೂ 'ವೃಕ್ಷ ಮಾತೆ' ಸಾಲುಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಒಳಗೊಂಡ ಸ್ತಬ್ಧಚಿತ್ರ ಕರ್ತವ್ಯಪಥದಲ್ಲಿ 'ನಾರಿ ಶಕ್ತಿ'ಯನ್ನು ಅನಾವರಣಗೊಳಿಸಿತ್ತು. 17 ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು 6 ವಿವಿಧ ಮಂತ್ರಾಲಯಗಳ ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಸಾಗಿದವು. ಹೊಸ ಆಯ್ಕೆ ಪದ್ಧತಿಯಂತೆ ಈ ಬಾರಿ ಸ್ತಬ್ಧಚಿತ್ರಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು.
ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಜಾರ್ಖಂಡ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು. ಇನ್ನು, ಜಮ್ಮು ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ ಮತ್ತು ದಿಯು & ದಮನ್ ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಯಾವ ರಾಜ್ಯದ ಸ್ತಬ್ಧಚಿತ್ರ ಹೇಗಿತ್ತು ಎಂಬುದನ್ನು ಕೆಳಗಿನ ಫೋಟೋಗಳಲ್ಲಿ ನೋಡಿ.
(ಫೋಟೋ ಕೃಪೆ: ಡಿಡಿ ನ್ಯೂಸ್)